10 ಎಂಪಿ ಸೀಟು ಸಾಕೆಂದು ಶುಭನುಡಿದ ಕುಮಾರಸ್ವಾಮಿ
ಬೆಂಗಳೂರು, ಜೂನ್ 4- ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೆ ತಮ್ಮ ಪಕ್ಷವನ್ನು ಈಗಿನೀಂದಲೇ ಅಣಿಗೊಳಿಸುತ್ತಿದ್ದಾರೆ.
ನಿನ್ನೆ ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿದ ಕುಮಾರಸ್ವಾಮಿ, ಪಕ್ಷದ ಎಲ್ಲ ವರ್ಗದ ಮುಖಂಡರೂ ಜನರ ಕಷ್ಟ ಸುಖದಲ್ಲಿ ಭಾಗಿಯಾಗುವ ದೃಢ ಸಂಕಲ್ಪದೊಂದಿಗೆ ಲೋಕಸಭೆ ಚುನಾವಣೆಗೆ ಇಂದಿನಿಂದಲೇ ಅಣಿಯಾಗಬೇಕು ಎಂದು ಕರೆ ನೀಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಜನಾದೇಶ, ಹಲವು ಕ್ಷೇತ್ರಗಳಲ್ಲಿ ಪಕ್ಷದ ಗೆಲ್ಲುವ ಕುದುರೆಗಳು ಸೋತಿರುವುದು ನನ್ನ ಮೇಲೂ ಪರಿಣಾಮ ಬೀರಿತು. ಆದರೆ ಜನರ ವಿಶ್ವಾಸವನ್ನು ಹೆಚ್ಚುಗೊಳಿಸುವ ಕಾರ್ಯ ಆಗಬೇಕು. ಪ್ರತಿ ಕ್ಷೇತ್ರದಲ್ಲೂ ಪಕ್ಷಕ್ಕೆ ಆಗಿರುವ ಹಿನ್ನಡೆಯನ್ನು ಅರ್ಥೈಸಿಕೊಂಡು ಅದನ್ನು ಮೆಟ್ಟಿನಿಲ್ಲುವ ಕಾರ್ಯ ಆಗಬೇಕು ಎಂದು 'ಸಂಘಟನೆ: ಚಿಂತನ-ಮಂಥನ' ಸಭೆಯಲ್ಲಿ ಕಾರ್ಯಕರ್ತರಿಗೆ ಅವರು ಸೂಚಿಸಿದರು.
ಮುಂದಿನ ಲೋಕಸಭೆ ಚುನಾವಣೆ ನಮಗೆ ಅಗ್ನಿಪರೀಕ್ಷೆಯಾಗಿದ್ದು, ಪ್ರತಿಯೊಬ್ಬ ನಾಯಕ ಹಾಗೂ ಕಾರ್ಯಕರ್ತರು ವಿಧಾನಸಭೆ ಚುನಾವಣೆ ಸೋಲಿನಿಂದ ಧೃತಿಗೆಡದೆ ಅಣಿಯಾಗಬೇಕು. ನಮ್ಮ ರಾಜ್ಯಕ್ಕಾಗಿರುವ ಅನ್ಯಾಯಗಳನ್ನು ಸರಿಪಡಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಹೊರತಾದ ಪಕ್ಷಕ್ಕೆ ಜನಬೆಂಬಲ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನದಲ್ಲಿದ್ದು, ನಿಮ್ಮೆಲ್ಲರ ಅಭಿಮಾನ ಹಾಗೂ ನಿಮ್ಮ ಒತ್ತಾಸೆಯಾಗಿ ಕಾರ್ಯನಿರ್ವಹಿಸಲಿದ್ದೇವೆ. ವಿಧಾನಸಭೆ ಕಲಾಪದಲ್ಲಿ ಪ್ರತಿನಿತ್ಯವೂ ಭಾಗವಹಿಸಬೇಕು. ಸಭಾತ್ಯಾಗವೊಂದೇ ಗುರಿಯಾಗಬಾರದು. ಸರ್ಕಾರ ದಾರಿತಪ್ಪದಂತೆ ಕಾರ್ಯನಿರ್ವಹಿಸುವಂತೆ ಜೆಡಿಎಸ್ ಮಾಡುತ್ತದೆ ಎಂಬ ಜನರ ಭಾವನೆಗೆ ನಾವು ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜೆಡಿಎಸ್ ಶಾಸಕರಿಗೆ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಕನಿಷ್ಠ 15 ಕ್ಷೇತ್ರದಲ್ಲಿ ನಮ್ಮ ನಾಯಕರಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯದಿಂದ ನಾವು ಸೋಲು ಕಂಡಿದ್ದೇವೆ. ಇದರ ಬಗ್ಗೆ ನೀವೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿರಿಸಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಥಮ ಪಕ್ಷವಾಗಿ ಹೊರಹೊಮ್ಮಲು ಎಲ್ಲರೂ ಸಜ್ಜಾಗಿ, ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.












Click it and Unblock the Notifications