ಹೆತ್ತವರಿಂದ ಗೃಹಬಂಧನ : ಬೆಂಗಳೂರಿನಲ್ಲಿ ಅಮಾನುಷ ಘಟನೆ

ಮಲ್ಲೇಶ್ವರಂ ನಿವಾಸಿಗಳಾದ ರೇಣುಕಪ್ಪ ಮತ್ತು ಗೌರಮ್ಮ ತಮ್ಮ ಮಗಳು ಹೇಮಾವತಿ (35) ಪ್ರೀತಿ ಮಾಡಿದಳು ಎಂಬ ಕಾರಣಕ್ಕಾಗಿ ಅರೆನಗ್ನ ಸ್ಥಿತಿಯಲ್ಲಿ ಮನೆಯಲ್ಲಿ ಕೂಡಿ ಹಾಕಿದ್ದಳು. ನಾಲ್ಕು ವರ್ಷಗಳಿಂದ ಯುವತಿ ಕೊಠಡಿ ಬಿಟ್ಟು ಹೊರಗೆ ಬಂದಿಲ್ಲ. ಆಕೆಯ ಮಲ, ಮೂತ್ರದಿಂದ ಕೊಠಡಿ ಗಬ್ಬು ನಾರುತ್ತಿದ್ದರೂ, ಅಲ್ಲೇ ಕೂಡಿಹಾಕಿ ಅಮಾನವೀಯತೆ ಮೆರೆದಿದ್ದಾರೆ.
ಕೊಠಡಿಯಲ್ಲಿ ಬಂಧಿಯಾಗಿದ್ದ ಯುವತಿ ರಾತ್ರಿ ವೇಳೆ ಕಿರುಚಾಡುತ್ತಿದ್ದಳು. ಇದನ್ನು ಕೇಳಿಸಿಕೊಂಡ ಪಕ್ಕದ ಮನೆಯ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಇಂದು ಬೆಳಗ್ಗೆ ಮನೆಯ ಮೇಲೆ ದಾಳಿ ನಡೆಸಿದಾಗ, ಘಟನೆ ಬೆಳಕಿಗೆ ಬಂದಿದೆ.
ತೀವ್ರವಾಗಿ ಅಸ್ವಸ್ಥವಾಗಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವತಃ ಆರೋಗ್ಯ ಸಚಿವ ಯು.ಟಿ.ಖಾದರ್ ಯುವತಿಯ ಮನೆಗೆ ಆಗಮಿಸಿ, ಹೇಮಾವತಿಯನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಹೇಮಾವತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ, ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ. ಮ್ಯಾಥ್ಯೂ ವರ್ಗೀಸ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ನಿಮ್ಹಾನ್ಸ್ ಸುಪರಿಂಟೆಂಡೆಂಟ್ ಡಾ. ಸತೀಶ್ ಅವರು ಒನ್ಇಂಡಿಯಾಗೆ ತಿಳಿಸಿದರು.
ಬಂಧನದಲ್ಲಿದ್ದ ಹೇಮಾವತಿಗೆ ಊಟ ನೀಡುವುದು ಬಿಟ್ಟೆರೆ ಅವಳೊಂದಿಗೆ ಕುಟುಂಬದವರು ಮಾತುಕತೆ ಸಹ ನಡೆಸುತ್ತಿರಲಿಲ್ಲ. ಹೇಮಾವತಿ ಇದ್ದ ಕೊಠಡಿಯನ್ನು ಶುಚಿಗೊಳಿಸದೇ ಮೃಗದಂತೆ ಅವಳನ್ನು ಕೂಡಿ ಹಾಕಲಾಗಿತ್ತು. ನರಕ ಸದೃಶ ಬಂಧನದಿಂದ ಹೇಮಾವತಿಗೆ ರಕ್ಷಣೆ ನೀಡಲಾಗಿದೆ.
ಉದ್ದುದ್ದ ಉಗುರು : ನಾಲ್ಕು ವರ್ಷದಿಂದ ಹೇಮಾವತಿ ಸೂರ್ಯನ ಬೆಳಕನ್ನೇ ನೋಡದಂತೆ ಬಂಧಿಸಲಾಗಿತ್ತು. ಸ್ನಾನ ಮಾಡಿಸದೇ ಕುಟುಂಬದವರು ಮೃಗೀಯ ವರ್ತನೆ ತೋರಿದ್ದರು. ಆಕೆಯ ಕೈ ಮತ್ತು ಕಾಲಿನ ಉಗುರು ಎರಡ್ಮೂರು ಇಂಚು ಉದ್ದ ಬೆಳೆದು ಭಯಾನಕವಾಗಿ ಕಾಣುತ್ತಿದ್ದವು. ಸಂಪೂರ್ಣ ನಿಸ್ತೇಜವಾಗಿದ್ದ ಯುವತಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಅರೆನಗ್ನ : ನಾಲ್ಕು ವರ್ಷದಿಂದ ಯುವತಿಗೆ ಕೇವಲ ಒಂದು ರಗ್ಗು ನೀಡಿ ಕೂಡಿ ಹಾಕಲಾಗಿತ್ತು. ರಗ್ಗನ್ನು ಹಾಸಿಗೆ ಮತ್ತು ಮೈ ಮೇಲಿನ ಬಟ್ಟೆಯಾಗಿ ಆಕೆ ಉಪಯೋಗಿಸಬೇಕಾಗಿತ್ತು. ಜನರ ನಡುವೆ ಮಾತುಕತೆ ನಡೆಸದೆ, ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಲವ್ ಮಾಡಿದ್ದಕ್ಕೆ ಶಿಕ್ಷೆ : ಹೇಮಾವತಿ ನೋಡಲು ಸುಂದರ ಯುವತಿ. ಬಿಕಾಂನಲ್ಲಿ ಉತ್ತಮ ಅಂಕ ಗಳಿಸಿದ್ದಳು. ಸ್ಥಳೀಯರ ಪ್ರಕಾರ, ಆಕೆ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಮನೆಯವರಿಗೆ ಈ ಇದು ಇಷ್ಟವಿರಲಿಲ್ಲ. ಆದ್ದರಿಂದ ಅವಳನ್ನು ಕೂಡಿ ಹಾಕಿದ್ದರು. ಹೇಮಾವತಿಯ ಸ್ನೇಹಿತೆಯರಿಗೂ ಆಕೆಯನ್ನು ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ.
ನಮ್ಮದೇನು ತಪ್ಪಿಲ್ಲ : ಹೇಮಾವತಿಯ ತಾಯಿ ಪುಟ್ಟಗೌರಮ್ಮ ಜನರ ಆರೋಪವನ್ನು ನಿರಾಕರಿಸಿದ್ದಾರೆ. ಆಕೆಗೆ ವಿಚಿತ್ರ ಜ್ವರದಿಂದ ಬಳಲುತ್ತಿದ್ದಾಳೆ. ಆದ್ದರಿಂದ ಚಿಕಿತ್ಸೆ ನೀಡಿ ಅವಳನ್ನು ಕೂಡಿ ಹಾಕಿದ್ದೇವೆ. ಅವಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಆರೋಪಗಳನ್ನು ಅಲ್ಲಗಳೆದಿದ್ದಾರೆ.












Click it and Unblock the Notifications