ಪಾಕ್ ನ ಪಾಪಿ ಕೃತ್ಯ : ಸರಬ್ಜಿತ್ ಕಿಡ್ನಿ, ಹೃದಯ ನಾಪತ್ತೆ
ಗುರುವಾರ ಭಾರತಕ್ಕೆ ತರಲಾದ ಸರಬ್ಜಿತ್ ಸಿಂಗ್ ಅವರ ಮೃತ ದೇಹವನ್ನು ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ 2 ನೇ ಬಾರಿಗೆ ಮರಣೋತ್ತರ ಪರೀಕ್ಷೆಗೊಳಪಡಿಸಿದ ವೈದ್ಯರ ತಂಡ ಇಂತಹ ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.
ಶುಕ್ರವಾರ ಸರಬ್ಜಿತ್ ಅಂತ್ಯಸಂಸ್ಕಾರ ಮುಗಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ವೈದ್ಯರು, ಸಿಂಗ್ ಅವರ ದೇಹದ ಮೇಲೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಕೊಲ್ಲಲೆಂದೇ ಹಲ್ಲೆ ನಡೆಸಿದಂತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತದೇಹದ ಎದೆಯ ಭಾಗದ ಬಹುತೇಕ ಎಲುಬುಗಳು ಮುರಿದಿದ್ದು, ತಲೆಗೆ ಕಠಿಣವಾದ ವಸ್ತುವಿನಿಂದ ಹಲ್ಲೆ ಮಾಡಲಾಗಿದೆ. ಹಾಗೆಯೇ ದವಡೆಯ ವಸಡುಗಳ ಮತ್ತು ಮೂಳೆ ಸಹ ಮುರಿದಿದೆ ಎಂದು ವೈದ್ಯರು ಹೇಳಿದ್ದಾರೆ.
ದೇಹದ ಹಲವು ಕಡೆ ಮೊನಚಾದ ವಸ್ತುಗಳಿಂದ ಇರಿಯಲಾಗಿದೆ. ಮೃತದೇಹದ ಕಿಡ್ನಿ, ಹೃದಯದ ಭಾಗಗಳು ನಾಪತ್ತೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಸರಬ್ಜಿತ್ರನ್ನು ಆಸ್ಪತ್ರೆಗೆ ದಾಖಲು ಮಾಡಿರುವ ಸಂದರ್ಭದಲ್ಲಿ ಅವರ ಕಿಡ್ನಿ ಮತ್ತು ಹೃದಯವನ್ನು ಕಳವು ಮಾಡಿರುವ ಕುರಿತು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.
ವ್ಯಾಪಕ ಖಂಡನೆ : ಸರಬ್ಜಿತ್ ಸಿಂಗ್ ಅವರ ಕಿಡ್ನಿ ಮತ್ತು ಹೃದಯ ನಾಪತ್ತೆ ವಿಚಾರ ಹೊರಬೀಳುತ್ತಿದ್ದಂತೆಯೇ ಪಂಜಾಬ್ನಲ್ಲಿ ಸಿಖ್ಖರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತ ದೇಹದ ಭಾಗಗಳನ್ನು ಕದ್ದಿರುವ ಜಿನ್ನಾ ಆಸ್ಪತ್ರೆಯ ವೈದ್ಯರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿನ್ನಾ ಆಸ್ಪತ್ರೆಯ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯ ಹೇರುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಮೃತ ವ್ಯಕ್ತಿಯ ಕಿಡ್ನಿ ಮತ್ತು ಹೃದಯ ಭಾಗವನ್ನು ಕದ್ದು ಪಾಕಿಸ್ತಾನ ಅಂತರಾಷ್ಟ್ರೀಯ ನಿಯಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸುತ್ತಿದ್ದಾರೆ.
ಸರಬ್ಜಿತ್ ಪಂಚಭೂತಗಳಲ್ಲಿ ಲೀನ : ಶುಕ್ರವಾರ ಸರಬ್ಜಿಜ್ ತವರು ಅಮೃತಸರದ ಭಿಕಿವಿಂಡ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ದೇಹದ ಅಂತ್ಯ ಸಂಸ್ಕಾರ ನಡೆಸಲಾಯಿತು.
ತ್ರಿವರ್ಣ ಧ್ವಜ ಹೊದಿಸಲಾದ ಸರಬ್ಜಿತ್ ಮೃತಶರೀರವನ್ನು ಅವರ ಹುಟ್ಟೂರಿನ ಶಾಲೆಯಿಂದ ಮೆರವಣಿಗೆಯಲ್ಲಿ ಕೊಂಡೊಯ್ದು, ಸರಬ್ಜಿತ್ ಕುಟುಂಬಿಕರ ಮೂಲಕ ಅಗ್ನಿಸ್ಪರ್ಶ ನಡೆಸಲಾಯಿತು.
ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ, ಪಾಟಿಯಾಲ ಸಂಸದೆ ಪರಿಣೀತ್ ಕೌರ್, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಉಪ ಮುಖ್ಯಮಂತ್ರಿ ಸುಖಬೀರ್ ಬಾದಲ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಹಲವಾರು ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.