ಯಡಿಯೂರಪ್ಪನ್ನ ವಾಪಸ್ ತನ್ನಿ: ವರಿಷ್ಠರಿಗೆ ಪತ್ರ ರವಾನೆ
ಮೈಸೂರು, ಜೂನ್ 4: ಬಿಜೆಪಿ ಪಕ್ಷದ ವರಿಷ್ಠರಷ್ಟೇ ಅಲ್ಲ ಶಾಸಕರು, ಪದಾಧಿಕಾರಿಗಳ ಮಟ್ಟದಲ್ಲೂ ಡ್ಯಾಮೇಜ್ ಕಂಟ್ರೋಲ್ ನಡೆಯುತ್ತಿದೆ. ಯಡಿಯೂರಪ್ಪ ಅವರಿಲ್ಲದ ಬಿಜೆಪಿ ಗತಿಯೇನಾಗಿದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ತಳಮಟ್ಟದಲ್ಲೂ ಚಟುವಟಿಕೆಗಳು ತೀವ್ರಗೊಂಡಿವೆ.
ನಿನ್ನೆ ಪಕ್ಷದ ಚಿಂತನಮಂಥನದಲ್ಲಿ ವೇದಿಕೆಯ ಮೇಲಿದ್ದ ನಾಯಕರನ್ನು ಶಾಸಕರೇ ತರಾಟೆಗೆ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ಪಕ್ಷದಲ್ಲೇ ಇದ್ದಿದ್ದರೆ ಪಕ್ಷ ಹೀನಾಯವಾಗಿ ಸೋಲುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಅವರನ್ನು ಪಲ್ಷಕ್ಕೆ ಮತ್ತೆ ಸೇರಿಸಿಕೊಳ್ಳಿ ಎಂದು ಶಾಸಕರು ನಿನ್ನೆ ರಂಪಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಅತ್ತ ಮೈಸೂರಿನ ಗೋ. ಮಧುಸೂಧನ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಡಿಯೂರಪ್ಪ ಅವರು ಪಕ್ಷಕ್ಕೆ ಬೇಕೇಬೇಕು. ಅವರನ್ನು ಮೊದಲು ವಾಪಸ್ ಕರೆತನ್ನಿ ಎಂದು ನೇರವಾಗಿ ವರಿಷ್ಠರಿಗೆ ಸಕಾರಣಸಹಿತ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ:
ಈಗಾಗಲೇ ಆರೆಸ್ಸೆಸ್ ಈ ನಿಟ್ಟಿನಲ್ಲಿ ಶೋಭಾ ಕರಂದ್ಲಾಜೆ ಮಧ್ಯಸ್ಥಿಕೆಯಲ್ಲಿ ಕಾರ್ಯಪ್ರವೃತ್ತವಾಗಿರುವುದು ತಿಳಿದ ವಿಚಾರವೇ. ಹೀಗಿರುವಾಗ 'ಬಿಜೆಪಿಗೆ ಚೈತನ್ಯ ತುಂಬುವ ಮನಸು ನಿಜಕ್ಕೂ ನಿಮಗೆ ಇದ್ದರೆ ನರೇಂದ್ರ ಮೋದಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿ. ಇದೇ ವೇಳೆ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿರುವ ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತನ್ನಿ' ಎಂದು ವಿಧಾನಪರಿಷತ್ ಸದಸ್ಯ ಗೋ ಮಧುಸೂದನ್ ಅವರು ಬಿಜೆಪಿ ವರಿಷ್ಠರಿಗೆ ಆಗ್ರಹಪೂರ್ವಕ ಪತ್ರ ಬರೆದಿದ್ದಾರೆ. ಮಧುಸೂಧನ್ ಅವರ ಈ ಪತ್ರ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ.

ಬಿಜೆಪಿಗೆ ಬಿಎಸ್ ವೈ ಅನಿವಾರ್ಯ ಪ್ರತಿಪಾದನೆ
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಉಂಟಾದ ಹಿನ್ನೆಲೆಯಲ್ಲಿ ಪಕ್ಷದ ಈಗಿನ ಸ್ಥಿತಿಗತಿ, ನಾಯಕರ ಆಂತರಿಕ ಕಚ್ಚಾ, ಹಾಗೂ ಪಕ್ಷದಲ್ಲಿ ಎದ್ದುಕಾಣುತ್ತಿರುವ ಯಡಿಯೂರಪ್ಪನವರ ಅನುಪಸ್ಥಿತಿ ಕುರಿತು ವಿವರಣೆ ನೀಡಿರುವ ಗೋಮಧು ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಬಿಎಸ್ ವೈ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅನಿವಾರ್ಯ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಿದ್ದರೆ ಯಡಿಯೂರಪ್ಪ ಅವರನ್ನು ಮತ್ತೆ ಕರೆತರುವುದು ಅನಿವಾರ್ಯ. ಯಡಿಯೂರಪ್ಪ ಬಿಜೆಪಿಯಲ್ಲಿ ಇದ್ದಿದ್ದರೆ ಮತ ಹಾಕುತ್ತೇವೆ ಎಂದು ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನಡೆದಿದ್ದ ಸಮೀಕ್ಷೆಯೊಂದರಲ್ಲಿ ಶೇ. 62ರಷ್ಟು ಮಂಧಿ ಅಭಿಪ್ರಾಯಪಟ್ಟಿದ್ದರು ಎಂಬುದು ಒಂದು ನಿದರ್ಶನವಷ್ಟೇ. ಇದು ಯಡಿಯೂರಪ್ಪ ಅವರ ತಾಕತ್ತನ್ನು ಎತ್ತಿ ತೋರಿಸುತ್ತದೆ.

ಕಚ್ಚಾಟ ಬಿಟ್ಟು ಎಚ್ಚೆತ್ತುಕೊಳ್ಳುವುದು ಒಳ್ಳೆಯದು
ನಾಯಕರು ಇನ್ನಾದರೂ ಕಚ್ಚಾಟ ಬಿಟ್ಟು ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎಂದು ಮಧುಸೂದನ್ ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಶೇ. 20ರಷ್ಟು ಮತ ಪಡೆದಿದೆ. ಆದರೆ ಕೇವಲ 4 ತಿಂಗಳ ಮುಂಚೆ ಹುಟ್ಟಿದ ಯಡಿಯೂರಪ್ಪ ನೇತೃತ್ವದ ಕೆಜೆಪಿ ಶೇ. 10ರಷ್ಟು ಮತ ಪಡೆದಿದೆ. ಇದನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು ಎಂದು ತಮ್ಮ ಪತ್ರದಲ್ಲಿ ಮಧುಸೂದನ್ ಒತ್ತಾಯಿಸಿದ್ದಾರೆ.

ಮೋದಿಯೇ ಉತ್ತರ
ಕಾಂಗ್ರೆಸ್ ಈಗ ಸಾಗುತ್ತಿರುವ ವೇಗ ನೋಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಒಂದೂ ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಈ ಬೆಳವಣಿಗೆಗಳಿಂದ ಬಿಜೆಪಿ ಕಾರ್ಯಕರ್ತರು ಮತ್ತಷ್ಟು ಹತಾಶರಾಗಿದ್ದಾರೆ. ಮತ್ತೆ ಯುವ ಕಾರ್ಯಕರ್ತರರಲ್ಲಿ ಉತ್ಸಾಹ ತುಂಬಬೇಕಿದ್ದರೆ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವುದೊಂದೇ ಉಳಿದ ಮಾರ್ಗ ಎಂದು ಮಧುಸೂದನ್ ತಮ್ಮ ತರ್ಕ ಮಂಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದಿರುವ ಮತಗಳ ಪ್ರಕಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 15 ಸಾವಿರ ಮತಗಳ ಮುನ್ನಡೆ ಇದೆ. ಉಳಿದೆಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಿದೆ. ಇದು ಮುಂದಿನ ಆಗುಹೋಗುಗಳ ದಿಕ್ಸೂಚಿ ಎಂದು ಮಧುಸೂದನ್ ಅಂಕಿ-ಸಂಖ್ಯೆಗಳೊಂದಿಗೆ ವಿವರಿಸಿದ್ದಾರೆ.












Click it and Unblock the Notifications