ಬೆಂಗಳೂರಿಗೂ ಬಂತು ಡೆಂಗ್ಯೂ, ಎರಡು ಸಾವು

ನಗರದ ಮಲ್ಲೇಶ್ವರಂ ನಿವಾಸಿ ಪ್ರಶಾಂತ್ (28) ಮತ್ತು ರಾಮನಗರದ ನಾಗರತ್ನ (51) ಡೆಂಗ್ಯೂ ಜ್ವರದಿಂದಾಗಿ ಮಂಗಳವಾರ ಸಾವನ್ನಪ್ಪಿದ್ದಾರೆ. ಪ್ರಶಾಂತ್ ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಒಂದು ತಿಂಗಳ ಹಿಂದೆ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು.
ಶೇಷಾದ್ರಿಪುರಂನ ಪೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಶಾಂತ್ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ವೈದ್ಯರು ಪ್ರಶಾಂತ್ಗೆ ಡೆಂಗ್ಯೂ ಜ್ವರ ಇರುವುದನ್ನು ಖಚಿತ ಪಡಿಸಿ ಚಿಕಿತ್ಸೆ ನೀಡುತ್ತಿದ್ದರು. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.
ರಾಮನಗರ ನಿವಾಸಿಯಾದ ನಾಗರತ್ನ ಎಂಬುವರು ಕೆಂಪೇಗೌಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕೆಂಪೇಗೌಡ ಆಸ್ಪತ್ರೆಯ ವೈದ್ಯರು ಸಹ ದೃಢೀಕರಣ ನೀಡಿದ್ದು, ನಾಗರತ್ನ ಅವರು ಡೆಂಗ್ಯೂ ಜ್ವರದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮೈಸೂರು ಜಿಲ್ಲೆ ಹೊರತು ಪಡಿಸಿ ಬೇರೆ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ದಾಖಲಾಗಿಲ್ಲ ಎಂದು ಹೇಳುತ್ತಿದ್ದಾರೆ. ಆರೋಗ್ಯ ಇಲಾಖೆ ಆಯುಕ್ತ ಮದನ್ ಗೋಪಾಲ್ ಇಂದು ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಪ್ರತಿ ಜಿಲ್ಲೆಯ ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಬಿಎಂಪಿ ಸಭೆ : ನಗರದಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಸಿದ್ಧಯ್ಯ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ಫಾಗಿಂಗ್, ಔಷಧಿ ಸಿಂಪಡಣೆ ಕಾರ್ಯ ನಡೆಸುವಂತೆ ಸೂಚನೆ ನೀಡಿದರು.
ಡೆಂಗ್ಯೂ ರೋಗಕ್ಕೆ ತುತ್ತಾದವರ ಪರೀಕ್ಷೆಗಾಗಿ ಪಾಲಿಕೆ ವತಿಯಿಂದ 20 ಲಕ್ಷ ರೂ. ವೆಚ್ಚದಲ್ಲಿ ಒಂದು ಲ್ಯಾಬೊರೇಟರಿ ಆರಂಭಿಸಲು ಮುಖ್ಯ ಆರೋಗ್ಯಾಧಿಕಾರಿಗೆ ಆದೇಶ ನೀಡಿದರು. ಬಿಬಿಎಂಪಿ ಆರೋಗ್ಯಾಧಿಕಾರಿಗಳ ಪ್ರಕಾರ ನಗರದಲ್ಲಿ 150ಕ್ಕೂ ಹೆಚ್ಚು ಮಂದಿಗೆ ಸೋಂಕು ಹರಡಿದೆ. ಮೂವರು ಡೆಂಗ್ಯೂ ಜ್ವರದಿಂದಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯರ ಸೂಚನೆಗಳು : ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಸಾರ್ವಜನಿಕರಿಗೆ ವೈದ್ಯರು ಕೆಲವು ಸೂಚನೆಗಳನ್ನು ನೀಡಿದ್ದಾರೆ. ನೀರು ನಿಲ್ಲದಂತೆ ಮಾಡಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು ಎಂದು ಕೋರಿದ್ದಾರೆ.
* ನೀರು ಒಂದೇ ಕಡೆ ನಿಂತ ಪ್ರದೇಶಗಳಲ್ಲಿ ಡೆಂಗ್ಯೂ ಬೇಗ ಹರಡಲಿದೆ.
* ನಿಂತ ನೀರಿನಲ್ಲಿ ಕೆಲವೇ ಗಂಟೆಗಳಲ್ಲಿ ಏಡೀಸ್ ಸೊಳ್ಳೆಗಳ ಉತ್ಪತ್ತಿಯಾಗಲಿವೆ.
* ಸೊಳ್ಳೆಗಳು ರಾತ್ರಿ ವೇಳೆ ಮನೆಗಳಿಗೆ ಪ್ರವೇಶಿಸಿ ಕಚ್ಚುವುದರಿಂದ ಡೆಂಗ್ಯೂ ಸೋಂಕು ಹರಡಲಿದೆ.
* ಮಕ್ಕಳಿಗೆ ಈ ಮಾರಕ ಸೋಂಕು ಬೇಗ ಹರಡುತ್ತದೆ.
* ಸಂಜೆ ವೇಳೆ ಮನೆಯ ಬಾಗಿಲು, ಕಿಟಕಿಗಳನ್ನು ಮುಚ್ಚುವುದು ಸೂಕ್ತ.
* ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.












Click it and Unblock the Notifications