ಅನಿಲ್ ಲಾಡ್ ಮತ್ತು ಇಪ್ಪತ್ತು ಪಕ್ಷೇತರರ ಹಣಾಹಣಿ
ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಗಾಗಿ ಡಜನ್ ಗೂ ಅಧಿಕ ಆಕಾಂಕ್ಷಿಗಳಿದ್ದರು. ಅವರೆಲ್ಲರ ನಡುವೆ ಟಿಕೆಟ್ ಪಡೆದು ಬಂದ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಜಿಲ್ಲೆಯಲ್ಲಿ ಬಂಡಾಯದಿಂದ ಕೈಸುಟ್ಟುಕೊಂಡಿದ್ದಾರೆ. ಪ್ರಚಾರ ನಡೆಸಲು ಕಾರ್ಯಕರ್ತರಿಲ್ಲದೆ ಲಾಡ್ ಒಂಟಿಯಾಗಿದ್ದಾರೆ.
2004ರಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಲಾಡ್, 2008ರಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಮಶೇಖರ ರೆಡ್ಡಿ ವಿರುದ್ದ 1022 ಮತಗಳಿಂದ ಸೋಲು ಅನುಭವಿಸಿದ್ದರು. ನಂತರ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.
ಈ ಬಾರಿ ಚುನಾವಣೆಗೆ ಸೋಮಶೇಖರ ರೆಡ್ಡಿ ಸ್ಪರ್ಧಿಸುತ್ತಿಲ್ಲ ಎಂಬುವುದು ಲಾಡ್ ಗೆ ಸಂತಸ ತಂದರೆ ಮುಖಾಮುಖಿಯಾಗಿ 20 ಪಕ್ಷೇತರರು ಕಣದಲ್ಲಿರುವುದು ಕಂಗೆಡುವಂತೆ ಮಾಡಿದೆ. ಜೊತೆಗೆ ಪಕ್ಷದ ಬಂಡಾಯದ ಬಿಸಿಯಿಂದ ಲಾಡ್ ಗೆಲುವಿಗಾಗಿ ಪ್ರಯಾಸ ಪಡಬೇಕಾದ ಅನಿವಾರ್ಯತೆ ಇದೆ.
ಜಾತಿ ಲೆಕ್ಕಾಚಾರ : ಬಳ್ಳಾರಿ ನಗರ ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಲಿಂಗಾಯತ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಬಿಜೆಪಿ ಮತ್ತು ಬಿಎಸ್ಆರ್ ಲಿಂಗಾಯತರಿಗೆ, ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಮತ ವಿಭಜನೆ ಯಾಗುವ ಭೀತಿಯನ್ನು ಲಾಡ್ ಗೆ ಉಂಟು ಮಾಡಿದೆ.
ಸೋಮಶೇಖರ ರೆಡ್ಡಿ ಸ್ಥಾನಕ್ಕೆ ಬಿಜೆಪಿ ಬಳ್ಳಾರಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಗೌಡ ಹುರಿಯಾಳು. ಲಿಂಗಾಯತ ಸಮುದಾಯದ ಇವರಿಗೆ ಇದು ಮೊದಲ ಚುನಾವಣೆ. ಮದ್ಯದ ಉದ್ಯಮಿ ಮತ್ತು ತೆಲಗು ನಟ ಚಿರಂಜೀವಿ ದೂರದ ಸಂಬಂಧಿ ಎಸ್. ಮುರಳಿ ಕೃಷ್ಣ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಇವರಿಗೂ ಇದು ಚೊಚ್ಚಲ ಚುನಾವಣೆ.
ಜೆಡಿಎಸ್ ಮುಸ್ಲಿಂ ಸಮುದಾಯದ ಅಲ್ಲಾ ಬಕಾಶ್ (ಮುನ್ನಾಬಾಯಿ) ಅವರನ್ನು ಕಣಕ್ಕಿಳಿಸಿದೆ. ಕೆಜೆಪಿ ಅಭ್ಯರ್ಥಿಗಳನ್ನೇ ಘೋಷಿಸಿದೆ ಮತ್ತೊಂದು ತಂತ್ರ ರಚಿಸಿದೆ. 20 ಪಕ್ಷೇತರರು ಕಣದಲ್ಲಿದ್ದು, ಪಾರ್ಥಸಾರಥಿ ಪ್ರಮುಖರಾಗಿದ್ದಾರೆ.
ಬಂಡಾಯದ ಬಿಸಿಯನ್ನು ಮೀರಿ ಕಳೆದು ಚುನಾವಣೆಯಲ್ಲಿ ಸೋತಿದ್ದೆ ಎಂಬ ಅನುಕಂಪದ ಆಧಾರದ ಮೇಲೆ ಲಾಡ್ ಒಂಟಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ಕೆ.ಸಿ.ಕೊಂಡಯ್ಯ, ದಿವಾಕರ ಬಾಬು ಮುಂತಾದ ಟಿಕೆಟ್ ಆಕಾಂಕ್ಷಿಗಳು ಪ್ರಚಾರದಿಂದಲೂ ದೂರು ಉಳಿದಿದ್ದು, ಲಾಡ್ ನಿದ್ದೆಗೆಡಿಸಿದೆ.
ಮತದಾನಕ್ಕೆ ಎರಡು ದಿನಗಳು ಬಾಕಿ ಉಳಿದಿವೆ. ಪ್ರತಿ ಪಕ್ಷೇತರರು 20 ಮತಗಳನ್ನು ಪಡೆದರೂ ಸಾಕು ಅನಿಲ್ ಲಾಡ್ ಹಾದಿ ಕಠಿಣವಾಗಲಿದೆ. ಬಂಡಾಯ, ಪಕ್ಷೇತರರು ಮುಂತಾದ ಸವಾಲುಗಳನ್ನು ಮೀರಿ ಅನಿಲ್ ಲಾಡ್ ಈ ಬಾರಿ ವಿಧಾನಸಭೆ ಪ್ರವೇಶಿಸುತ್ತಾರೆಯೇ ಎಂದು ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ