ಡೆಂಗ್ಯೂ :ಸಾಲುಂಡಿ ತೊರೆದ ಮಕ್ಕಳು, ಆವರಿಸಿದೆ ಭಯ

dengue
ಮೈಸೂರು, ಮೇ 27 : ಡೆಂಗ್ಯೂ ಜ್ವರದಿಂದ ಐದು ಮಕ್ಕಳು ಸಾವಿಗೀಡಾದ ಸಾಲುಂಡಿ ಗ್ರಾಮದಲ್ಲಿನ ಆತಂಕದ ಛಾಯೆ ಇನ್ನೂ ಕಡಿಮೆ ಆಗಿಲ್ಲ. ಡೆಂಗ್ಯೂ ಜ್ವರದ ಭಯದಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಬೇರೆ ಉರಿಗೆ ಕಳುಹಿಸುತ್ತಿದ್ದು, ಮಕ್ಕಳ ನಗುವಿಲ್ಲದೆ ಗ್ರಾಮದಲ್ಲಿ ಮೌನ ಆವರಿಸಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಬೆಳಕಿಗೆ ಬಂದ ಐದು ಮಕ್ಕಳ ಸಾವಿನ ಪ್ರಕರಣದ ನಂತರ ಸಾಲುಂಡಿ ಗ್ರಾಮದಲ್ಲಿ ವೈದ್ಯರು ವಾಸ್ತವ್ಯ ಹೂಡಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ನಾಡದೊರೆ ಸಿಎಂ ಸಿದ್ದರಾಮಯ್ಯ ಸ್ವತಃ ಸಾಲುಂಡಿ ಗ್ರಾಮಕ್ಕೆ ತೆರಳಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ.

ಆದರೂ ಗ್ರಾಮಸ್ಥರಲ್ಲಿ ಭಯ ಮಾತ್ರ ಕಡಿಮೆ ಆಗಿಲ್ಲ. ಹತ್ತಿರದ ಊರುಗಳ ನೆಂಟರಿಷ್ಟರ ಮನಗೆ ಮಕ್ಕಳನ್ನು ಕಳುಹಿಸಿರುವ ಪೋಷಕರು ಅವರಿಗೆ ಡೆಂಗ್ಯೂ ಮಹಾಮಾರಿ ಬಾರದೆ ಇರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದವರಲ್ಲಿ ಶೋಕದ ಛಾಯೆ ಮಡುಗಟ್ಟಿದೆ.

ಸರ್ಕಾರಿ ಶಾಲೆಗಳು ಪ್ರಾರಂಭವಾಗಲು ಮೂರುದಿನಗಳು ಉಳಿದಿದ್ದು, ಮಕ್ಕಳು ಶಾಲೆಗೆ ತೆರಳದಿದ್ದರೂ ತೊಂದರೆಯಿಲ್ಲ, ಊರಿಗೆ ಬಂದು ಡೆಂಗ್ಯೂ ಮಹಾಮಾರಿಗೆ ಸಿಲುಕುವುದು ಬೇಡ ಎಂದ ಪೋಷಕರು ನೆಂಟರಿಷ್ಟರ ಮನೆಗಳಿಗೆ ಬಿಟ್ಟು ಬರುತ್ತಿದ್ದಾರೆ.

ಡೆಂಗ್ಯೂ ಜ್ವರದಿಂದಾಗಿ ಮಕ್ಕಳು ಮಾತ್ರ ಸಾಲುಂಡಿ ತೊರೆಯುತ್ತಿಲ್ಲ. ಚಿಕ್ಕಮಕ್ಕಳಿರುವ ಬಾಣಂತಿಯರನ್ನು ಊರಿನಿಂದ ಕಳಿಸಲಾಗುತ್ತಿದೆ. ಆರೋಗ್ಯಾಧಿಕಾರಿಗಳು ಜನರಿಗೆ ಧೈರ್ಯ ತುಂಬಿದರೂ, ಜನರು ಇನ್ನೂ ಡೆಂಗ್ಯೂ ಭೀತಿಯಲ್ಲಿದ್ದಾರೆ.

ಮತ್ತಷ್ಟು ಪ್ರಕರಣಗಳು ಪತ್ತೆ : ಸಾಲುಂಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಪುನಃ 11 ಮಂದಿಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 12.30 ರವರೆಗೆ ಆರೋಗ್ಯ ತಪಾಸಣೆ ನಡೆಸಲಾಯಿತು.

ಈ ವೇಳೆ ಜ್ವರದಿಂದ ಬಳಲುತ್ತಿದ್ದ ಒಬ್ಬ ಯುವತಿ ಹಾಗೂ ಹತ್ತು ಮಕ್ಕಳಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವ ಶಂಕೆ ಮೇರೆಗೆ ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಅವರಿಗೆ ಸೂಚಿಸಲಾಯಿತು. ತಪಾಸಣೆಗೆ ಒಳಗಾದವರಲ್ಲಿ ಕೈ- ಕಾಲು, ಹೊಟ್ಟೆ ನೋವಿನಿಂದ ಬಳಲುತ್ತಿದ್ದವರೇ ಹೆಚ್ಚಾಗಿದ್ದರು ಎಂದು ವೈದ್ಯರು ಹೇಳಿದ್ದಾರೆ.

ಸಾಲುಂಡಿ ಗ್ರಾಮದ 582 ಮನೆಗಳ ಸ್ವಚ್ಛತಾ ಪರಿಶೀಲನೆ ನಡೆಸಿದಾಗ, ಒಟ್ಟು 424 ಮನೆಗಳಲ್ಲಿ ಡೆಂಗ್ಯೂ ಸೊಳ್ಳೆಯ ಲಾರ್ವಾ ಪತ್ತೆಯಾಗಿದೆ ಎಂದು ಹಿರಿಯ ವೈದ್ಯಕೀಯ ಸಹಾಯಕಿ ದೇವಮ್ಮ ಹೇಳಿದ್ದಾರೆ. ಡೆಂಗ್ಯೂ ನಿಯಂತ್ರಣಕ್ಕೆ 25 ಆಸ್ಪತ್ರೆ ಸಿಬ್ಬಂದಿ, 10 ಆಶಾ ಕಾರ್ಯಕರ್ತೆಯರು ಹಾಗೂ ನಾಲ್ವರು ವೈದ್ಯರು ಗ್ರಾಮದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ವಿಶೇಷ ಘಟಕ : ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸಾಲುಂಡಿ ಗ್ರಾಮವರಿಗೆ ಚಿಕಿತ್ಸೆ ನೀಡಲು ವಿಶೇಷ ಘಟಕ ಆರಂಭಿಸಲಾಗಿದೆ. ಇಂದು ಸಂಸದ ವಿಶ್ವನಾಥ್ ಆಸ್ಪತ್ರೆಗೆ ಭೇಟಿ ನೀಡಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ ಅವರಿಂದ ಮಾಹಿತಿ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+