ಪ್ರಧಾನಿಯನ್ನು ಗಾಂಧಿ ವಂಶಕ್ಕೆ ಸೇರಿಸಿದ : ಸಿದ್ದು

ವರುಣಾ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ಕಾಂಗ್ರೆಸ್ ಗೆಲುವಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಧಾನಿ ಮಹಮೋಹನ್ ಸಿಂಗ್ ಗಾಂಧಿ ಅವರ ಶ್ರಮ" ಸಹ ಕಾರಣ ಎಂದು ಹೇಳಿದರು.
ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳದೆ ಮುಂದೆ ಮಾತನಾಡುತ್ತಲೇ ಹೋದರು. ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ಸಿದ್ದರಾಮಯ್ಯ ಅವರ ಈ ಎಡವಟ್ಟಿಗೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಿದ್ದರಾಮಯ್ಯ ಪ್ರತಿಕ್ರಿಯೆಯ ಮುಖ್ಯಾಂಶಗಳು : ಭ್ರಷ್ಟಾಚಾರ ರಹಿತವಾದ, ಸ್ಥಿರ ಸರ್ಕಾರ ನೀಡುವುದು ಕಾಂಗ್ರೆಸ್ ಪಕ್ಷದ ಗುರಿಯಾಗಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸುಸ್ಥಿರ ಸರ್ಕಾರವನ್ನು ಜನರಿಗೆ ನೀಡುತ್ತೇವೆ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಹೈ ಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಚಾರ ನಡೆಸಿದ್ದರಿಂದ ಕಾಂಗ್ರೆಸ್ ಗೆಲುವು ಸುಲಭವಾಯಿತು. ರಾಜ್ಯದಲ್ಲಿ ಐದು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಭ್ರಷ್ಟಾಚಾರ ರಹಿತವಾದ, ಸ್ಥಿರ ಸರ್ಕಾರವನ್ನು ನಾವು ಜನರಿಗೆ ನೀಡಿ ಜನರು ನಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ.
ಯಡ್ಡಿ ಶಿಷ್ಯನಿಗೆ ಸಖತ್ ಸೋಲು : ಸುಮಾರು ಮೂರು ವರ್ಷಗಳಿಂದ ವರುಣಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಹಾಯಕ ಕಾಪು ಸಿದ್ದಲಿಂಗ ಸ್ವಾಮಿ ಸಿದ್ದರಾಮಯ್ಯ ಅವರ ಮುಂದೆ ಸೋತು ಶರಣಾಗಿದ್ದಾರೆ.30 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿರುವ ಸಿದ್ದರಾಮಯ್ಯ ಮೊದಲ ಚುನಾವಣೆಯಲ್ಲಿ ಸಿದ್ದಲಿಂಗ ಸ್ವಾಮಿಗೆ ಸೋಲುಣಿಸಿದ್ದಾರೆ.
ವರುಣಾ ಕ್ಷೇತ್ರದಲ್ಲಿನ ಮತದಾರರ ತೀರ್ಪು
ಸಿದ್ದರಾಮಯ್ಯ - 84385
ಕಾಪು ಸಿದ್ದಲಿಂಗ ಸ್ವಾಮಿ - 54744
ಚೆಲುವರಾಜ್ ಜೆಡಿಎಸ್ - 2686











Click it and Unblock the Notifications