ಹೈ ಕಮಾಂಡ್ ನಾಯಕರುಗಳ ಪೊಳ್ಳು ಭಾಷಣ
ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದ್ದು ದೆಹಲಿಯ ಹೈ ಕಮಾಂಡುಗಳಿಂದ ಅನೇಕ ನಾಯಕರುಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕಳುಹಿಸುತ್ತಿದೆ. ಆದರೆ ಕರ್ನಾಟಕಕ್ಕೆ ಈ ನಾಯಕರುಗಳ ಬರುವಿಕೆಯಿಂದ ಏನಾದರೂ ಉಪಯೋಗವಿದೆಯೇ ಎಂದು ಕನ್ನಡಿಗರು ಸೂಕ್ಷ್ಮವಾಗಿ ಚಿಂತಿಸಬೇಕಿದೆ.
ಕೆಲವು ನಾಯಕರ ಮಾತುಗಳ, ಅವರ ಭಾಷೆ, ಅವರ ಮಾತಿನ ಒಳಗುಟ್ಟುಗಳು ನಿಜಕ್ಕೂ ನಮಗೆ ಮಾರಕವೆನಿಸುವಂತೆ ತೋರುತ್ತದೆ. ಭಾರತದ ಪ್ರಧಾನಮಂತ್ರಿಗಳಾದ ಮನಮೋಹನ್ ಸಿಂಗ್ ಅವರು ತಮ್ಮ ಭಾಷಣದಲ್ಲಿ ಬಿಜೆಪಿ ಸರ್ಕಾರವು ಕರ್ನಾಟಕದ ಜನತೆಗೆ ನೀರಿಲ್ಲದಂತೆ ಮಾಡಿದೆ ಅನ್ನುವ ಮಾತನ್ನು ಹೇಳಿದರು.
ಆದರೆ ಕರ್ನಾಟಕವನ್ನು ನೀರಿಲ್ಲದೆ ವಂಚಿಸುವ ಪ್ರಕ್ರಿಯೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳದ್ದೂ ದೊಡ್ಡ ಪಾತ್ರವಿದೆಯಲ್ಲವೇ? ಕಾವೇರಿ ನದಿ ಪ್ರಾಧಿಕಾರಕ್ಕೆ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯ ನೀರು ಹಂಚಿಕೆ ಮಾಡುವ ಜವಾಬ್ದಾರಿಯನ್ನು ಸರ್ವೋಚ್ಚ ನ್ಯಾಯಾಲಯ ಕೊಟ್ಟಿತ್ತು ಮತ್ತು ಈ ಪ್ರಾಧಿಕಾರದ ಮುಖ್ಯಸ್ಥರಾಗಿದ್ದವರು ಪ್ರಧಾನ ಮಂತ್ರಿಗಳೇ.

ತಾವು ಆಗ ಮನಸ್ಸು ಮಾಡಿದ್ದರೆ, ನಮಗೆ ನ್ಯಾಯಯುತವಾಗಿ ಸೇರಬೇಕಿದ್ದ ನೀರನ್ನು ದಕ್ಕಿಸಿಕೊಡಬಹುದಿತ್ತು. ಅದು ಮಾಡದೇ ಈಗ ಚುನಾವಣೆಯ ಸಂದರ್ಭದಲ್ಲಿ ಮೊಸಳೆ ಕಣ್ಣೀರು ಹಾಕಿದರೆ ಏನು ತಾನೆ ಪ್ರಯೋಜನ.
ಇನ್ನು ಬಿಜೆಪಿಯಿಂದ ಸತತ 2 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿರುವ ವೆಂಕಯ್ಯ ನಾಯ್ಡುರವರು ತಮ್ಮ ಚುನಾವಣಾ ಪ್ರಚಾರವನ್ನು ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಮಾಡಿದ್ದಾರೆ. ಇದೆಂಥ ದುರಂತ ನೋಡಿ. ನಮ್ಮ ರಾಜ್ಯವನ್ನು ಕಳೆದ 10 ವರ್ಷಗಳಿಂದ ಪ್ರತಿನಿಧಿಸುತ್ತಿರುವ ಒಬ್ಬ ರಾಷ್ಟ್ರೀಯ ನಾಯಕ ಕನ್ನಡದಲ್ಲಿ ಕನ್ನಡಿಗರೊಂದಿಗೆ ಮಾತನಾಡದಿರುವುದು ಶೋಚನೀಯ.
ವೆಂಕಯ್ಯ ನಾಯ್ಡುರವರು ಕನ್ನಡಿಗರ ಆಸ್ತಿಯಾಗಿರುವ ಕಾವೇರಿ, ಕೃಷ್ಣ ನದಿ ನೀರಿನ ಹಂಚಿಕೆಯನ್ನು ಕರ್ನಾಟಕಕ್ಕೆ ಅನ್ಯಾಯವಾದಾಗ ಒಂದು ಮಾತನ್ನೂ ಆಡದಿರುವುದನ್ನು ನಾವೀ ಸಂದರ್ಭದಲ್ಲಿ ನೆನೆಯಲೇ ಬೇಕಿದೆ.
ಇನ್ನು ಗಡಿ ಭಾಗಗಳಲ್ಲಿನ ಭಾಷಾ ಅಲ್ಪಸಂಖ್ಯಾತ ಮತಗಳ ಓಲೈಕೆಗೋಸ್ಕರ ತೆಲುಗು ನಟ ಚಿರಂಜೀವಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತೆಲುಗಿನಲ್ಲಿ ಪ್ರಚಾರ ಮಾಡಿದ್ದಾರೆ. ಇದುವರೆಗೂ ಇವರು ಆ ಜಿಲ್ಲೆಗಳ ನೀರಿವ ಬವಣೆ ನೀಗಿಸುವ ನಿಟ್ಟಿನಲ್ಲಿ ಮಾತನಾಡಿಯೇ ಇಲ್ಲ.
ಕೇವಲ ಚುನಾವಣೆಗಳ ಸಂದರ್ಭದಲ್ಲಿ ಪ್ರತ್ಯಕ್ಷವಾಗುವ ಈ ಹೈಕಮಾಂಡ್ ನಿಯೋಜಿತ ಹುರಿಯಾಳುಗಳು ನಿಜವಾಗಿ ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಕೊಂಚಿತ್ತೂ ಕಾಳಜಿ ಹೊಂದಿಲ್ಲ. ಕನ್ನಡ ಜನತೆ ಇಂತಹ ಪಕ್ಷಗಳಿಗೆ ಮತ ನೇಡಿದರೆ ಏನಾದರು ಏಳಿಗೆ ಸಾಧ್ಯವೇ ಅನ್ನುವ ಪ್ರಶ್ನೆಯನ್ನು ತಮ್ಮಲ್ಲಿ ತಾವು ಕೇಳಿಕೊಳ್ಳಬೇಕು.
ಒಟ್ಟಾರೆಯಾಗಿ ರಾಷ್ಟ್ರೀಯ ನಾಯಕರುಗಳಿಗೆ ಕರ್ನಾಟಕ ತಮ್ಮ ಭಾಷಣ ಪಾಂಡಿತ್ಯ ತೋರುವ ಆಟದ ಮೈದಾನದಂತಾಗಿದೆ. ಸ್ಥಳೀಯ ನಾಯಕರುಗಳಿಗೆ ಬೆಲೆ ಕೊಡುವ ಪಕ್ಷಗಳಿಗೆ ಕನ್ನಡಿಗರು ಮತ ಹಾಕುವುದು ಅನಿವಾರ್ಯವಲ್ಲವೇ?












Click it and Unblock the Notifications