ರಾಜ್ಯದಲ್ಲಿ ಕೆಂಪು ದೀಪದ ಕಾರಿಗೆ ಕಡಿವಾಣ : ಸಿಎಂ

ಗುರುವಾರ ಮಂತ್ರಿಗಳ ಪರಿಷತ್ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಲವಾರು ನಿರ್ಣಯಗಳನ್ನು ಕೈಗೊಂಡರು ಅದರಂತೆ ಸಿಎಂ, ಸಚಿವರು ಮತ್ತು ನ್ಯಾಯಾಧೀಶರು ಮಾತ್ರ ಕಾರಿನ ಮೇಲೆ ಕೆಂಪು ದೀಪ ಹಾಕಿಕೊಳ್ಳಬಹುದು ಎಂದು ತೀರ್ಮಾನಿಸಲಾಗಿದೆ.
ಈ ಆದೇಶವನ್ನು ಮೀರಿ ಧಾರ್ಮಿಕ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಕೆಂಪು, ಹಸಿರು ಮುಂತಾದ ದೀಪಗಳನ್ನು ವಾಹಗಳ ಮೇಲೆ ಹಾಕಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ಕೆಂಪು ದೀಪದ ಬೀಕಾನ್ ಅಳವಡಿಸಿಕೊಂಡರೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ, ಪೊಲೀಸ್ ಹಾಗೂ ಸಾರಿಗೆ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭಾಷಣದಲ್ಲಿ ಬದಲಾವಣೆ : ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಜೂನ್ 3ರ ಸೋಮವಾರ ಮಾಡುವ ಭಾಷಣಕ್ಕೂ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ.
ಸುಮಾರು 35 ಪುಟಗಳ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲವು ಸಚಿವರು ನೀಡಿದ ಸಲಹೆ ಮೇರೆಗೆ ಹಲವು ಬದಲಾವಣೆಗಳನ್ನು ಮಾಡಿ ಕಳುಹಿಸಲಾಗಿದೆ.
ರಾಜ್ಯ ಮಟ್ಟದ ಸಮಿತಿ : ಪೊಲೀಸ್ ಇಲಾಖೆ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಅವುಗಳ ಶಿಫಾರಸಿನಂತೆ ವರ್ಗಾವಣೆ ಕೈಗೊಳ್ಳುವ ವಿಧೇಯಕವನ್ನು ಸದನದಲ್ಲಿ ಮಂಡಿಸಲು ಸಭೆ ತೀರ್ಮಾನಿಸಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಮಂತ್ರಿಗಳ ಪರಿಷತ್ ಸಭೆ ಹಲವಾರು ನಿರ್ಣಯಗಳನ್ನು ಕೈಗೊಂಡಿದೆ. ರಾಜ್ಯಪಾಲರ ಭಾಷಣಕ್ಕೆ ಮಂತ್ರಿಗಳ ಪರಿಷತ್ ಸಭೆಯ ಸಮ್ಮತಿ ಅಗತ್ಯವಾಗಿದೆ.












Click it and Unblock the Notifications