ಆಧಾರ್ ನೋಂದಣಿ ಮತ್ತಷ್ಟು ಸುಲಭ
ಬೆಂಗಳೂರು ನಗರದಲ್ಲಿ ಉದ್ಯೋಗಕ್ಕೆ ತೆರಳುವ ಜನರು ಹೆಚ್ಚು, ಇವರು ಸಮಯ ಸಿಗುವುದಿಲ್ಲ. ಆಧಾರ್ ಗಾಗಿ ಗಂಟೆಗಟ್ಟಲೇ ನೋಂದಣಿ ಕೇಂದ್ರದ ಮುಂದೆ ನಿಲ್ಲಬೇಕು ಎಂದು ದೂರುತ್ತಿದ್ದರು. ಈ ಸಮಸ್ಯೆ ನಿವಾರಿಸಲು ಪೂರ್ವ ನಿಗದಿ ನೋಂದಣಿ ಕೇಂದ್ರ ಸ್ಥಾಪಿಸಲಾಗುತ್ತದೆ.
ಸರ್ಕಾರದ ಇ - ಆಡಳಿತ ಕೇಂದ್ರ (ಸಿಇಜಿ) ಇಂತಹ ಕೇಂದ್ರಳನ್ನು ನಗರದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಿದೆ. ಮಲ್ಲೇಶ್ವರಂ, ಕಂಠೀರವ ಕ್ರೀಡಾಂಗಣದ ಸಮೀಪ ಸ್ಥಳ ಗುರುತಿಸಲಾಗಿದ್ದು, ಜೂ 15ರ ನಂತರ ಈ ಸ್ಥಳಗಳಲ್ಲಿ ಆಧಾರ್ ನೋಂದಣಿ ಕಚೇರಿ ಪ್ರಾರಂಭವಾಗಲಿದೆ.
ಏನಿದು ವ್ಯವಸ್ಥೆ : ಆಧಾರ್ ಅರ್ಜಿದಾರರು ಆನ್ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಬಹುದ. 15 ನಿಮಿಷಗಳ ಮೊದಲು ನೋಂದಣಿ ಕೇಂದ್ರಕ್ಕೆ ತೆರಳಿ, ನಿಮ್ಮ ವಿವರಗಳನ್ನು ನೀಡಿ, ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಸರು ನೋಂದಾವಣೆ ಹೇಗೆ : www.karunadu.gov.in/nammaaadhaar/home ವೆಬ್ ಸೈಟ್ ಗೆ ಭೇಟಿ ನೀಡಿ ಸಾರ್ವಜನಿಕರು ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಹೆಸರು, ವಯಸ್ಸು, ಮೊಬೈಲ್ ನಂ ಮುಂತಾದ ಮಾಹಿತಿಗಳನ್ನು ನೀಡಬೇಕು.
ಪೂರ್ವನಿಗದಿಯ ಮಾಹಿತಿಯು ನಿಮಗೆ ಎಸ್ಎಂಎಸ್ ಮತ್ತು ಇ ಮೇಲ್ ರೂಪದಲ್ಲಿ ಬರಲಿದೆ. ಅರ್ಜಿದಾರರು ಈ ಮಾಹಿತಿಯನ್ನು ಪ್ರಿಂಟ್ ಔಟ್ ತೆಗೆದುಕೊಂಡು, ನಿಗದಿಪಡಿಸಿದ ಆಧಾರ್ ಕೇಂದ್ರಗಳಿಗೆ ಹೋಗಬಹುದಾಗಿದೆ. ಸದ್ಯ ಈ ಯೋಜನೆ ಪ್ರಾಥಮಿಕ ಹಂತದಲ್ಲಿದ್ದು, ಜೂನ್ 15ರ ನಂತರ ಪ್ರಾರಂಭವಾಗಲಿದೆ. (ಆನ್ ಲೈನ್: ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ ಹೇಗೆ)
ಎಷ್ಟು ಕೇಂದ್ರಗಳು : ಆರಂಭಿಕ ಹಂತದಲ್ಲಿ ನಗರದಲ್ಲಿ ಐದು ಪೂರ್ವನಿಗದಿ ಆಧಾರ್ ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಇ ಆಡಳಿತ ಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಡಿ.ಎಸ್.ರವೀಂದ್ರ ಹೇಳಿದ್ದಾರೆ. ಮಲ್ಲೇಶ್ವರಂ ಮತ್ತು ಕಂಠೀರವ ಕ್ರೀಡಾಂಗಣದ ಸಮೀಪ ಮೊದಲ ಕೇಂದ್ರಗಳು ಆರಂಭವಾಗಲಿವೆ.
ರಾಜ್ಯದಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಇತರ ಕೆಲವು ನಗರಗಳಲ್ಲೂ ಈ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.