ಅಡ್ಡವಾಣಿ ಅಲ್ಲ; ಜೀವತುಂಬಿದ ಅಯ್ಯಪ್ಪನ್ ಕಥೆ ಕೇಳಿ

ಇಂದಿನ ನಿರಾಶಾದಾಯಕ ವಾತಾವರಣದಲ್ಲಿ ಇಂತಹ ಅಪರೂಪದ ಜೀವನಪಾಠ ಕಲಿಸಿದ, ಕುಟುಂಬದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊರುವುದು ಅಮದರೆ ಏನು ಎಂಬುದನ್ನು ತೋರಿಸಿಕೊಟ್ಟ ಆ ಯುವಕನಿಗೆ ನಮೋ ನಮಃ ಎನ್ನೋಣ!
ಕೇರಳದ ಕೊನ್ನಿ ಪ್ರದೇಶದಲ್ಲಿ ಅರಣ್ಯವಾಸಿಯಾಗಿರುವ ಅಯ್ಯಪ್ಪನ್ ಎಂಬ ಸಾಮಾನ್ಯ ಪ್ರಜೆ ಗರ್ಭದಲ್ಲಿರುವ ತನ್ನ ಕುಡಿಯನ್ನು ಸಾವಿನ ದವಡೆಯಿಂದ ಪಾರುಮಾಡಲು ಪತ್ನಿಯನ್ನು ಹೆಗಲ ಮೇಲೆ ಹೊತ್ತು ಒಂದಲ್ಲ ಎರಡಲ್ಲ ಬರೋಬ್ಬರಿ 40 ಕಿಮೀ ದೃಢಹೆಜ್ಜೆಗಳನ್ನು ಹಾಕಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾರ್ಗದರ್ಶಕನಾಗಿದ್ದಾನೆ.
ಇರಲಿ, ದುರದೃಷ್ಟವಶಾತ್ ಮಗು ಸಾವನ್ನಪ್ಪಿದೆ. ಆದರೆ ಆತನಲ್ಲಿದ್ದ ಮಾನವ ಸಹಜ ಅಂತಃಕರಣವನ್ನು ಕಣ್ಬಿಟ್ಟು ನೋಡಿದಾಗ ಕಚ್ಚಾಡುತ್ತಿರುವ ಇಂದಿನ ಮನುಷ್ಯಕೋಟಿಗೆ ಕಣ್ಣುತೆರೆಸುವಂತಾಗಿದೆ. ಅದರಲ್ಲೂ ತಾನೇ ಬೆಳೆಸಿದ ಕೂಸಿಗೆ ಮರ್ಮಾಘಾತ ನೀಡಿರುವ, ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವ ಪಿತಾಮಹನ ಮುಂದೆ ಮಗು ಸತ್ತರೂ ತಾನು ಮಹಾಪಿತನಾಗಿ (ಅಂದರೆ ತಾತಾನಾ ಎಂದು ಕೊಂಕು ತೆಗೆಯಬೇಡಿ) ಕಂಗೊಳಿಸಿದ್ದಾನೆ.
ಇದೆಲ್ಲ ಇರಲಿ ಮಹಾಪಿತ ಅಯ್ಯಪ್ಪನ್ ಅಸಲಿ ಕಥೆಯೇನು ನೋಡೋಣ. ಕೇರಳ ಕೊಟ್ಟಾಯಂನ ಕೊನ್ನಿ ಭಾಗದಲ್ಲಿ ದಟ್ಟ ಕಾನನದ ಸರಹದ್ದಿನಲ್ಲಿ ಆಸ್ಪತ್ರೆಗಳಿಲ್ಲದ ಕಾರಣ ಅಯ್ಯಪ್ಪನ್ ತನ್ನ ಪತ್ನಿ, ಏಳು ತಿಂಗಳ ಗರ್ಭಿಣಿ ಸುಧಾಳನ್ನು ಹೆಗಲ ಮೇಲೇರಿಸಿಕೊಂಡು ಕೊಟ್ಟಾಯಂ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ man proposes god disposes ಎಂಬಂತೆ ಆತನ ಪ್ರಯತ್ನಗಳು ಮಣ್ಣುಪಾಲು ಆಗಿವೆ. ಅಂದರೆ ದಂಪತಿಯ ಮಗುವನ್ನು ನಿಷ್ಕಾರುಣ್ಯದ ಭಗವಂತ ಕಿತ್ತುಕೊಂಡಿದ್ದಾನೆ. ದಂಪತಿ ಶೋಕ ಸಾಗರದಲ್ಲಿ ಮುಳುಗಿದ್ದಾರೆ.
'ರಕ್ತದೊತ್ತಡ ಹೆಚ್ಚಾದ ಕಾರಣ ಸುಧಾ ಆರೋಗ್ಯ ಹದಗೆಟ್ಟಿತ್ತು. ಮನೆಯಲ್ಲಿ ಬಡತನ ಹೊದ್ದು ಮಲಗಿತ್ತು. ಕಿಸೆಯಲ್ಲಿ ಬಿಡಿಗಾಸಿರಲಿಲ್ಲ. ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವಾಹನ ಸಿಗಲಿಲ್ಲ. ಕೊನೆ ಪ್ರಯತ್ನ ಎಂಬಂತೆ ಕಳೆದ ಮಂಗಳವಾರ ಆಕೆಯನ್ನು ಹೆಗಲ ಮೇಲೆ ಕೂರಿಸಿಕೊಂಡು ಆಸ್ಪತ್ರೆ ಕಡೆಗೆ ಮುನ್ನುಗ್ಗಿದೆ. 40 ಕಿಮೀ ಸಾಗಿದ ನಂತರ ಜೀಪೊಂದರ ನೆರವಿನಿಂದ ಪತನಂತಿಟ್ಟ ಆಸ್ಪತ್ರೆಗೆ ಗರ್ಭಿಣಿಯನ್ನು ದಾಖಲಿಸಲಾಯಿತು. ಅಲ್ಲಿಂದ ಮುಂದೆ ಆಕೆಯನ್ನು ಕೊಟ್ಟಾಯಂ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆಕೆಯ ದೇಹಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ವೈದ್ಯರ ಪ್ರಯತ್ನದ ಹೊರತಾಗಿಯೂ ಮಗು ಸಾವನ್ನಪ್ಪಿದೆ' ಎಂದು ಅಯ್ಯಪ್ಪನ್ ಗೋಳಾಡಿದ್ದಾನೆ.
ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣಿಸುತ್ತಿದೆ. ಮಗುವನ್ನು ಕಿತ್ತುಕೊಂಡ ಅದೇ ಭಗವಂತ, ಅಯ್ಯಪ್ಪನ್ ಮುಂದೆ ಸೋತು ಆತನ ಪತ್ನಿಯನ್ನಾದರೂ ಉಳಿಸಿಹೋಗಿದ್ದಾನೆ. ಇರಲಿ ನವದಂಪತಿ ಮತ್ತೆ ಬದುಕು ಕಟ್ಟಿಕೊಳ್ಳುವಂತಾಗಲಿ.












Click it and Unblock the Notifications