ಯಡಿಯೂರಪ್ಪ ದೇವೇಗೌಡರನ್ನು ಭೇಟಿ ಮಾಡಿದರಂತೆ!

ತೃತೀಯ ರಂಗದ ಕನಸು ಕಾಣುತ್ತಿರುವ ಯಡಿಯೂರಪ್ಪ ಅವರು ಪದ್ಮನಾಭನಗರದತ್ತ ಮೊನ್ನೆ ಹೆಜ್ಜೆ ಹಾಕಿದ್ದರು ಎಂಬ ಸ್ಫೋಟಕ ಮಾಹಿತಿ ಬಂದಿದೆ. ವಾರ/ಹತ್ತು ದಿನಗಳ ಹಿಂದೆಯೇ ಬಿಎಸ್ವೈ ಸದ್ದಿಲ್ಲದೆ/ಸುದ್ದಿ ಮಾಡದೇ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಖುದ್ದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಬೆಂಗಳೂರಿನ ತಂಗಾಳಿಯಲ್ಲಿ ತೂರಿಬಂದಿದೆ.
ಈ ಹಿಂದೆ ದೊಡ್ಡಗೌಡರು ತಮ್ಮನ್ನು ಬಾಸ್ಟರ್ಡ್ ಎಂದು ಬೈದಿದ್ದರೂ, ಅವರ ಪುತ್ರ ಕುಮಾರಸ್ವಾಮಿಯ ವಚನಭ್ರಷ್ಟತೆಯ ಸಂತ್ರಸ್ತ (ಫಲಾನುಭವಿ?) ಆಗಿದ್ದರೂ ರಾಜಕೀಯದಲ್ಲಿ ಯಾರೂ ಕಾಯಂ ಶತ್ರುಗಳಲ್ಲ ಎಂಬ ಮಾತಿಗೆ ಅನುಗುಣವಾಗಿ ಯಡಿಯೂರಪ್ಪ ಮತ್ತು ದೇವೇಗೌಡರ ಮಧ್ಯೆ ಇಂತಹ ಭೇಟಿ ನಡೆದಿರಬಹುದು ಎನ್ನಬಹುದು.
ಈ ಸುದ್ದಿ ನಿಜವೇ ಆಗಿದ್ದಲ್ಲಿ ಇದು ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಗೇ ಸರಿ. ರಾಜಕೀಯವನ್ನೇ ಅನ್ನಾಹಾರ ಮಾಡಿಕೊಂಡಿರುವ, 24/7 ರಾಜಕಾರಣಿಗಳು ಎಂದೇ ಜನಜನಿತರಾದ ಮಹತ್ವಾಕಾಂಕ್ಷಿ ಯಡಿಯೂರಪ್ಪ ಮತ್ತು ದೇವೇಗೌಡರ ಮಧ್ಯೆ ಇಂತಹ ಒಂದು ಭೇಟಿ ನಡೆದಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂತಹುದು ಏನೂ ಇಲ್ಲ ಎನ್ನಬಹುದು.
ಆದರೂ ಯಡಿಯೂರಪ್ಪ ಇತ್ತೀಚೆಗೆ ತೃತೀಯ ರಂಗ ಹಾಗೂ ಅನ್ಯ ಪಕ್ಷಗಳ ಜತೆ (ಬಿಜೆಪಿ ಒಂದನ್ನು ಬಿಟ್ಟು) ಮೈತ್ರಿ ಮಾಡಿಕೊಳ್ಳುವ ರಾಗ ಹಾಡುತ್ತಿರುವಾಗ ಈ ''ಭೇಟಿಗೆ'' ಮಹತ್ವ ಕಲ್ಪಿಸಬಹುದು. ಲೋಕಸಭಾ ಚುನಾವಣೆ ಎದುರಿಗೇ ಇರುವಾಗ ಯಡಿಯೂರಪ್ನೋರ ಈ ದಾಳ ಸಹಜವಾಗಿಯೇ ರಾಜಕೀಯ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಯಡಿಯೂರಪ್ಪ ಆಪ್ತ, ತುಮಕೂರು ಸಂಸದ ಜಿಎಸ್ ಬಸವರಾಜು ಅವರು ಈ ಜೋಡಿ ಭೇಟಿಯ ಬಗ್ಗೆ ಸುಳಿವಿ ನೀಡಿದ್ದಾರೆ ಎನ್ನಬಹುದು. ತೃತೀಯ ರಂಗ ರಚನೆಗೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾದರೆ ಕರ್ನಾಟಕದಲ್ಲಿ ತೃತೀಯ ರಂಗದಡಿ ದೇವೇಗೌಡ ಮತ್ತು ಯಡಿಯೂರಪ್ಪ ಒಂದಾದರೂ ಅಚ್ಚರಿಪಡಬೇಕಿಲ್ಲ ಎಂದು ಬಸವರಾಜು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಯಡಿಯೂರಪ್ಪ ಮತ್ತು ದೇವೇಗೌಡ ನಿಜಕ್ಕೂ ಭೇಟಿಯಾಗಿದ್ದರೆ? ಹಾಗಾದರೆ ಭೇಟಿಯ ಫಲಶೃತಿ ಏನು? ಎಂಬುದಕ್ಕೆ ಕಾಲವೇ ಉತ್ತರಿಸಬೇಕು!












Click it and Unblock the Notifications