ಮತದಾನ : ತವರಿಗೆ ವಲಸಿಗರು ಉದ್ಯಮಗಳಿಗೆ ಸಂಕಷ್ಟ

ಬೆಂಗಳೂರು, ಮಹಾರಾಷ್ಟ್ರ, ಗೋವಾ, ಮೈಸೂರು, ಮುಂಬೈ ಹೀಗೆ ವಿವಿಧ ನಗರಗಳಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಉದ್ಯೋಗ, ವಿದ್ಯಾಭ್ಯಾಸ ಮುಂತಾದ ಅಗತ್ಯಗಳಿಗಾಗಿ ಬಂದವರು ಮತದಾನ ಮಾಡಲು ತವರಿನ ಹಾದಿ ಹಿಡಿದಿದ್ದಾರೆ.
ಹೀಗೆ ವಲಸೆ ಹೋದವರನ್ನು ತವರಿಗೆ ಕರೆತರುವುದು ಒಂದು ಕಮೀಷನ್ ಉದ್ಯಮವಾಗಿ ಬೆಳೆದು ನಿಂತಿದೆ. ವಲಸಿಗರನ್ನು ಲಾರಿ, ರೈಲುಗಳ ಮೂಲಕ ಕ್ಷೇತ್ರಕ್ಕೆ ಕರೆತಂದು ಮತದಾನ ಮಾಡಿಸುವ ಅಭ್ಯರ್ಥಿಗಳಿಗೆ ಈ ಬಾರಿ ಕೊಂಚ ಹಿನ್ನಡೆ ಉಂಟಾಗಿದೆ.
ವಲಸಿಗರಿಗೆ ಆಮಿಷವೊಡ್ಡಿ ಮತದಾನಕ್ಕೆ ಕರೆತರುವ ಅಭ್ಯರ್ಥಿಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಆದ್ದರಿಂದ ಮೂರು ಅಥವ ನಾಲ್ಕು ದಿನ ಮುಂಚಿತವಾಗಿಯೇ ವಲಸಿಗರು ನಗರ ತೊರೆಯುತ್ತಿದ್ದಾರೆ. ವಲಸಿಗರ ತವರು ಪಯಣದಿಂದಾಗಿ ಬೆಂಗಳೂರಿನ ಕಟ್ಟಡ ಕಾಮಗಾರಿಗಳು ಬಹುತೇಕ ನಿಂತು ಹೋಗಿವೆ.
ಕಮೀಷನ್ ಉದ್ಯಮ : ಪರ ಉರುಗಳಲ್ಲಿ ವಾಸಿಸುತ್ತಿರುವ ಜನರ ವಿವರ ಕೆಲ ಹಾಕಿರುವ ಅಭ್ಯರ್ಥಿಗಳ ಹಿಂಬಾಲಕರು, ಅವರನ್ನು ಕರೆಸಿ ಮತ ಹಾಕಿಸಲು ಅಗತ್ಯ ಸಿದ್ದತೆ ಮಾಡಿಕೊಂಡಿದ್ದಾರೆ. ಇಲ್ಲಿಂದಲೇ ಕೆಲವರಿಗೆ ದುಡ್ಡುಕೊಟ್ಟು ಕರೆದುಕೊಂಡು ಹೋಗುವುದು ಒಂದು ತಂತ್ರ.
ಆಯೋಗದ ಕಣ್ಣು ತಪ್ಪಿಸಲು ನಗರಗಳಿಂದ ವಾಹನ ಮಾಡಿಕೊಂಡು ಬಂದು ಮತ ಹಾಕುವ ಜನರಿಗೆ ಖರ್ಚು ವೆಚ್ಚ ನೀಡುವುದು ಮತ್ತೊಂದು ಮತ್ತೊಂದು ತಂತ್ರವಾಗಿದೆ. ಬೆಂಗಳೂರಿನಿಂದಲೇ ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳುವ ವಲಸಿಗರು ಈಗಾಗಲೇ ವಾಹನ್ ಬುಕ್ ಮಾಡಿದ್ದಾರೆ.
ತಮ್ಮ ಕ್ಷೇತ್ರಕ್ಕೆ ಹೋಗಿ ಮತದಾನ ಮಾಡಿದ ನಂತರ ಇವರಿಗೆ ಅಭ್ಯರ್ಥಿಗಳು ಬೆಂಬಲಿಗರು ಖರ್ಚು ವೆಚ್ಚ ನೀಡುತ್ತಾರೆ. ನಗರಗಳ ಕಟ್ಟಡ, ಹೋಟೆಲ್, ಗಾರ್ಮೆಂಟ್ಸ್ ಮುಂತಾದ ಅಸಂಘಟಿತ ವಲಯದ ಕಾರ್ಮಿಕರು ಕೆಲವರು ಈಗಾಗಲೇ ತವರಿಗೆ ಮರಳಿದ್ದಾರೆ. ಕೆಲವರು ಇಂದು ಅಥವ ನಾಳೆ ನಗರ ತೊರೆಯಲಿದ್ದಾರೆ.
ಉತ್ತರ ಕರ್ನಾಟಕದವರು ಹೆಚ್ಚು : ಉತ್ತರ ಕರ್ನಾಟಕದಲ್ಲಿ ಮಳೆ ಬರಲಿಲ್ಲ ಎಂದು ಅನ್ನ ಅರಸಿ ಜನರು ಪಟ್ಟಣ ಸೇರುತ್ತಾರೆ. ಮಳೆಗಾಲ ಪ್ರಾರಂಭವಾಗುವವರೆಗೂ ಅವರು ತವರಿಗೆ ಮರಳುವುದಿಲ್ಲ. ಆದರೆ, ಈ ಬಾರಿ ಚುನಾವಣೆ ಎದುರಾಗಿರುವುರಿಂದ ಒಂದು ತಿಂಗಳು ಮುಂಚಿತವಾಗಿ ತವರಿನ ಹಾದಿ ಹಿಡಿದಿದ್ದಾರೆ.
ಗೋವಾಕ್ಕೆ ರಿಸರ್ವೇಶನ್ : ಹತ್ತಾರು ವರ್ಷಗಳಿಂದ ಗೋವಾದಲ್ಲಿ ವಾಸವಾಗಿರುವ ಮತ್ತು ತವರೂರಲ್ಲಿ ಮತದಾನದ ಹಕ್ಕು ಹೊಂದಿರುವ ಸಾವಿರಾರು ವಲಸಿಗರಿಗೆ ಅಲ್ಲಿಂದ ಬರುವ ಮತ್ತು ವಾಪಸ್ ಹೋಗುವ ರೈಲುಗಳಿಗೆ ರಿಸರ್ವೇಶನ್ ಮಾಡಿಸಿರುವ ಬಗ್ಗೆಯೂ ಮಾಹಿತಿ ಇದೆ.
ಕೆಲವು ನಗರಗಳಲ್ಲಿ ಉತ್ತರ ಭಾರತೀಯರು ಹೆಚ್ಚಾಗಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಂತಹ ಕಡೆ ಕಾರ್ಮಿಕರ ಕೊರತೆ ಎದುರಾಗುವುದಿಲ್ಲ. ಉಳಿದ ನಗರಗಳಲ್ಲಿ ಮೂರು ಅಥವ ನಾಲ್ಕು ದಿನಗಳ ಮಟ್ಟಿಗೆ ಕಾರ್ಮಿಕರ ಸಮಸ್ಯೆ ಎದುರಾಗಲಿದೆ.
ಯಾವುದೇ ಸಮಸ್ಯೆ ಉಂಟಾದರೂ ತವರಿಗೆ ಹೋಗಿ ಆಮಿಷಗಳಿಗೆ ಬಲಿಯಾಗದೆ ಮತ ಹಾಕುತ್ತೇವೆ ಎಂಬುವವರಿಗೆ ನಮ್ಮ ಬೆಂಬಲವೂ ಇದೆ. ಪವಿತ್ರವಾದ ಮತದಾನದ ಹಕ್ಕನ್ನು ಚಲಾಯಿಸಿ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ರಾಜ್ಯದ ಅಭಿವೃದ್ಧಿಗೆ ಸಹಕರಿಸಿ ಎಂಬುದು ನಮ್ಮ ಮನವಿ ಸಹ ಹೌದು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications