ಮಾಧ್ಯಮದ ಅವಸರಕ್ಕೆ ಮೋದಿ ಪಟ್ಟಾಭಿಷೇಕವಾಯ್ತೇ?

ಹಾಗೆ ನೋಡಿದರೆ, ಕಳೆದ ವಾರವಿಡೀ ಊರಿಗೆ ಮುಂಚೆ ಹೆಸರಿಟ್ಟಂತೆ, ಬಿಜೆಪಿಗಿಂತ ಹೆಚ್ಚಾಗಿ ಮಾಧ್ಯಮಗಳೇ ಹಠಕ್ಕೆ ಬಿದ್ದು ಮೋದಿಯನ್ನು ಬಲವಂತವಾಗಿ ತಂದು ವಧಾಸ್ಥಾನದಲ್ಲಿ ತಂದು ಕುಳ್ಳರಿಸಿತು. ಆದರೆ ಅತ್ತ ಕಡೆಯಿಂದ ಭಿನ್ನರಾಗದ ಹಠವಾಣಿ ಮೊಳಗಿತು. ಅದು ತೀರಾ ಅನಿರೀಕ್ಷಿತವಾಗಿತ್ತು.
ಮೋದಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಮಾಡತೊಡಗಿದ ಮಾಧ್ಯಮಗಳು, ಅಡ್ವಾಣಿ ಗೋವಾ ಕಾರ್ಯಕಾರಿಣಿಗೆ ಬರುವುದೇ ಇಲ್ಲ ಎಂದು ಬರೆದವು. ಕೊನೆಗೆ ತೀರಾ ಹಿರಿಯ ನಾಯಕನನ್ನು ಆ ಪರಿ ಅವಮಾನಿಸುವುದು ಸರಿಯಲ್ಲ ಎಂದು 'ಇಲ್ಲ ಅವ್ರಿಗೆ ಹೊಟ್ಟೆ ಸರಿಯಿಲ್ಲವಂತೆ. ಭಾನುವಾರ ಬಂದು ಮೋದಿಗೆ ಹಾರ ಹಾಕುತ್ತಾರೆ' ಎಂದು ಸಮಾಧಾನದ ಮಾತುಗಳನ್ನು ಹೇಳಿದವು.
ಆದರೆ ಗಮನಿಸಿ. ಇವು ಯಾವುವೂ ಕೇವಲ ಮಾಧ್ಯಮಗಳ ಸೃಷ್ಟಿಯಾಗಿರಲಿಲ್ಲ. ಬದಲಿಗೆ ಬಿಜೆಪಿ ಮಂದಿಯೇ ಸುದ್ದಿಗಳನ್ನು ತೇಲಿಬಿಡತೊಡಗಿದರು. ವ್ಯವಸ್ಥಿತವಾಗಿ ಮೋದಿಗೆ ಮಾಘಸ್ನಾನ ಮಾಡಿಸಿದರು. ಒಂದಾದನಂತರ ಒಂದು ದಾಳಗಳನ್ನು ಉರುಳಿಸತೊಡಗಿದರು. ಹಿರಿಯ ನಾಯಕನಿಗೆ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿದ್ದೇ ಆಗ. ಸಿಟ್ಟಿಗೆದ್ದ ಅಡ್ವಾಣಿ ರಾಜೀನಾಮೆ ಬಿಸಾಕಿದರು.
ಏನೋ ಮಾಡಲು ಹೋಗಿ...: ಹಾಗೆ ನೋಡಿದರೆ ಅಡ್ವಾಣಿಯನ್ನು ಮೂಲೆಗುಂಪು ಮಾಡುವ; ಮೋದಿಗೆ ಪಟ್ಟ ಕಟ್ಟುವ ಬಿಜೆಪಿಯೊಳಗಿನ 'ಅಂತರ್ಜಾಲ' ಜೋರಾಗಿಯೇ ಕೆಲಸ ಮಾಡಿದೆ. ಅದು ಕಳೆದ ನವೆಂಬರಿನಲ್ಲಿ ಗುಜರಾತಿನಿಂದಲೇ ಕನೆಕ್ಟ್ ಆಯಿತು. ಆಗಲೇ ಹಿರಿಯರು ಕೆಂಗಣ್ಣು ಬೀರಿದ್ದರು. ಆದರೆ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಾ ಕೊನೆಗೆ ನಿನ್ನೆ ಮಹಾಸ್ಫೋಟವಾಗಿದೆ.
ಇದಕ್ಕೆ ಕರ್ನಾಟಕ ಬಿಜೆಪಿ ಸಹ ಹೊರತಾಗಿರಲಿಲ್ಲ. ಕಾಣದ ಕೈಗಳು ಮೋದಿಗೆ ಮಣೆ ಹಾಕುವ ಯುದ್ಧೋತ್ಸಾಹದಲ್ಲಿ ವಿಚಿತ್ರ ಬ್ಯಾನರ್/ಫ್ಲೆಕ್ಸುಗಳನ್ನು ರಾಜಧಾನಿಯ ಪ್ರಮುಖ ಟ್ರಾಫಿಕ್ ಜಂಕ್ಷನ್ ಗಳಲ್ಲಿ ನೇತುಹಾಕಿದವು.
ಗೋವಾ ಕಾರ್ಯಕಾರಣಿಗೆ ಎಲ್ಲಿಲ್ಲದ ಮಹತ್ವ ನೀಡಿದವು. ಮಾಧ್ಯಮಗಳು ಸ್ಪರ್ಧೆಗೆ ಬಿದ್ದು ಗೋವಾ-ಮೋದಿ-ಬಿಜೆಪಿ ಎಂದು ಜಪಿಸತೊಡಗಿದವು. ಇದರಿಂದ ಸಿಟ್ಟಿಗೆದ್ದ ಅಡ್ವಾಣಿ... ತಾಜಾ ವರದಿಗಳ ಪ್ರಕಾರ 24 ಗಂಟೆಗಳ ತರುವಾಯ ಅಡ್ವಾಣಿ ಮತ್ತೆ ಬಿಜೆಪಿಯಲ್ಲಿ ಆಯಕಟ್ಟಿನ ಸ್ಥಾನಕ್ಕೆ ಮರಳಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ.












Click it and Unblock the Notifications