'ಕೃಷ್ಣ ಮಠವನ್ನು ಸರಕಾರ ಸ್ವಾಧೀನಪಡಿಸಿಕೊಳ್ಳುವುದಿಲ್ಲ'

ಉಡುಪಿ ಶ್ರೀಕೃಷ್ಣ ಮಠವನ್ನು ಮುಜರಾಯಿ ಇಲಾಖೆಗೆ 'ಹಸ್ತಾಂ'ತರಿಸಬೇಕು ಎಂಬ ಕೂಗಿಗೆ ಕಾಂಗ್ರೆಸ್ಸಿನಲ್ಲೇ ಅಪಸ್ವರ ಕೇಳಿಬಂದಿದ್ದು, ಅದೀಗ ಮುಗಿದ ಅಧ್ಯಾಯದಂತಾಗಿದೆ. ಈ ವಿಷಯದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರೇ ವಿವೇಕದ ಮಾತುಗಳನ್ನಾಡಿದ್ದು, ಸಿಎಂ ಸಿದ್ದುಗೆ ಹಿತೋಕ್ತಿ ಬೋಧಿಸಿದ್ದಾರೆ.
ಇದರಿಂದ ಖುದ್ದು ಸಿದ್ದು ಅವರೇ 'ನಾನು ಯಾವಾಗ ಹೇಳಿದ್ದೆ ಉಡುಪಿ ಮಠವನ್ನು ಸರಕಾರದ ಅಧೀನಕ್ಕೆ ತೆಗೆದುಕೊಳ್ಳುತ್ತೀನಿ' ಎಂದು ಕೇಳಿದ್ದಾರೆ. ಉಡುಪಿ ಮಠಕ್ಕೆ ತೆರಳಿ, ಶ್ರೀಕೃಷ್ಣನೆದುರು ಪ್ರಮಾಣಪೂರ್ವಕವಾಗಿ ಘೋಷಿಸುವುದೊಂದು ಬಾಕಿ. ಅಷ್ಟರಮಟ್ಟಿಗೆ ಅಷ್ಠಮಠಗಳ ತಂಟೆಗೆ ಬರುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಮಡಿಕೇರಿಯಲ್ಲಿ ಭಾನುವಾರ ಮಾತನಾಡಿರುವ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಆರ್ ವಿ ದೇಶಪಾಂಡೆ ಅವರು 'ರಾಜ್ಯದಲ್ಲಿ ಉಡುಪಿ, ಗೋಕರ್ಣ ಸೇರಿದಂತೆ ಯಾವುದೇ ಮಠ, ದೇಗುಲಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವ ಚಿಂತೆ ನಡೆಸಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಅನಗತ್ಯವಾಗಿ ಎಳೆದುತರಲಾಗಿದೆ' ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರೂ ಸಹ ದೇಗುಲಗಳ ಸರಕಾರೀಕರಣ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಮಠ ಮಂದಿರಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುವುದು ಸರಿಯಲ್ಲ. ಮಠಗಳನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನರಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ.
ಇಂಥ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಜನರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸುವುದು ಸೂಕ್ತ' ಎಂದಿದ್ದಾರೆ. ಕೊಡಗು ಜಿಲ್ಲೆಯ ಸಿದ್ದಾಪುರಕ್ಕೆ ಖಾಸಗಿ ಭೇಟಿ ನೀಡಿದ ವೇಳೆ ಸುದ್ದಿಗಾರರು ಈ ವಿಷಯ ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ ಜನಾರ್ಧನ ಪೂಜಾರಿ ಅವರು ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. 'ಸರಕಾರ ಮೊದಲು ಅನ್ನ, ನೀರು, ಶಿಕ್ಷಣಕ್ಕೆ ಮಣೆ ಹಾಕಲಿ. ಅದು ಬಿಟ್ಟು ಮಠಗಳತ್ತ ಪ್ರದಕ್ಷಿಣೆ ಹಾಕುವುದು ಬೇಡ. ದೇವಸ್ಥಾನ /ಮಠಗಳ ವಿಷಯದಿಂದ ಸರಕಾರ ದೂರವಿರಲಿ. ಅನ್ನ, ನೀರು, ಶಿಕ್ಷಣದ ಮೂಲಕ ಜನತೆಗೆ ಹತ್ತಿರವಾಗಲಿ ಎಂದು ತಮ್ಮದೇ ಶೈಲಿಯಲ್ಲಿ ಸಿಎಂ ಸಿದ್ದುಗೆ ಪೂಜಾರಿ ಗುದ್ದು ನೀಡಿದ್ದರು.












Click it and Unblock the Notifications