ಪುತ್ರನ ಹೆಸರಲ್ಲಿ ಸೇಡು ತೀರಿಸಿಕೊಂಡ ಸಿಎಂ ಸಿದ್ದು
ಸಿದ್ರಾಮಣ್ಣ ಅವರು ವರುಣ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ತೀವ್ರ ಜಿದ್ದಾಜಿದ್ದಿಗೆ ಬಿದ್ದಿದ್ದರು. ಅದರಲ್ಲೂ ಕಾಪು ಸಿದ್ದಲಿಂಗಸ್ವಾಮಿ ಎಂಬ ಭಾರಿ ಕುಳದ ವಿರುದ್ಧ ಎಲ್ಲಿ ಸೋತುಹೋಗುತ್ತೇನೋ ಎಂಬ ಆತಂಕದಲ್ಲಿದ್ದರು. ಹಾಗಾಗಿ ತಮ್ಮ ಜತೆಗೆ ಪುತ್ರನನ್ನೂ ಕಣದಲ್ಲಿ ಬಿಟ್ಟಿದ್ದರು. ಪುತ್ರನೋ ಸ್ವಲ್ಪ ಹುಂಬ. (ಚಿತ್ರದಲ್ಲಿ ಚಾಮುಂಡಿ ತಾಯಿಯ ಎಡಕ್ಕೆ ಇರುವವರು ಸಿದ್ದರಾಮಯ್ಯ- ಬಲ ಭಾಗದಲ್ಲಿ ಅರ್ಚಕರ ಪಕ್ಕದಲ್ಲಿ ರಾಕೇಶ್).
ಅಂದು ಮೇ 3 ಏನಾಗಿತ್ತೆಂದರೆ ಕಾಪು ತಮ್ಮ ಬೆಂಬಲಿಗರೊಡಗೂಡಿ ಚಾಮುಂಡಿ ತಾಯಿ ದರ್ಶನ ಪಡೆಯಲು ಬೆಟ್ಟ ಹತ್ತಿದ್ದಾರೆ. 'ವಾಪಸಿಳಿಯುವಾಗ ಸಿದ್ದರಾಮಯ್ಯ ಬೆಂಬಲಿಗರು ರಾಕೇಶ್ ನೇತೃತ್ವದಲ್ಲಿ ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ' ಎಂದು ಕೆಂಡಾಮಂಡಲರಾಗಿದ್ದಾರೆ.
ಎಲ್ಲೆಲ್ಲಿಗೋ ಹೋಗಿ ಕೊನೆಗೆ ಪೊಲೀಸ್ ಆಯುಕ್ತ ಸುಧೀರ್ ಬಳಿಗೆ ಬಂದು ಅಲವತ್ತುಕೊಂಡಿದ್ದಾರೆ. ಸುಧೀರ್, ತಕ್ಷಣ ನಜರ್ ಬಾದ್ ಠಾಣೆಯ ಇನ್ಸ್ ಪೆಕ್ಟರ್ ಜಿಎನ್ ಮೋಹನ್ ಅವರಿಗೆ ಆದೇಶ ನೀಡಿ, ಕೇಸು ದಾಖಲಿಸಿಕೊಳ್ಳುವಂತೆ ಹೇಳಿದ್ದಾರೆ.
ರಾಕೇಶನನ್ನು A1 ಮಾಡಿದ ಮೋಹನ್ ಆತನ ವಿರುದ್ಧ ಕೊಲೆ ಪ್ರಯತ್ನ ಕೇಸನ್ನು ದಾಖಲಿಸಿಕೊಂಡಿದ್ದರು. ಅದು ಸಿದ್ದರಾಮಯ್ಯನವರ ಕಿವಿಗೂ ಬಿದ್ದಿತ್ತು. ಆದರೂ ಅವಡುಗಚ್ಚಿ ಸುಮ್ಮನಿದ್ದರು. ಗೆಲ್ಲಲಿ ಆಮೇಲೆ ನೋಡೋಣ ಅಂದುಕೊಂಡು ಸುಮ್ಮನಾಗಿದ್ದರು. ಸಾಹೇಬರು ಮೇ 8ರಂದು ಗೆದ್ದೇಬಿಟ್ಟರು. ಅಷ್ಟೇ ಅಲ್ಲ ನಿಯೋಜಿತ ಮುಖ್ಯಮಂತ್ರಿಯೂ ಆಗಿಬಿಟ್ಟರು.
ಅದೇ ಉತ್ಸಾಹದಲ್ಲಿ ಮೈಸೂರಿಗೆ ಬಂದಿದ್ದರು. ಆಗ ಅವರ ಕಣ್ಣಲ್ಲಿ ಪುತ್ರ ವ್ಯಾಮೋಹ ಸುಳಿದಾಡಿದೆ. ತಕ್ಷಣವೇ, ಯಾವನ್ಲೇ ಅವನು ನನ್ನ ಮಗನ ವಿರುದ್ಧ ಅಂದು ಕೇಸು ಹಾಕಿದ್ದು. ಅವನನ್ನು ನೀರು-ನೆರಳು ಇಲ್ಲದ ಕಡೆಗೆ ಎತ್ಹಾಕಿ ಎಂದು ಫರ್ಮಾನು ಹೊರಡಿಸಿಯೇ ಬಿಟ್ರು.
ಆದರೆ ಹಿರಿಯ ಅಧಿಕಾರಿಗಳು (ಮೈಸೂರು ಪೊಲೀಸ್ ಆಯುಕ್ತ ಕೆಎಲ್ ಸುಧೀರ್) ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರ್ತವ್ಯಲೋಪದಡಿ ಮೋಹನ್ ಅವರನ್ನು ಅಮಾನತುಗೊಳಿಸಿಬಿಟ್ಟಿದ್ದಾರೆ.
ಜೈಹೋ ಸಿದ್ದೂಜಿ! ಅಂದಹಾಗೆ ಅವರೆಲ್ಲಿ? ಸ್ವಘೋಷಿತ ಪ್ರತಿಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ. ಈ ಕೇಸು ಇನ್ನೂ ಅವರ ಗಮನಕ್ಕೆ ಬಂದಂತಿಲ್ಲ.
ಪುತ್ರ ವ್ಯಾಮೋಹಕ್ಕೆ ಸಿಕ್ಕಿ ಎಂತೆಂಥಾ ನಾಯಕರೋ ಮಾಡಬಾರದ್ದನ್ನೆಲ್ಲ ಮಾಡಿರುವುದು ನಮ್ಮ ಸಿದ್ದೂಗೂ ಚೆನ್ನಾಗಿ ಗೊತ್ತು. ಏಕೆಂದರೆ ಈ ಹಿಂದೆ ಅದರ ವಿರುದ್ಧ ಮೊದಲು ದನಿ ಎತ್ತುತ್ತಿದ್ದವರು ಅವರೇ. ಆದರೆ ಈಗ ಅವರೇ ಮುಖ್ಯಮಂತ್ರಿಯಾಗಿಬಿಟ್ಟಿದ್ದಾರೆ. ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಪುತ್ರ ವ್ಯಾಮೋಹ ಬಂದು ಅವರ ಕಾಲಿಗೆ ತೊಡರಿಕೊಂಡಿದೆ.
ಅಂದಹಾಗೆ ಇದೇ ಸಿದ್ದು ಅವರು ಮುಖ್ಯಮಂತ್ರಿಯಾಗಿ ಮೊದಲ ಬಾರಿ ದಿಲ್ಲಿಗೆ ಹೋದಾಗ ಇದೇ ರಾಕೇಶ್, ಅಪ್ಪನ ಹಿಂದೆ-ಮುಂದೆ ವಿಜೃಂಭಿಸುತ್ತಿದ್ದರಂತೆ! Come on, Siddu. ಏನಿದೆಲ್ಲ !?