ಫಿಕ್ಸಿಂಗ್ : ಗುರುನಾಥ್, ವಿಂದೂಗೆ ಬಿಡುಗಡೆ ಭಾಗ್ಯವಿಲ್ಲ

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್, ರಾಜಕೀಯ ಮತ್ತು ಕ್ರೀಡೆಯನ್ನು ಬೆರಸಬಾರದು. ಸರ್ಕಾರ ಎಲ್ಲಾ ಪ್ರಕರಣಗಳ ಬಗ್ಗೆ ಗಮನಹರಿಸುತ್ತದೆ. ತನಿಖೆ ಜಾರಿಯಲ್ಲಿರುವುದರಿಂದ ನಾನು ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ ಎಂದಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಸಿದ್ಧರಾಗುತ್ತಿರುವ ಎಂಎಸ್ ಧೋನಿ ಅವರು ಇಂಗ್ಲೆಂಡ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಐಪಿಎಲ್ ಬಗ್ಗೆ ಪ್ರಶ್ನೆ ಬಂದಾಗ ಸರಿಯಾಗಿ ಉತ್ತರಿಸದೆ ನುಣಚಿಕೊಂಡರು. ಸಚಿನ್ ಮಾತ್ರ ಇದು ಅತ್ಯಂತ ಬೇಸರ ಹಾಗೂ ದುಃಖಕರ ಸಂಗತಿ ಎಂದಷ್ಟೇ ಹೇಳಿದ್ದಾರೆ.
ಮತ್ತಷ್ಟು ಅಪ್ದೇಟ್ಸ್ ಕಾಲಕಾಲಕ್ಕೆ
ಸಮಯ 2.45: ಗುರುನಾಥ್ ಮೇಯಪ್ಪನ್ ಹಾಗೂ ವಿಂದೂ ದಾರಾ ಸಿಂಗ್ ಅವರ ಬಂಧನ ಅವಧಿಯನ್ನು ಜೂ.3ರವರೆಗೂ ವಿಸ್ತರಿಸಲಾಗಿದೆ. ಚೆನ್ನ್ನೈ ಉದ್ಯಮಿ ವಿಕ್ರಮ್ ಅಗರವಾಲ್ ಹಾಗೂ ಬುಕ್ಕಿ ಟಿಂಕು ಮಂಡಿ ಎದುರಲ್ಲಿ ಈ ಇಬ್ಬರನ್ನು ವಿಚಾರಣೆ ನಡೆಸಲು ಮುಂಬೈ ಪೊಲೀಸರು ನಿರ್ಧರಿಸಿದ್ದಾರೆ.
ಸಮಯ 13.15: ರಾಜಸ್ಥಾನ್ ರಾಯಲ್ಸ್ ತಂಡದ ಸಿದ್ದಾರ್ಥ್ ತ್ರಿವೇದಿ ಅವರನ್ನು ಸರ್ಕಾರದ ಪರ ಸಾಕ್ಷಿಯಾಗಿ ಬಳಸಲು ಚಿಂತನೆ; ಸಿಎನ್ ಎನ್ ಐಬಿಎನ್ ವರದಿ
ಐಪಿಎಲ್ 6 ರಲ್ಲಿ ಸಿದ್ದಾರ್ಥ್ ತ್ರಿವೇದಿ 17 ಪಂದ್ಯಗಳನ್ನಾಡಿ 12 ವಿಕೆಟ್ ಪಡೆದಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಖಾಯಂ ಆಟಗಾರರಲ್ಲಿ ಒಬ್ಬರು. ಗುಜರಾತ್ ಪರ ರಣಜಿ ಪಂದ್ಯಗಳನ್ನಾಡುತ್ತಾರೆ.
ಸಮಯ 12.30: ಚೆನ್ನೈ ಮೂಲದ ಹೋಟೆಲ್ ಉದ್ಯಮಿ ವಿಕ್ರಮ್ ಅಗರವಾಲ್ ಅವರು ಮುಂಬೈ ಕ್ರೈಂ ಬ್ರ್ಯಾಂಚ್ ಕಚೇರಿಗೆ ಭೇಟಿ ನೀಡಿದ್ದಾರೆ. ಚೆನ್ನೈ ಪೊಲೀಸರು ವಿಕ್ರಮ್ ವಿರುದ್ಧ ಸಮನ್ಸ್ ಜಾರಿ ಮಾಡಿದ್ದರು. ಚೆನ್ನೈ ತಂಡದ ಗುರುನಾಥ್ ಮೇಯಪ್ಪನ್ ಹಾಗೂ ನಟ ವಿಂದೂ ಅವರ ಆಪ್ತ ಗೆಳೆಯರಾಗಿದ್ದಾರೆ.
ಸಮಯ 12.00: ಬಿಸಿಸಿಐ ನೇಮಕ ಮಾಡಿರುವ ತನಿಖಾ ತಂಡದ ಸದಸ್ಯರು ಗುರುನಾಥ್ ಮೇಯಪ್ಪನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ನ ಸಿಇಒ ಎಂದೇ ದಾಖಲು ಮಾಡಿದ್ದಾರೆ. ಈ ವಿಷಯವನ್ನು ನ್ಯಾ. ಚೌಟ ಅವರು ಸ್ಪಷ್ಟಪಡಿಸಿದ್ದಾರೆ.
ಜಾಮೀನು: ಹಗರಣದಲ್ಲಿ ಶಾಮೀಲಾಗಿ ಬಂಧಿಸಲ್ಪಟ್ಟಿರುವ ಕ್ರಿಕೆಟಿಗ ಶ್ರೀಶಾಂತ್ ಗೆ ಸೇರಿದ ಹಣ ಹಾಗೂ ವಸ್ತುಗಳನ್ನು ಪೊಲೀಸರು ವಶ ತೆಗೆದುಕೊಂಡಿದ್ದು ಗೊತ್ತೇ ಇದೆ. ಶ್ರೀಶಾಂತ್ ಇದ್ದ ಹೊಟೇಲ್ ರೂಮ್ ಕ್ಲೀನ್ ಮಾಡಿ ದಾಖಲೆ ನಾಶ ಮಾಡಲು ಯತ್ನಿಸಿದ ಆರೋಪ ಹೊತ್ತಿರುವ ಅಭಿಷೇಕ್ ಶುಕ್ಲಾಗೆ ದಿಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಶುಕ್ಲಾನನ್ನು ನ್ಯಾಯಾಂಗ ವಶಕ್ಕೆ ಕಳುಹಿಸಬೇಕು ಎಂದು ದಿಲ್ಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಖಾಸಗಿ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಶುಕ್ಲಾನಿಗೆ ವೈಯಕ್ತಿಕ ಬಾಂಡ್ 25,000 ರೂ. ಹಾಗೂ ಅದು ಪಾವತಿಸುವ ಖಚಿತತೆಯ ಆಧಾರದ ಮೇಲೆ ಕೋರ್ಟ್ ಜಾಮೀನು ನೀಡಲಾಗಿದೆ.












Click it and Unblock the Notifications