16 ವರ್ಷಗಳ ನಿರಾಸೆ, ಹತಾಶೆ ಇಂದಿಗೆ ಕೊನೆಯಾಯ್ತು
ಬೆಂಗಳೂರು, ಮೇ 13: ಅಕ್ಷಯ ತೃತೀಯ; ಇಂದು ಸಿದ್ದರಾಮಯ್ಯ ಅವರಿಗೆ ಪಟ್ಟಾಭಿಷೇಕ - ನಾಡಿಗೆ ಅಕ್ಷಯವಾಗಲಿ ಎಂದು ಬಯಸುತ್ತಾ... ಅದು ಬರೋಬ್ಬರಿ 16 ವರ್ಷಗಳಿಂದ ಮಡುಗಟ್ಟಿದ್ದ ಆಕಾಂಕ್ಷೆ/ ಹತಾಶೆ. ಮೂರನೆಯ ಪ್ರಯತ್ನವಾಗಿ ಇಂದಿಗೆ ಅದು ತಿಳಿಯಾಗಲಿದೆ.
ಮೇ 13ರ ಬೆಳಗ್ಗೆ ಕರ್ಕ ಲಗ್ನದ ಅಭಿಜಿನ್ ಮುಹೂರ್ತದಲ್ಲಿ 11:52ಕ್ಕೆ ಕರಾರುವಕ್ಕಾಗಿ ಸಿದ್ದರಾಮನ ಹುಂಡಿ ಸಿದ್ದರಾಮಯ್ಯ ಅವರು ರಾಜ್ಯದ 28ನೆಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಮಾರಂಭಕ್ಕೆ ನಗರದ ಕಂಠೀರವ ಕ್ರೀಡಾಂಗಣ ನವ ವಧುವಿನಂತೆ ಸಿಂಗಾರಗೊಂಡಿದೆ. 16 ವರ್ಷಗಳ ಹಿಂದೆ ಇದೇ ಕಂಠೀರವ ಸ್ಟೇಡಿಯಂನಲ್ಲಿ ನ್ಯಾಷನಲ್ ಗೇಮ್ಸ್ ನಡೆದಾಗ ಹೊಚ್ಚಹೊಸ ಸ್ಟೇಡಿಯಂ ಎಲ್ಲರ ಮನೆಮಾತಾಗಿತ್ತು. ಆಗ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಬಹುಶಃ ಅದಾದ ನಂತರ ಕಂಠೀರವ ಸ್ಟೇಡಿಯಂ ಮತ್ತೆ ಅಂತಹ ಸಮಾರಂಭಕ್ಕೆ ಇಂದು ಸಾಕ್ಷಿಯಾಗಲಿದೆ.

ಬಿಜೆಪಿ, ಜೆಡಿಎಸ್, ಕೆಜೆಪಿ ಮುಖಂಡರೂ: ಸಮಾರಂಭಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಆಹ್ವಾನ ನೀಡಲಾಗಿತ್ತು. ಆದರೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಅವರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ. ಸಮಾರಂಭದಲ್ಲಿ ಬಿಜೆಪಿ, ಜೆಡಿಎಸ್, ಕೆಜೆಪಿ ಮುಖಂಡರೂ ಪಾಲ್ಗೊಳ್ಳಲಿದ್ದಾರೆ.
ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ, ಎಐಸಿಸಿ ಕಾರ್ಯದರ್ಶಿ ಹನುಮಂತರಾವ್, ಶಾಂತಾರಾಮ್ ನಾಯಕ್, ಬಿ.ಕೆ. ಹರಿಪ್ರಸಾದ್, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ ರೆಹಮಾನ್ ಖಾನ್, ಕೆಎಚ್ ಮುನಿಯಪ್ಪ, ಆಸ್ಕರ್ ಫರ್ನಾಂಡಿಸ್, ಲೂಸಿಯಾನೊ ಫೆಲೋರೊ, ಪೃಥ್ವಿರಾಜ್ ಚೌಹಾಣ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಹೇಳಬೇಕು ಅಂದರೆ ಅದು ನಾಲ್ಕು ದಶಕಗಳ ರಾಜಕೀಯ ಸಂಘರ್ಷ, ಮಂಥನ. ಆದರೆ ತೀರಾ 16 ವರ್ಷಗಳಿಂದೀಚೆಗೆ ಸಿದ್ದರಾಮಯ್ಯ ಅವರಲ್ಲಿ ಮಡುಗಟ್ಟುತ್ತಾ ಬಂದಿದ್ದ ಆಕಾಂಕ್ಷೆ ಹತಾಶೆ ತೀವ್ರವಾಗಿ ಮೂರನೆಯ ಪ್ರಯತ್ನದಲ್ಲಿ ಇಂದು ಅವರ ಮಹದಾಸೆ ಸಾಕಾರಗೊಳ್ಳುತ್ತಿದೆ. ರಾಜಕೀಯದ ಅವಿಭಾಜ್ಯ ಅಂಗವಾದ ರಾಜಿ ಮನೋಭಾವಕ್ಕೆ ಎಂದಿಗೂ ತಲೆಬಾಗದ ಸಿದ್ದರಾಮಯ್ಯ ತಮ್ಮ ಬಳಿಗೇ ಆ ಅತ್ಯುನ್ನತ ಪದವಿ ಅರಸಿಕೊಂಡು ಬರುವಂತೆ ಮಾಡಿದ್ದಾರೆ.
ಸಂದರ್ಭ -1: ಹೌದು, 16 ವರ್ಷಗಳ ಹಿಂದೆಯೇ ಅವರು ಮುಖ್ಯಮಂತ್ರಿ ಆಗಬೇಕಿತ್ತು. 1996ರಲ್ಲಿ ಜನತಾ ದಳ ಮುಖಂಡ ದೇವೇಗೌಡರು ಪ್ರಧಾನಿಯಾದಾಗ ತೆರವು ಮಾಡಿದ ಮುಖ್ಯಮಂತ್ರಿ ಪದವಿ ಸ್ಪಲ್ಪದರಲ್ಲಿ ಸಿದ್ದರಾಮಯ್ಯ ಕೈ ಜಾರಿ ಜೆಎಚ್ ಪಟೇಲ್ ಪಾಲಾಯಿತು. ಆಗ ಹಣಕಾಸು ಖಾತೆಯೊಂದಿಗೆ ಉಪಮುಖ್ಯಮಂತ್ರಿಯೂ ಆದ ಸಿದ್ದರಾಮಯ್ಯ ಅವರು ಜನತಾ ದಳದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾದರು.
ಸಂದರ್ಭ -2: ಮುಂದೆ ದಳ ಹೋಳಾಗಿ ಸಿದ್ದರಾಮಯ್ಯನವರು ದೇವೇಗೌಡರ ಪಾಳೆಯದಲ್ಲೇ ಉಳಿದಾಗ... 2004 ರಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚನೆಯಾದಾಗ... ಸಹಜವಾಗಿಯೇ ಮುಖ್ಯಮಂತ್ರಿಯಾಗಬೇಕಿದ್ದವರು ಸಿದ್ದು.
ಆದರೆ ದೇವೇಗೌಡರ ಒಳ ರಾಜಕೀಯದ ಫಲವಾಗಿ ಆ ಗದ್ದುಗೆ ಕಳೆದುಕೊಂಡ ಸಿದ್ದರಾಮಯ್ಯ ಮುಂದೆ ಉಪ ಮುಖ್ಯಮಂತ್ರಿ ಸ್ಥಾನದ ಜತೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಮತ್ತೆ ವಂಚನೆಗೊಳಗಾಗಿಬಿಟ್ಟೆನಲ್ಲಾ ಎಂಬ ಭಾವ ಅವರಲ್ಲಿ ಮನೆಮಾಡಿತು. ಹಾಗೆ ಮಡುವುಗಟ್ಟುತ್ತಾ ಬಂದ ಹತಾಶ ಭಾವ ಇಂದಿಗೆ ತಿಳಿಯಾಗಲಿದೆ. 16 ವರ್ಷ ಹಿಂದೆ ತೊಟ್ಟ ಸಂಕಲ್ಪವನ್ನು ಸಿದ್ದು ಇಂದು ಈಡೇರಿಸಿಕೊಳ್ಳುವ ಮೂಲಕ ದೇವೇಗೌಡರಿಗೆ ...! (ಚಿತ್ರ ಕೃಪೆ: ಹಿರಿಯ ವ್ಯಂಗ್ಯ ಚಿತ್ರಕಾರ ಪಿ. ಮಹಮದ್)












Click it and Unblock the Notifications