ಭ್ರಷ್ಟರಿಗೆ ಶಾಕ್, ಐದು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

ಶುಕ್ರವಾರ ಬೆಳಗ್ಗೆ ಬೆಂಗಳೂರು, ಕೊಡಗು, ಕೋಲಾರ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಡಿವೈಎಸ್ಪಿ ಪಾಲಾಕ್ಷ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಬೆಂಗಳೂರು : ರಾಜರಾಜೇಶ್ವರಿ ನಗರದಲ್ಲಿ ವಾಸಿಸುತ್ತಿರುವ ಪೌರಾಡಳಿತ ಇಲಾಖೆಯ ಪ್ರಥಮ ದರ್ಜೆ ಗುಮಾಸ್ತ ವೆಂಕಟೇಶ್ ಮತ್ತು ನಾಗರಬಾವಿಯಲ್ಲಿರುವ ಬಿಬಿಎಂಪಿ ಕಾರ್ಯನಿರ್ವಾಹಕ ಅಭಿಯಂತರ ಗೋವಿಂದಯ್ಯ ಅವರ ನಿವಾಸಗಳ ಮೇಲೆ ಡಿವೈಎಸ್ಪಿ ಪಾಲಾಕ್ಷ ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿವೆ.
ಕೋಲಾರ : ಕೋಲಾರ ಜಿಲ್ಲೆಯ ಮೂರು ಕಡೆ ಲೋಕಾಯಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ತಾಲೂಕು ಇಒ ಸಂಜಪ್ಪ, ಲೆಕ್ಕ ಪರಿಶೋಧಕ ಮುನಿವೆಂಕಟಪ್ಪ, ಮುಳಬಾಗಿಲು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್ ಅವರ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ದಾವಣಗೆರೆ : ಜಗಳೂರು ತಾಲೂಕಿನ ನೇರಲಗಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಅಜ್ಜಯ್ಯ ನಿವಾಸದ ಮೇಲೆ ಲೋಕಾಯುಕ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಿಂಗಾರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಅಕ್ರಮ ಸಂಪತ್ತಿಗೆ ಸಂಬಂಧಿಸಿದ ದಾಖಲೆ ಮತ್ತು ಚರ-ಚಿರಾಸ್ತಿಗಳ ವಿವರಗಳನ್ನು ವಶಪಡಿಸಿಕೊಂಡಿದ್ದಾರೆ.
ಕೊಡಗು : ಸಿಓಡಿ ಇನ್ಸ್ಪೆಕ್ಟರ್ ರಂಗಸ್ವಾಮಿ ಅವರ ಮಹದೇವಪೇಟೆ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಚಿತ್ರದುರ್ಗ ಆರ್ ಟಿಓ ಅಧಿಕಾರಿಯಾಗಿರುವ ನಜೀರ್ ಅಹಮ್ಮದ್ ಅವರಿಗೆ ಸೇರಿದ, ಮಡಿಕೇರಿಯ ಮಹದೇವಪೇಟೆಯಲ್ಲಿರುವ ನಿವಾಸದ ಮೇಲೂ ಲೋಕಾಯುಕ್ತ ಎಸ್ಪಿ ಜಗದೀಶ್ ಪ್ರಸಾದ್ ನೇತೃತ್ವದ ತಂಡ ದಾಳಿ ನಡೆಸಿದೆ.
ಚಿಕ್ಕಮಗಳೂರು : ಕೊಪ್ಪ ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ಎನ್.ಆರ್.ರಾಮಚಂದ್ರ ನಿವಾಸದ ಮೇಲೆ ಡಿವೈಎಸ್ಪಿ ಪ್ರಸನ್ನ ವಿ.ರಾಜು ನೇತೃತ್ವದ ತಂಡ ದಾಳಿ ನಡೆಸಿತು.












Click it and Unblock the Notifications