ಚುನಾವಣಾ ಕಣದಲ್ಲಿ ಸೋತ ಅಧಿಕಾರಿಗಳು

ಖಾಕಿ ಕಳಚಿಟ್ಟು ವಿಧಾನಸಭೆ ಪ್ರವೇಶಿಸಲು ಮುಂದಾಗಿದ್ದ ಮಾಜಿ ಐಎಎಸ್ ಅಧಿಕಾರಿಗಳಿಗೆ ಜನ ಬೆಂಬಲ ನೀಡಿಲ್ಲ. ಚುನಾವಣೆ ಕಣದಲ್ಲಿದ್ದ ಮಾಜಿ ಐಎಎಸ್, ಕೆಎಎಸ್ ಅಧಿಕಾರಿಗಳು ಸಹ ರಾಜಕಾರಣಿಗಳ ಮುಂದೆ ಸೋಲು ಅನುಭವಿಸಿದ್ದಾರೆ.
ಹ್ಯಾಟ್ರಿಕ್ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದ ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಪೊಲೀಸ್ ಅಧಿಕಾರಿ ಬಿ.ಸಿ.ಪಾಟೀಲ್ ಸಹ ಸೋಲು ಅನುಭವಿಸಿದ್ದು, ಪಕ್ಷ ಅಧಿಕಾರ ಪಡೆಯುವ ಸಮಯದಲ್ಲಿ ಅವರು ಸೋಲು ಅನುಭವಿಸಿದ್ದಾರೆ.
ಸಾಲು-ಸಾಲು ಅಧಿಕಾರಿಗಳು ಈ ಬಾರಿಯ ಚುನಾವಣೆಯ ಅಖಾಡಕ್ಕೆ ಇಳಿದಿದ್ದರು. ಆದರೆ, ಯಾವ ಅಧಿಕಾರಿಗಳಿಗೂ ಗೆಲುವು ದೊರಕಿಲ್ಲ. ಪೊಲೀಸ್ ಅಧಿಕಾರಿಗಳಾಗಿದ್ದಾಗ ಪ್ರಸಿದ್ಧಿ ಪಡೆದಿದ್ದ ಅಧಿಕಾರಿಗಳು, ಖಾದಿ ತೊಟ್ಟಾಗ ಮತದಾರರ ಪ್ರೀತಿಗೆ ಪಾತ್ರವಾಗಿಲ್ಲ.
ಸೋತ ಪ್ರಮುಖರು : ಜೆಡಿಎಸ್ ನಿಂದ ಗಾಂಧಿನಗರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಸುಭಾಷ್ ಭರಣಿ 7418 ಮತಗಳನ್ನು ಪಡೆದು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಜಯಗಳಿಸಿದ್ದಾರೆ.
ಮಲ್ಲೇಶ್ವರಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ್ ವಿರುದ್ಧ ಅಖಾಡಕ್ಕೆ ಇಳಿದಿದ್ದ ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ 36543 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.
ಮೈಸೂರಿನ ಸಹಾಯಕ ಪೊಲೀಸ್ ಆಯಕ್ತರಾಗಿದ್ದ ಚೆಲುವರಾಜ್ ಜೆಡಿಎಸ್ ಅಭ್ಯರ್ಥಿಯಾಗಿ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಅಖಾಡಕ್ಕೆ ಇಳಿದಿದ್ದರು. 2686 ಮತಗಳನ್ನು ಪಡೆದು ಅವರು ಮೂರನೇ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಸಿದ್ದರಾಮಯ್ಯ ಚೆಲುವರಾಜ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.
ಶಿಕಾರಿಪುರ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಲು ಕೆಎಎಸ್ ನೌಕರಿಗೆ ಗುಡ್ ಬೈ ಹೇಳಿ ಖಾದಿ ತೊಟ್ಟಿದ್ದ ಹೆಚ್.ಟಿ.ಬಳಿಗಾರ್ 15007 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಬಳಿಗಾರ್ ಗೆ ಸೋಲುಣಿಸುವ ಮೂಲಕ ಯಡಿಯೂರಪ್ಪ ಶಿಕಾರಿಪುರ ಕಿಂಗ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಉಳಿದಂತೆ ಜೆಡಿಎಸ್ ಅಭ್ಯರ್ಥಿಯಾಗಿ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾರಾಯಣ ಗೌಡ, ಜೆಡಿಎಸ್ ನ ಮಧುಗಿರಿ ಕ್ಷೇತ್ರದ ಅಭ್ಯರ್ಥಿ ವೀರಭದ್ರಯ್ಯ, ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಿ.ಎ.ಬಾವಾ, ಕೆಜೆಪಿಯ ಶಿವಾಜಿನರ ಕ್ಷೇತ್ರದ ಅಭ್ಯರ್ಥಿ ಐ.ಆರ್.ಪೆರುಮಾಳ್, ಬಿಜೆಪಿಯ ಗುರುಮಿಟ್ಕಲ್ ಕ್ಷೇತ್ರದ ಅಭ್ಯರ್ಥಿ ಗಿರೀಶ್ ಮಟ್ಟಣ್ಣವರ್ ಸೋಲು ಅನುಭವಿಸಿದ್ದಾರೆ.












Click it and Unblock the Notifications