ಹಿಂಬಾಗಿಲ ಮಾತುಕತೆಗೆ ಅನಂತ್ ಕುಮಾರ್ ನೇಮಕ

ಹಲವಾರು ಸಂಸ್ಥೆಗಳು, ಟಿವಿ ಚಾನಲ್ಲುಗಳು, ವೆಬ್ ಸೈಟುಗಳು ನಡೆಸಿರುವ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಪಕ್ಷ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳುವುದು ಖಚಿತ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಹಿಂಬಾಗಿಲ ಮಾತುಕತೆಗೆ ಅನಂತ್ ಕುಮಾರ್ ಅವರನ್ನು ನೇಮಕ ಮಾಡಿರುವುದು ಭಾರೀ ಆಸಕ್ತಿ ಕೆರಳಿಸಿದೆ.
2008ರ ಚುನಾವಣೆಯಲ್ಲಿ ಪಡೆದುಕೊಂಡಿದ್ದ ಅಧಿಕಾರವನ್ನು ಮರಳಿಪಡೆಯಲು ಬಿಜೆಪಿ ಹರಸಾಹಸ ಪಡಬೇಕಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದಿರುವ ಹಲವಾರು ಹಗರಣಗಳಿಂದ ಬಿಜೆಪಿ ವರ್ಚಸ್ಸು ಮುಕ್ಕಾಗಿರುವುದು ಮಾತ್ರವಲ್ಲ, ಅನೇಕ ಶಾಸಕರು ಪಕ್ಷ ಬಿಟ್ಟು ಕೆಜೆಪಿ ಸೇರಿರುವುದು ಪಕ್ಷಕ್ಕೆ ಭಾರೀ ಹೊಡೆತ ಕೊಟ್ಟಂತಾಗಿದೆ.
ಒಂದು ವೇಳೆ ಬಹುಮತ ದೊರೆಯದಿದ್ದರೆ ಮುಂದೇನು ಮಾಡಬೇಕು ಎಂಬುದು ಬಿಜೆಪಿ ಮುಂದಿರುವ ಬೃಹತ್ ಪ್ರಶ್ನೆ. ಈ ನಿಟ್ಟಿನಲ್ಲಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಇಚ್ಛಿಸುವ ಪಕ್ಷಗಳೊಂದಿಗೆ ಕೈಜೋಡಿಸುವ ಕುರಿತು ಸಾಕಷ್ಟು ಚರ್ಚೆಗಳು ಮತ್ತು ಮಾತುಕತೆಗಳು ನಡೆದಿವೆ. ಈ ಮಾತುಕತೆಗಳು ಅನಂತ್ ಅವರ ಪ್ರವೇಶದಿಂದ ಮತ್ತಷ್ಟು ತೀವ್ರಗೊಳ್ಳಲಿವೆ.
ಯಡಿಯೂರಪ್ಪನವರು ತಮ್ಮ ಪಟಾಲಂನೊಂದಿಗೆ ಬಿಜೆಪಿಯಿಂದ ಹೊರಬಿದ್ದಿರುವುದು ಬಿಜೆಪಿಯನ್ನು ದುರ್ಬಲ ಮಾಡಿರುವುದು ಮಾತ್ರವಲ್ಲ, ಪಕ್ಷದಲ್ಲಿ ಯಡಿಯೂರಪ್ಪನವರಷ್ಟು ಸಮರ್ಥ ನಾಯಕತ್ವ ಇಲ್ಲದಿರುವುದು ಅನೇಕ ಸಮಸ್ಯೆಗಳನ್ನು ತಂದಿಟ್ಟಿರುವುದು ಸತ್ಯ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೇ ಮುಖ್ಯಮಂತ್ರಿ ಎಂದು ಘೋಷಿಸಿ ಚುನಾವಣೆಯನ್ನು ಎದುರಿಸಿರುವುದು ಬಿಜೆಪಿಗೆ ಅಷ್ಟೊಂದು ಲಾಭದಾಯಕವಾಗಿ ಪರಿಣಮಿಸಿದ ಹಾಗೆ ಕಾಣುತ್ತಿಲ್ಲ.
ಈ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ, ಅಧಿಕಾರವನ್ನು ಹಿಡಿದಿಟ್ಟುಕೊಳ್ಳಲು ಎಲ್ಲ ತಂತ್ರಗಾರಿಕೆಯನ್ನು ರೂಪಿಸಬೇಕಾಗಿದೆ. ಅನಂತ್ ಕುಮಾರ್ ಅವರು ಈ ತಂತ್ರಗಾರಿಕೆಯಲ್ಲಿ ಯಶಸ್ವಿಯಾಗುತ್ತಾರಾ? ಕಾಂಗ್ರೆಸ್ ಗದ್ದುಗೆ ಮರಳಿ ಪಡೆಯದಂತೆ ತಡೆಯಲು ಯಾವ ಪಕ್ಷದೊಂದಿಗೆ ಬಿಜೆಪಿ ಕೈಜೋಡಿಸಲಿದೆ? ಈ ತಂತ್ರಗಾರಿಕೆಗೆ ಕಾಂಗ್ರೆಸ್ ಅಥವಾ ಕೆಜೆಪಿ ಯಾವ ಪ್ರತಿತಂತ್ರ ರೂಪಿಸಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುವುದು ಯಾವ ಪಕ್ಷಕ್ಕೆ ಎಷ್ಟು ಸೀಟುಗಳು ಲಭಿಸಿವೆ ಎಂಬುದರ ಮೇರೆಗೆ. [ಯಾರಿಗೆ ಗೆಲುವು, ಯಾರಿಗೆ ಸೋಲು?]












Click it and Unblock the Notifications