ಕೊಚ್ಚಿ : ಮಹಿಳೆ ಕೆಣಕಿದವನನ್ನು ಬಡಿದುಕೊಂದ ಜನರು

ಕೆಲವು ತಿಂಗಳ ಹಿಂದೆ ದುಬೈನಿಂದ ಮರಳಿದ್ದ ಆಂಟೋನಿ ಪ್ರಿಗೋ (27) ಸಾರ್ವಜನಿಕರ ಹೊಡೆತದಿಂದಾಗಿ ಮೃತಪಟ್ಟ ದುರ್ದೈವಿ. ಪನಾಗಢ್ ನ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ಸೋಮವಾರ ಮಹಿಳೆಯೊಬ್ಬಳ ಮನೆಗೆ ನುಗ್ಗಿ, ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣ ಆಂಟೋನಿ ಹಿಡಿದ ಸಾರ್ವಜನಿಕರು ಸಾಯುವಂತೆ ಆತನಿಗೆ ಥಳಿಸಿದ್ದಾರೆ.
ಪೊಲೀಸರ ಪ್ರಕಾರ ಆಂಟೋನಿ ಕೆಲವು ದಿನಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಸೋಮವಾರ ಬೆಳಗ್ಗೆ ವಿವಸ್ತ್ರನಾಗಿ ಬಡಾವಣೆಯ ನೀರಿನ ತೊಟ್ಟಿ ಬಳಿ ಸ್ನಾನ ಮಾಡಲು ಆಗಮಿಸಿದ್ದ. ಆದರೆ, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ತುಂಡು ಬಟ್ಟೆ ತೊಟ್ಟು ಪರಾರಿಯಾಗಿದ್ದ.
ಸಂಜೆ ಸುಮಾರು 5 ಗಂಟೆಯ ಹೊತ್ತಿನಲ್ಲಿ ಪುನಃ ಬಡಾವಣೆಯಲ್ಲಿ ಪ್ರತ್ಯಕ್ಷನಾದ ಆಂಟೋನಿ, ರಾಜೇಶ್ ಎಂಬುವವರ ಮನೆಗೆ ನುಗ್ಗಿದ್ದಾನೆ. ಮನೆಯ ಹೊರಗಡೆ ದೀಪ ಬೆಳಗುತ್ತಿದ್ದ ರಾಜೇಶ್ ತಾಯಿಯ ಮೇಲೆ ಏಕಾಏಕಿ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾನೆ.
ತಕ್ಷಣ ರಾಜೇಶ್ ಮತ್ತು ಸ್ಥಳೀಯರು ಆಂಟೋನಿಯನ್ನು ಹಿಡಿದು ಮಾರಣಾಂತಿಕವಾಗಿ ಥಳಿಸಿದ್ದಾರೆ. ನಂತರ ಫನಾಗಢ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಎರ್ನಾಕುಲಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಆಂಟೋನಿ ಮರಣ ಹೊಂದಿರುವುದಾಗಿ ದೃಡ ಪಡಿಸಿದ್ದಾರೆ.
ದುಬೈನಲ್ಲಿದ್ದ : ಆಂಟೋನಿ ದುಬೈನ ಸೂಪರ್ ಮಾರ್ಕೆಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಗ್ರಾಹಕರ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಕಂಪನಿಯವರು ಕೆಲಸ ಬಿಡಿಸಿದ್ದರು. ಇದರಿಂದ ಈತ ಕೆಲವು ದಿನಗಳ ಹಿಂದೆ ತವರಿಗೆ ಆಗಮಿಸಿದ್ದ.
ಕೆಲಸ ಕಳೆದುಕೊಂಡ ಈತ ಕುಟುಂಬದವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಒತ್ತಡದಿಂದಾಗಿ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಸೋಮವಾರ ಬಡಾವಣೆಯ ಮಹಿಳೆಯ ಮೇಲೆ ಹಲ್ಲೆ ಮಾಡಲು ಹೋಗಿ, ಸಾರ್ವಜನಿಕರಿಂದ ಒದೆ ತಿಂದು ಸಾವನ್ನಪ್ಪಿದ್ದಾನೆ.
ಮರಣೋತ್ತರ ಪರೀಕ್ಷೆ ನಂತರ ಆಂಟೋನಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಜೇಶ್, ಅವರ ಪುತ್ರ ಮೋಹನ್ ಸೇರಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications