ಲೋಕಾಯುಕ್ತ ದಾಳಿ, 600 ಕೋಟಿ ಅಕ್ರಮ ಬಯಲು
ಹಣಕಾಸು ಸಲಹೆಗಾರ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಹಾಗೂ ಮೂವರು ಎಂಜಿನಿಯರ್ಗಳು, ಮೂವರು ಗುತ್ತಿಗೆದಾರರ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಲೋಕೋಪಯೋಗಿ ಇಲಾಖೆ ಆಂತರಿಕ ಹಣಕಾಸು ಸಲಹೆಗಾರ ಗೋವಿಂದರಾಜು ಅವರ ಜಯನಗರದ ಭೈರ ಸಂದ್ರದ ಮನೆ, ಲೋಕೋಪಯೋಗಿ ಇಲಾಖೆ ಕಾರ್ಯ ದರ್ಶಿ ಸದಾಶಿವರೆಡ್ಡಿ ಬಿ.ಪಾಟೀಲ್ರ ವಸಂತನಗರದಲ್ಲಿನ ಮನೆ ಮೇಲೆ ದಾಳಿ ನಡೆಸಿದ ಸಿಬ್ಬಂದಿ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿಸಿದ್ದಾರೆ.
ಇಲಾಖೆಯ ಎಂಜಿನಿಯರ್ ಉದಯಶಂಕರ್ ಅವರ ಕೋರಮಂಗಲ ಆರನೆ ಬ್ಲಾಕ್ನಲ್ಲಿರುವ ಮನೆ, ಇಂಜಿನಿಯರ್ ಗಂಗಾಧರಯ್ಯ ಅವರ ಆರ್ಪಿಸಿ ಲೇಔಟ್ನಲ್ಲಿರುವ ನಿವಾಸ, ಇಂಜಿನಿಯರ್ ನಟರಾಜು ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.
ಅಲ್ಲದೆ, ಗುತ್ತಿಗೆದಾರರಾದ ನಂಜಯ್ಯ ಅವರ ಮಾಗಡಿ ನಗರದಲ್ಲಿನ ನಿವಾಸ, ಕೆಂಪರಾಜು ಅವರ ಮನೆ ಹಾಗೂ ಶಂಕರ್ ಅವರ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.
ರಸ್ತೆ, ಅಣೆಕಟ್ಟು ಮತ್ತು ಚರಂಡಿ ಕಾಮಗಾರಿಗಳಿಗೆ 600 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿತ್ತು. ಕಾಮಗಾರಿಗೆ ನಿರ್ದಿಷ್ಟ ಹಣ ಬಿಡುಗಡೆಯಾಗಿದ್ದರೂ ಅದನ್ನು ತುಂಡು ಗುತ್ತಿಗೆ 20 ಲಕ್ಷ ರೂ.ಒಳಗೆ ಬರುವಂತೆ ಮಾಡಿ ಅಕ್ರಮ ಎಸಗಲಾಗಿತ್ತು. ಆ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದೆ ಎಂದು ಲೋಕಾಯುಕ್ತ ಡಿಜಿಪಿ ಎಚ್ಎನ್ಎಸ್ ರಾವ್ ಹೇಳಿದ್ದಾರೆ.
ಈ ಅಕ್ರಮದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿದ್ದು, ಅಧಿಕಾರ ದುರಪಯೋಗಪಡಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಮೇಲ್ಕಂಡ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿವಾಸಗಳು ಸದ್ಯಕ್ಕೆ ಪೊಲೀಸ್ ವಶದಲ್ಲಿದ್ದು ತಪಾಸಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಲೋಕಾಯುಕ್ತ ಡಿಜಿಪಿ ಎಚ್ಎನ್ಎಸ್ ರಾವ್ ತಿಳಿಸಿದ್ದಾರೆ.