ಬಿ ಪ್ಯಾಕ್ ಹಿತಾಸಕ್ತಿ ವಿರುದ್ಧ ಕಮ್ಯೂನಿಸ್ಟರ ಕಿಡಿ
ಬೆಂಗಳೂರು, ಏ.30 : ಬಂಡವಾಳಶಾಹಿ ಹಿತಾಸಕ್ತಿ ಹೊಂದಿರುವ ಬಿ ಪ್ಯಾಕ್ ಸಂಘಟನೆ ಮತದಾರರನ್ನು ಎಚ್ಚರಿಸುವ ಕಾರ್ಯ ಮಾಡಿಕೊಂಡಿದ್ದರೆ ಒಳ್ಳೆಯದು ಅದನ್ನು ಬಿಟ್ಟು ಕೆಲವು ಅಭ್ಯರ್ಥಿಗಳನ್ನು ಪಟ್ಟಿಮಾಡಿ, ಅವರನ್ನೆ ಗೆಲ್ಲಿಸಬೇಕು ಎಂದು ಫರ್ಮಾನು ಹೊರಡಿಸುವುದು ಎಷ್ಟು ಸರಿ? ಎಂದು ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷ ಪ್ರಶ್ನಿಸಿದೆ.
ಐಟಿ ಬಿಟಿ ಕಂಪನಿಗಳ ಮುಖುಸ್ಥರು, ಕಾರ್ಪೊರೇಟ್ ಸಂಸ್ಕೃತಿ ಹಿನ್ನೆಲೆಯುಳ್ಳರನ್ನೇ ಹೊಂದಿರುವ ಬಿ ಪ್ಯಾಕ್ ಗೆ ಕೇವಲ 14 ಅಭ್ಯರ್ಥಿಗಳು ಮಾತ್ರ ಪ್ರಮಾಣಿಕರಾಗಿ ಕಂಡಿರುವುದು ಏಕೆ? ಇದು ಕೇವಲ ಬಂಡವಾಳಶಾಹಿ ಹಿತಾಸಕ್ತಿಯ ನಡವಳಿಕೆ ಎಂದು ಸಿಪಿಎಂ ಆಕ್ರೋಶ ವ್ಯಕ್ತಪಡಿಸಿದೆ.

ಐಟಿ, ಬಿಟಿ ಕಂಪನಿಯ ಕಿರಣ್ ಮುಜುಮ್ದಾರ್ ಶಾ. ಮತ್ತು ದಯಾನಂದ ಪೈ ನೇತೃತ್ವದ ಬಿ.ಪ್ಯಾಕ್, ಬೆಂಗಳೂರಿನ ಕೆಲವು ಅಭ್ಯರ್ಥಿಗಳನ್ನು ಪಟ್ಟಿಮಾಡಿ, ಅವರನ್ನು ಗೆಲ್ಲಿಸಬೇಕು ಮತ್ತು ಪ್ರತಿ ಅಭ್ಯರ್ಥಿಗೂ 5 ಲಕ್ಷ ರೂ. ಹಾಗೂ ಒಂದೆ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿ ಗಳಿದ್ದರೆ, ಅಂತಹವರಿಗೆ ತಲಾ ಮೂರು ಲಕ್ಷ ರೂ. ಧನ ಸಹಾಯ ಮಾಡುವುದಾಗಿ ಹೇಳಿರುವುದು ಕೇವಲ ಬಂಡವಾಳಶಾಹಿ ಹಿತಾಸಕ್ತಿ ರಕ್ಷಿಸಿಕೊಳ್ಳುವ ಹುನ್ನಾರ ಎಂದು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಪ್ರಸನ್ನಕುಮಾರ್ ಕಿಡಿಕಾರಿದ್ದಾರೆ.
ಕಿರಣ್ ಮುಜುಮ್ದಾರ್ ಶಾ ಅವರಿಗೆ ಕಾಳಜಿ ಇದ್ದರೆ ತಮ್ಮ ಕಂಪನಿಯ ಬಳಿ ಇರುವ ಹೆಬ್ಬಗೋಡಿ ಕೆರೆಯ ಹೂಳು ತೆಗೆಸಲಿ. ಐಟಿ ಬಿಟಿ ಕಂಪನಿಗಳು ಸರಕಾರ ಮತ್ತು ಬಿಬಿಎಂಪಿಗೆ ನೀಡದೆ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಮೊದಲು ಪಾವತಿಸಲಿ,ಇದಾವುದನ್ನೂ ಮಾಡದ ಇವರು, ರಾಜಕೀಯ ವ್ಯಕ್ತಿಗಳಿಗೆ ಹಣ ನೀಡಿರುವುದು ಕೇವಲ ಬೂಟಾಟಿಕೆಯಾಗಿದೆ. ಇದು ತಮ್ಮ ಪ್ರಭಾವ ಮತ್ತು ಕಾರ್ಪೋರೇಟ್ ಹಿತಾಸಕ್ತಿ ರಕ್ಷಿಸಿಕೊಳ್ಳುವ ಮುಖವಾಡ ಎಂದು ಪ್ರಸನ್ನಕುಮಾರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನವಾದಿ ಸಂಘಟನೆಯ ಕೆ.ಎಸ್.ವಿಮಲಾ, ಕಾರ್ಯದರ್ಶಿ ಪ್ರಕಾಶ್ ಕೆ ಮುಂತಾದವರು ಹಾಜರಿದ್ದರು.
ಏನಿದು ಬಿ ಪ್ಯಾಕ್?: ಬೆಂಗಳೂರಿನ ಚಿತ್ರಣವನ್ನು ಬದಲಿಸುವ ಮೂಲ ಉದ್ದೇಶದಿಂದ ಬೆಂಗಳೂರಿನ ಬಗ್ಗೆ ಚಿಂತಿಸುತ್ತಿರುವ ಪ್ರಭಾವಿ ವ್ಯಕ್ತಿಗಳು ಬೆಂಗಳೂರು ಪಾಲಿಟಿಕಲ್ ಆಕ್ಷನ್ ಕಮಿಟಿ (ಬಿಪಿಎಸಿ) ಎಂಬ ರಾಜಕೀಯ ಪಕ್ಷಗಳಿಗೆ ಪರ್ಯಾಯವಾದ ಶಕ್ತಿಯಾಗಿ ರೂಪುಗೊಂಡಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ಜಿಲ್ಲೆಯಲ್ಲಿರುವ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ 14 ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ, ಬೆಂಗಳೂರು ಅಭಿವೃದ್ಧಿಗಾಗಿ ಹುಟ್ಟುಹಾಕಲಾಗಿರುವ BPAC (Bangalore Political Action Committee) ಸಂಸ್ಥೆ ಪ್ರಕಟಿಸಿತ್ತು. ಪಟ್ಟಿ ಇಲ್ಲಿದೆ ನೋಡಿ
ಬಿಪ್ಯಾಕ್ ನಲ್ಲಿ ಯಾರಿದ್ದಾರೆ?: ಕಿರಣ್ ಮಜುಂದಾರ್ ಷಾ, ಟಿ.ವಿ. ಮೋಹನದಾಸ್ ಪೈ, ಕೆ. ಜೈರಾಜ್, ಅಶ್ವಿನಿ ನಾಚಪ್ಪ, ಪ್ರಸಾದ್ ಬಿದ್ದಪ್ಪ, ಡಾ. ಅಶ್ವಿನ್ ಮಹೇಶ್, ಚಾರು ಶರ್ಮಾ, ಹರೀಶ್ ಬಿಜೂರ್, ಹರೀಶ್ ನರಸಪ್ಪ, ಕಲ್ಪನಾ ಕಾರ್, ನಿಶಾ ಮಿಲ್ಲೆಟ್, ನೂರೈನ್ ಫಜಲ್, ಪ್ರಕಾಶ್ ಬೆಳವಾಡಿ, ಪೃಥ್ವಿ ರೆಡ್ಡಿ, ಆರ್.ಕೆ. ಮಿಶ್ರಾ, ಸ್ಟಾನ್ಲಿ ಪಿಂಟೋ ಮತ್ತು ವಾಣಿ ಗಣಪತಿ.












Click it and Unblock the Notifications