ಪಾಕಿಸ್ತಾನದಲ್ಲಿ ಗೂಢಚಾರಿ ರವೀಂದರ್ ಕೌಶಿಕ್
ಗೂಢಚರ್ಯ ಎಂಬುದು ರಾಜರ ಕಾಲದಿಂದಲೂ ಶತ್ರುಗಳ ಚಲನವಲನ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆ. ಇಂದಿನ ಆಧುನಿಕ ಕಾಲದಲ್ಲೂ ಕೂಡ ಇದೇ ವ್ಯವಸ್ಥೆ ಮುಂದುವರೆದುಕೊಂಡು ಬಂದಿದೆ.
ಗೂಢಚಾರಿಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಕಾರ್ಯನಿರ್ವಹಿಸಬೇಕಾಗುತ್ತದೆ. ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಅಸಂಖ್ಯಾತ ಯೋಧರ ಇತಿಹಾಸವನ್ನು ನಮ್ಮ ಗೂಢಚರ್ಯ ಸಂಸ್ಥೆ ರಾ ( ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ) ಹೊಂದಿದ್ದು ಇದರಲ್ಲಿ ಕಾಶ್ಮೀರ್ ಸಿಂಗ್ , ಸರಬ್ಜಿತ್ ಸಿಂಗ್ ಮೊದಲಾದವರಿದ್ದಾರೆ.
ದೇಶದ ಹೆಮ್ಮೆ ಎಂದೇ ಸೇನಾವಲಯದಲ್ಲಿ ಖ್ಯಾತರಾಗಿರುವ ಹುತಾತ್ಮ ರವೀಂದರ್ ಕೌಶಿಕ್ ಅವರ ಸಾರ್ಥಕ, ಸಾಹಸಮಯ ಯಶೋಗಾಥೆ ಇದಾಗಿದೆ.
ದೇಶದ ಬಹಳಷ್ಟು ಜನರಿಗೆ ರವೀಂದರ್ ಕೌಶಿಕ್ ಅವರ ಬಗ್ಗೆ ತಿಳಿದಿಲ್ಲ. 1952 ರ ಏಪ್ರಿಲ್ 11 ರಂದು ರಾಜಾಸ್ಥಾನದ ಗಂಗಾನಗರದಲ್ಲಿ ಜನ್ಮ ತಾಳಿದ ಕೌಶಿಕ್ ಖ್ಯಾತ ರಂಗ ನಟರೂ ಆಗಿದ್ದರು. ಇವರನ್ನು ಗುರುತಿಸಿದ ರಾ ದೇಶ ಸೇವೆಗೆ ಆಹ್ವಾನಿಸಿತು.
ಇದನ್ನು ಸಂತೋಷದಿಂದಲೇ ಸ್ವೀಕರಿಸಿದ ಕೌಶಿಕ್ ಗೆ ಎರಡು ವರ್ಷಗಳ ಕಠಿಣ ತರಬೇತಿಯೊಂದಿಗೆ ಉರ್ದು ಭಾಷೆಯನ್ನೂ ಕಲಿಸುವದರೊಂದಿಗೆ ಧಾರ್ಮಿಕ ಶಿಕ್ಷಣವನ್ನೂ ನೀಡಲಾಯಿತು. ಪಾಕಿಸ್ಥಾನದ ಸ್ಥಳೀಯ ಭಾಷೆಯ ಬಳಕೆಯ ಬಗ್ಗೆಗೂ ತರಬೇತಿ ನೀಡಿ 1975 ರಲ್ಲಿ ಪಾಕಿಸ್ಥಾನಕ್ಕೆ ಕಳಿಸಿಕೊಡಲಾಯಿತು.

ನಬಿ ಅಹ್ಮದ್ ಎಂಬ ಹೆಸರಿನೊಂದಿಗೆ ಪಾಕಿಸ್ತಾನಕ್ಕೆ ಕಾಲಿಟ್ಟ ಕೌಶಿಕ್ ಕರಾಚಿ ವಿಶ್ವವಿದ್ಯಾಲಯದಲ್ಲಿ ಎಲ್ ಎಲ್ ಬಿ ಕೋರ್ಸಿಗೆ ಪ್ರವೇಶ ಪಡೆದರು. ನಂತರ ಪಾಕಿಸ್ಥಾನದ ಸೇನೆಯಲ್ಲಿ ಕಮೀಷನ್ಡ್ ಆಫೀಸರ್ ಆಗಿ ಸೇರಿಕೊಂಡ ಕೌಶಿಕ್ ನಂತರ ಮೇಜರ್ ಆಗಿ ಪದೋನ್ನತಿಗೊಂಡರು.
ಅಲ್ಲಿನ ಸ್ಥಳಿಯ ಯುವತಿಯೊಬ್ಬಳನ್ನು ಮದುವೆಯೂ ಆದ ಕೌಶಿಕ್ ಒಂದು ಹೆಣ್ಣು ಮಗುವಿನ ತಂದೆಯೂ ಆದರು. 1979 ರಿಂದ 1983 ರ ವರೆಗೆ ಇವರು ಕಳಿಸಿದ ಮಾಹಿತಿ ದೇಶದ ರಕ್ಷಣಾ ಇಲಾಖೆಗೆ ಬಹಳ ಸಹಾಯಕವಾಗಿತ್ತು. ಇವರನ್ನು ಅಂದಿನ ಗೃಹ ಸಚಿವ ಎಸ್ ಬಿ ಚವಾಣ್ ಬ್ಲಾಕ್ ಟೈಗರ್ ಎಂದು ಬಿರುದು ನೀಡಿದ್ದರು ಎನ್ನಲಾಗಿದ್ದರೂ ಈ ಬಿರುದನ್ನು ಮಾಜಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರೇ ನೀಡಿದ್ದರು ಎಂದೂ ಹೇಳಲಾಗಿದೆ.
ತಮ್ಮ ಜೀವನದ 26 ವರ್ಷಗಳನ್ನು ದೇಶದಿಂದ ಹೊರಗೇ ಕಳೆದ ಕೌಶಿಕ್ ಪಾಕಿಸ್ತಾನದಲ್ಲೂ ಹೆಜ್ಜೆ ಹೆಜ್ಜೆಗೂ ಜಾಗರೂಕರಾಗಿ ಕೆಲಸ ಮಾಡಬೇಕಿತ್ತು. ಪಾಕಿಸ್ಥಾನ ಕಾಲು ಕೆರೆದು ಅನೇಕ ಬಾರಿ ಭಾರತದೊಂದಿಗೆ ಯುದ್ದಕ್ಕಿಳಿಯುವ ಸಂದರ್ಭಗಳಲ್ಲಿ ಕೌಶಿಕ್ ನೀಡುತಿದ್ದ ಉನ್ನತ ರಹಸ್ಯ ಮಾಹಿತಿಯಿಂದ ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿತ್ತು.
ಪಾಕಿಸ್ತಾನದ ಸೇನೆಯಲ್ಲಿ ಯಾರಿಗೂ ಸಂಶಯ ಬಾರದಂತೆ ಗೌಪ್ಯತೆ ಕಾಪಾಡಿಕೊಂಡು 24 ವರ್ಷ ಕಾರ್ಯನಿರ್ವಹಿಸಿದರಾದರೂ ನಂತರ ಸಿಕ್ಕುಬಿದ್ದು ಪ್ರಾಣವನ್ನೇ ಅರ್ಪಿಸಬೇಕಾಯ್ತು. 1983 ರಲ್ಲಿ ರಾ ಇನಾಯತ್ ಮಸೀಹ ಎಂಬ ಮತ್ತೊಬ್ಬ ಏಜೆಂಟನನ್ನು ಪಾಕಿಸ್ಥಾನಕ್ಕೆ ಕಳುಹಿಸಿತು. ಆದರೆ ಪಾಕಿಸ್ಥಾನದ ಗುಪ್ತಚರ ಸಂಸ್ಥೆಗಳು ಇನಾಯತ್ ನ್ನು ಸೆರೆ ಹಿಡಿದಾಗ ತಾನು ವರದಿ ಮಾಡುತಿದ್ದುದು ಕೌಶಿಕ್ ಗೇ ಎಂದು ಬಾಯಿ ಬಿಟ್ಟುಬಿಟ್ಟಿದ್ದ.
ಕೂಡಲೇ ಕೌಶಿಕ್ ನನ್ನು ಬಂಧಿಸಿ ಎರಡು ವರ್ಷಗಳವರೆಗೆ ಸಿಯಾಲ್ ಕೋಟ್ ನ ತನಿಖಾ ಕೇಂದ್ರದಲ್ಲಿಟ್ಟು ಚಿತ್ರ ಹಿಂಸೆ ನೀಡಲಾಯಿತು. ಅಂತಿಮವಾಗಿ 1985 ರಲ್ಲಿ ಪಾಕಿಸ್ಥಾನದ ಸುಪ್ರೀಂ ಕೋರ್ಟು ಗಲ್ಲು ಶಿಕ್ಷೆ ವಿಧಿಸಿತು. ನಂತರ ಅದನ್ನು ಜೀವಾವಧಿ ಶಿಕ್ಷೆಯನ್ನಾಗಿಯೂ ಮಾರ್ಪಡಿಸಲಾಯಿತು.
ಸುಮಾರು 16 ವರ್ಷಗಳವರೆಗೆ ಸಿಯಾಲ್ ಕೋಟ್, ಕೋಟ್ ಲಖಪತ್, ಮಿಯಾನ್ ವಾಲಿ, ಜೈಲುಗಳಲ್ಲಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಇವರಿಗೆ ಆಸ್ತಮಾ ಹಾಗೂ ಕ್ಷಯ ಖಾಯಿಲೆಗಳಿಗೆ ತುತ್ತಾದರು. ಜೈಲಿನಲ್ಲಿದ್ದರೂ ಅಲ್ಲಿಂದಲೇ ಭಾರತದ ತಮ್ಮ ಕುಟುಂಬಕ್ಕೆ ಗುಪ್ತ ಪತ್ರಗಳನ್ನು ಬರೆದಿದ್ದ ಅವರು ಅಲ್ಲಿ ತಾವು ಅನುಭವಿಸುತ್ತಿರುವ ಹಿಂಸೆ, ಹಾಗೂ ನೋವನ್ನು ತೋಡಿಕೊಂಡಿದ್ದರು.
ನಂತರ ತೀವ್ರ ಕ್ಷಯ ಹಾಗೂ ಹೃದಯ ಸಂಬಂದಿ ಖಾಯಿಲೆಗೆ ತುತ್ತಾಗಿ 2001 ರ ನವೆಂಬರ್ 21 ರಂದು ಮುಲ್ತಾನ್ ನ ನ್ಯೂ ಸೆಂಟ್ರಲ್ ಜೈಲ್ ನಲ್ಲೇ ಕೊನೆಯುಸಿರೆಳೆದರು. ಈ ಹೀರೋನನ್ನು ಜೈಲಿನ ಹಿಂಭಾಗದಲ್ಲೇ ಮಣ್ಣು ಮಾಡಲಾಯಿತು.












Click it and Unblock the Notifications