ಭ್ರಷ್ಟರಿಗೆ ಬಿಸಿ ಮುಟ್ಟಿಸಲು ಲೋಕಾಯುಕ್ತರು ಸಜ್ಜು
ಬೆಂಗಳೂರು, ಜೂ. 5 : ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ರಾಜ್ಯವನ್ನು ಭ್ರಷ್ಟಾಷಾರ ಮುಕ್ತವಾಗಿಸಲು ಲೋಕಾಯುಕ್ತ ವೈ.ಭಾಸ್ಕರರಾವ್ ಯೋಜನೆ ರೂಪಿಸಿದ್ದಾರೆ. ರಾಜ್ಯದ ಎಲ್ಲಾ ಲೋಕಾಯುಕ್ತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಭ್ರಷ್ಟರ ವಿರುದ್ಧದ ಕಾರ್ಯಚರಣೆ ಬಗ್ಗೆ ನಿರ್ದೇಶನಗಳನ್ನು ನೀಡಿದ್ದಾರೆ.
ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ನ್ಯಾ.ಭಾಸ್ಕರರಾವ್, ಎಲ್ಲಾ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಮಂಗಳವಾರ ಮಹತ್ವದ ಸಭೆ ನಡೆಸಿದರು. ಸಂಸ್ಥೆಯ ಕಾರ್ಯ ವೈಖರಿ ಹೇಗಿರಬೇಕು ಎಂದು ಅವರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಾಗರೀಕರಿಗೆ ಲೋಕಾಯುಕ್ತ ಸಂಸ್ಥೆಯ ಬಗ್ಗೆ ನಂಬಿಕೆ ಹುಟ್ಟಬೇಕು ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಭಯವಿರಬೇಕು ಹಾಗೆ ಕೆಲಸ ನಿರ್ವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಂಸ್ಥೆಯಲ್ಲಿ ಮಾಹಿತಿ ಸೋರಿಕೆ ಆಗುವುದನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಲೋಕಾಯುಕ್ತರು ನಡೆಸಿದ ಸಭೆಯಲ್ಲಿ ಉಪ ಲೋಕಾಯುಕ್ತರಾದ ನ್ಯಾ.ಎಸ್.ಬಿ.ಮಜಗೆ, ನ್ಯಾ, ಸುಭಾಷ್ ಆಡಿ, ಲೋಕಾಯುಕ್ತ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ನ್ಯಾಯಧೀಶರು ಮತ್ತು ಸರ್ಕಾರಿ ಅಭಿಯೋಜಕರು ಪಾಲ್ಗೊಂಡಿದ್ದರು. ಸಭೆಯ ವಿವರಗಳು ಕೆಳಗಿನಿಂತಿವೆ.

ಜನರಿಗೆ ನಂಬಿಕೆ ಬರಬೇಕು
ಲೋಕಾಯುಕ್ತ ಸಂಸ್ಥೆ ಜನರಿಗೆ ನಂಬಿಕೆ ಬರುವಂತೆ ಕಾರ್ಯ ನಿರ್ವಹಿಸಬೇಕು. ದಾಖಲಾದ ಖಾಸಗಿ ದೂರುಗಳನ್ನು ಇಲಾಖೆಯ ಅಧಿಕಾರಿಗಳೇ ಸಂಧಾನದ ಮೂಲಕ ಪರಿಹರಿಸಲು ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಭ್ರಷ್ಟರಿಗೆ ಸಂಸ್ಥೆಯ ಅಧಿಕಾರಿಗಳನ್ನು ಕಂಡರೆ ಭಯ ಉಂಟಾಗಬೇಕು ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

ಪ್ರಕರಣಗಳ ತ್ವರಿತ ವಿಲೇವಾರಿ
2010 ಮತ್ತು 2011ನೇ ವರ್ಷದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಮೂರು ತಿಂಗಳಿನಲ್ಲಿ ವಿಲೇವಾರಿ ಮಾಡಬೇಕು. ಪ್ರತಿ ಅಧಿಕಾರಿಗಳು ಇದಕ್ಕಾಗಿ ಶ್ರಮ ವಹಿಸಿ ಕೆಲಸ ಮಾಡಬೇಕು. ಪಕ್ರರಣದ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಮಾಡಬಾರದು.

ಮಾಹಿತಿ ಸೋರಿಕೆ ಆದರೆ ಕಠಿಣ ಕ್ರಮ
ಇಲಾಖೆಯಲ್ಲಿನ ಗೌಪ್ಯ ಮಾಹಿತಿಗಳು ಸೋರಿಕೆ ಆಗಬಾರದು. ಆಮಿಷಗಳಿಗೆ ಬಲಿಯಾಗಿ ಅಥವ ಪ್ರಭಾವಕ್ಕೆ ಒಳಗಾಗಿ ಸಂಸ್ಥೆಯ ಮಾಹಿತಿ ಸೋರಿಕೆ ಮಾಡಿದರೆ, ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಖಾಲಿ ಹುದ್ದೆಗಳಿಗೆ ಶೀಘ್ರ ನೇಮಕಾತಿ
ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ಎಸ್ಪಿ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇವೆ. ಸರ್ಕಾರದ ಜೊತೆ ಮಾತುಕತೆ ನಡೆಸಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು. ಇದಕ್ಕಾಗಿ ಸಭೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

ತಡೆಯಾಜ್ಞೆ ಬಗ್ಗೆ ಪ್ರಮುಖ ಚರ್ಚೆ
ಲೋಕಾಯುಕ್ತ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದಲ್ಲಿ ನೀಡಿದ ಆದೇಶಗಳಿಗೆ ಮೇಲ್ಮಟ್ಟದ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ದೊರೆಯುತ್ತಿರುವುದರಿಂದ ತನಿಖೆಗೆ ಹಿನ್ನಡೆ ಉಂಟಾಗುತ್ತಿದೆ. ಆದ್ದರಿಂದ ತ್ವರಿತವಾಗಿ ತನಿಖೆ ಪೂರ್ಣಗೊಳಿಸುವ ಕುರಿತು ಮಹತ್ವದ ಚರ್ಚೆ ನಡೆದಿದೆ.

ಸರ್ಕಾರಕ್ಕೆ ವರದಿ
ಲೋಕಾಯುಕ್ತರ ನೇತೃತ್ವದಲ್ಲಿ ನಡೆದ ಸಭೆಯ ತೀರ್ಮಾನಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಸಂಸ್ಥೆಯ ಅಗತ್ಯಗಳನ್ನು ತಕ್ಷಣ ಪರಿಹಾರ ಮಾಡಲು ಒತ್ತಾಯಿಸಲು ಸಭೆ ನಿರ್ಣಯಿಸಿದೆ. ಸಭೆಯ ಪರಿಣಾಮಗಳೇನು, ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತರು ಶಾಕ್ ನೀಡುತ್ತಾರೆಯೇ ಎಂದು ಕಾದು ನೋಡಬೇಕು.












Click it and Unblock the Notifications