ಇಂದಿನಿಂದ ಅಧಿವೇಶನ, ಕಾಂಗ್ರೆಸ್ ಗೆ ಮೊದಲ ಪರೀಕ್ಷೆ

ಬುಧವಾರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಪ್ರಾರಂಭವಾಗಲಿದೆ. ಹಂಗಾಮಿ ಸ್ಪೀಕರ್ ಮಾಲಿಕಯ್ಯ ಗುತ್ತೇದಾರ್ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. 223 ಸದಸ್ಯರು ಸದಸ್ಯರು ಪ್ರತ್ಯೇಕವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅಧಿವೇಶನಕ್ಕೆ ಸಕಲ ರೀತಿಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಸಜ್ಜಾಗಿದೆ. ಮಂಗಳವಾರ ಸರ್ಕಾರಿ ಮುಖ್ಯ ಸಚೇತಕ ಮತ್ತು ವಿಧಾನಸಭೆ ಉಪಸಭಾಧ್ಯಕ್ಷರಾಗಿ ಇಬ್ಬರು ಹಿರಿಯ ಶಾಸಕರನ್ನು ನೇಮಿಸಿ ಆದೇಶ ಹೊರಡಿಸಿದೆ.
ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಅವರನ್ನು ವಿಧಾನಸಭೆಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ರಾಮದುರ್ಗ ಕ್ಷೇತ್ರದ ಶಾಸಕ ಅಶೋಕ್ ಮಹದೇವಪ್ಪ ಪಟ್ಟಣ ಅವರನ್ನು ಮುಖ್ಯ ಸಚೇತಕರಾಗಿ ನೇಮಿಸಲಾಗಿದೆ.
ಮೇ 31ರ ಶುಕ್ರವಾರ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಜೂ. 3ರಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಚೊಚ್ಚಲ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಅನೇಕ ವಿಚಾರಗಳು ಪ್ರಸ್ತಾಪವಾಗುವ ನಿರೀಕ್ಷೆ ಇದೆ. ಮುಖ್ಯಮಂತ್ರಿಗಳು ಹಾಗೂ ಸಂಪುಟ ಸದಸ್ಯರು ಈಗಾಗಲೇ ಅಧಿವೇಶನಕ್ಕೆ ಸಿದ್ಧರಾಗಿದ್ದಾರೆ. ಸಚಿವರು ಇಲಾಖಾ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಸಮಾಲೋಚನೆ ಪೂರ್ಣಗೊಳಿಸಿ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಪ್ರತಿ ಪಕ್ಷ ಇಂದು ತೀರ್ಮಾನ : ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಬಲ ಸಾಧಿಸಿದ್ದು, ಇಂದು ಅಧಿವೇಶನ ಪ್ರಾರಂಭವಾದ ನಂತರ ಅಧಿಕೃತ ಪ್ರತಿ ಪಕ್ಷ ಯಾವುದು ಎಂದು ತೀರ್ಮಾನವಾಗಲಿದೆ. ಜೆಡಿಎಸ್ ಪ್ರತಿಪಕ್ಷ ಸ್ಥಾನ ಅಲಂಕರಿಸಿದರೆ, ಹಿಂದೆ ಆಡಳಿತ ಪಕ್ಷವಾಗಿದ್ದ ಬಿಜೆಪಿ ಎರಡನೇ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಬಿ. ಶ್ರೀರಾಮುಲು, ನೈಸ್ ಮುಖ್ಯಸ್ಥ ಅಶೋಕ್ ಖೇಣಿ, ರೈತ ಸಂಘದ ಪುಟ್ಟಣ್ಣಯ್ಯ ಅವರಿಂದಾಗಿ ಸದನ ರಂಗೇರಲಿದೆ.(ಅಧಿವೇಶನದ ವಿಶೇಷತೆಗಳು)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಎಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ, ವಿ. ಶ್ರೀನಿವಾಸಪ್ರಸಾದ್ ಮುಂತಾದವರು ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆ. ಅಂಬರೀಷ್ ಮತ್ತು ಉಮಾಶ್ರೀ ಅವರಿಂದ ಆಡಳಿತ ಪಕ್ಷಕ್ಕೆ ತಾರಾ ಕಳೆ ಬಂದಿದೆ.
ಅಧಿವೇಶನದ ವೇಳಾಪಟ್ಟಿ
* ಬುಧವಾರ ಮೇ 29ರಿಂದ ಅಧಿವೇಶನ ಪ್ರಾರಂಭ
* ಮೇ 29 ಮತ್ತು 30 ರಂದು ನೂತನ ಸದಸ್ಯರ ಪ್ರಮಾಣ ವಚನ
* ಮೇ 31 ರಂದು ಸ್ಪೀಕರ್ ಆಯ್ಕೆಗೆ ಚುನಾವಣೆ
* ಜೂ.3ರಂದು ರಾಜ್ಯಪಾಲರಿಂದ ಜಂಟಿ ಸದನ ಉದ್ದೇಶಿಸಿ ಭಾಷಣ
* ಜೂ.6 ವರೆಗೆ ಕಾರ್ಯಕಲಾಪ












Click it and Unblock the Notifications