ಬೆಂಗಳೂರಿನಲ್ಲಿ ಅತ್ಯಾಚಾರ: ಛೇ, ಯಾರನ್ನು ನಂಬೋದು?
ಅದಕ್ಕೂ ಮುನ್ನ ತಾವರೆಕೆರೆಯಲ್ಲಿ... ಅಮಾಯಕ ಹುಡುಗಿಯನ್ನು ರೇಪ್ ಮಾಡಿ, ಮೈದಾನದಲ್ಲಿ ಬಿಸಾಕಿ ಹೋಗಿದ್ದಾರೆ ಎಂದಾಗ ಇದೇ ಶಾಂತಿಪ್ರಿಯ ಜನ ನಿಜಕ್ಕೂ ಬೆಚ್ಚಿಬಿದ್ದಿದ್ದರು. ಆದರೆ ರಾಜಕೀಯ ಮಂದಿ ಸ್ವಹಿತಾಸಕ್ತಿಗಾಗಿ ಅದನ್ನು ರಾಜಕೀಯ ಬಣ್ಣದಲ್ಲಿ ಅದ್ದಿ ಮತ್ತಷ್ಟು ರಾಡಿ ಎಬ್ಬಿಸಿದ್ದರು. ಕೊನೆಗೆ ಪೊಲೀಸರ ಮೇಲೂ ಗೂಬೆ ಕೂರಿಸಲು ಯತ್ನಿಸಿದ್ದರು.
ಆದರೆ ಅದೇ ಮೈದಾನದಲ್ಲಿ, ಆ ನಿರ್ಜನ ಪ್ರದೇಶದಲ್ಲಿ ನಡೆದಿದ್ದೇನು ಎಂಬುದು ಈಗ ಬಟಾಬಯಲಾಗಿದೆ. ಸುದೀರ್ಘಕಾಲ ತಾಳ್ಮೆವಹಿಸಿ ತಾವರೆಕೆರೆ ಪ್ರಕರಣವನ್ನು ಮತ್ತು ಕ್ಷಿಪ್ರಗತಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಕೇಸನ್ನು ಎಳೆಎಳೆಯಾಗಿ ಬಿಡಿಸಿಟ್ಟಿರುವ ಬೆಂಗಳೂರು ಪೊಲೀಸರು, ಸದ್ಯ ಕೇಸುಗಳು ಬಗೆಹರಿದವಲ್ಲಾ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಇಷ್ಟಕ್ಕೂ ತಾವರೆಕೆರೆ ಪ್ರಕರಣದಲ್ಲಿ ಆಗಿದ್ದೇನೆಂದರೆ ಹುಡುಗಿ ಮನೆಬಿಟ್ಟುಬಂದು ಬೆಂಗಳೂರಿನಲ್ಲಿ ಜೀವನ ರೂಪಿಸಿಕೊಳ್ಳಲು ಬಂದಿದ್ದಳು. ಆದರೆ ಅವಳು ಆರಿಸಿಕೊಂಡ ಮಾರ್ಗ ಸರಿಯಿರಲಿಲ್ಲವಷ್ಟೇ. ಮೆಜಿಸ್ಟಿಕ್ಕಿನಲ್ಲಿ ನಿಂತು ದೇಹ ಮಾರಿಕೊಳ್ಳುವ ಕಸುಬಿಗೆ ಇಳಿದಿದ್ದಳು. ಒಬ್ಬ ಅವಳ ಹಿಂದೆ ಬಿದ್ದು ತಾವರೆಕೆರೆವರೆಗೂ ಹೋಗಿದ್ದಾನೆ.
ಅಲ್ಲಿ ಎಲ್ಲಾ ಆದ್ಮೇಲೆ ದುಡ್ಡು, ವಾಚು, ಉಂಗುರ ಎಲ್ಲಾ ಕೊಡು ಇಲ್ಲಾಂದ್ರೆ ರೇಪ್ ಕೇಸ್ ಹಾಕಿಸಿಬಿಡುತ್ತೇನೆ. ಹೆಂಗೂ ಈಗ ಎಲ್ಲೆಲ್ಲೂ ರೇಪ್ ಪ್ರಕರಣಗಳದ್ದೇ ಅವಾಂತರ ಎಂದು ಧಮ್ಕಿ ಹಾಕಿದ್ದಾಳೆ.
ಅವನೋ, ಇಂಥಹುದನ್ನೆಲ್ಲಾ ಎಷ್ಟು ಕಂಡಿದ್ದನೋ ಸೀದಾ ಅವಳ ತಲೆ ಮೇಲೆ ಕಲ್ಲು ಎತ್ತಿಹಾಕಿ, ಅವಳು ಸತ್ತೇ ಹೋದಳು. ತನಗೆ ತಂಟೆ ತಪ್ಪಿತು ಎಂದು ಜಾಗ ಖಾಲಿ ಮಾಡಿದ್ದಾನೆ. ಪೊಲೀಸರು ಅವನನ್ನೂ ಈಗ ಬಂಧಿಸಿದ್ದಾರೆ. ಜತೆಗೆ ಇವಳಿಗೆ ಆಸ್ಪತ್ರೆಯಲ್ಲಿ ಸಕಲ ಶುಶ್ರೂಷೆ ಮಾಡಿಸಿ, ಪುನರ್ಜನ್ಮ ಕೊಟ್ಟು ಕಳಿಸಿದ್ದಾರೆ. ಹೇಳಿ ಇಲ್ಲಿ ತಪ್ಪು ಯಾರದು?
ಇನ್ನು, ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯ ಕೇಸೂ ಹೀಗೇ ಸಾಗುತ್ತದೆ. ಇವಳು ಸುಶಿಕ್ಷಿತೆ ಬೇರೆ. ಅಶ್ವಿನಿ ದೇವತೆಯಾಗಿ ರೋಗಿಗಳಿಗೆ ಪುನರ್ಜನ್ಮ ನೀಡಬೇಕಾದವಳು. ಕೇರಳದಿಂದ ಬಂದು ಬೆಂಗಳೂರಿನಲ್ಲಿ ಎಡವಿದ್ದಾಳೆ.
ಇವಳಿಗೆ ತನ್ನದೇ ಕೇರಳದ ಅಲೆಪ್ಪಿ ಜಿಲ್ಲೆಯ ಬೆಟ್ಟತ್ತು ಕೋಯಿಲ್ ನಿವಾಸಿ ಶ್ರೀಕಾಂತ್ (24) ಎಂಬ ಗೆಣೆಕಾರ ಸಿಕ್ಕಿದ್ದ. ಅವನಿಗೋ, ಅದೇ ಜಿಲ್ಲೆಯ ಪೇಲ ಗ್ರಾಮದ ವಿನೋದ್ (25) ಹಾಗೂ ಕೇರಳ ಮೂಲದ ಆದರೆ ಪ್ರಸ್ತುತ ಹೊಸಕೋಟೆ ತಾಲೂಕಿನ ದಂಡುಪಾಳ್ಯದಲ್ಲಿ ವಾಸವಿರುವ ನಿತಿನ್ ಎಂ. ವರ್ಗೀಸ್ (25) ಎಂಬ ಸ್ನೇಹಿತರಿದ್ದರು. ಇನ್ನು ಕೇರಳ ಮೂಲದ ಯುವತಿಯ ಪೋಷಕರು ಕುವೈತ್ನಲ್ಲಿದ್ದಾರೆ.
ವೀಕೆಂಡ್ ಮೋಜು ಮಾಡಲು ಯುವತಿ ಮತ್ತು ಅವಳ ಗೆಣೆಕಾರ ಏ. 21ರಂದು ಬೆಳಗ್ಗೆ ದಂಡುಪಾಳ್ಯದ ಮನೆಯೊಂದರಲ್ಲಿ ಸೇರಿದ್ದಾರೆ. ಅಲ್ಲಿ ಶ್ರೀಕಾಂತನ ಇನ್ನಿಬ್ಬರು ಸ್ನೇಹಿತರಾದ ವಿನೋದ ಮತ್ತು ನಿತಿನ್ ವರ್ಗೀಸ್ ಸಹ ಸಂಧಿಸಿದ್ದಾರೆ. ಯುವತಿಯೂ ಸೇರಿದಂತೆ ಎಲ್ಲರೂ ಚಿಯರ್ಸ್ ಹೇಳಿದ್ದಾರೆ. ಮುಂದೇನಾಯ್ತು ... ಆಗಬಾರದ್ದೇ ಆಯ್ತು.
ಕೇರಳದಲ್ಲಿ ಭೂಗತರಾಗಿದ್ದ ಮೂವರೂ ಯುವಕರನ್ನು ನಮ್ಮ ಬೆಂಗಳೂರು ಪೊಲೀಸರು ಬಂಧಿಸಿ, ಕರೆತಂದಿದ್ದಾರೆ. ಇವಳನ್ನೂ ಸ್ವಲ್ಪ ಜೋರಾಗಿಯೇ ವಿಚಾರಿಸಿಕೊಂಡಿದ್ದಾರೆ. ಆಗ ಎಲ್ಲ ನಗ್ನ ಸತ್ಯ ಬಯಲಾಗಿದೆ. ಹೇಳಿ ಇಲ್ಲಿ ತಪ್ಪು ಯಾರದು?
ಇದೀಗ ಬಂದ ಮಾಹಿತಿಗಳ ಪ್ರಕಾರ ಆನೇಕಲ್ ನಲ್ಲಿಯೂ ಮೊನ್ನೆ ಇಂತಹುದೇ ಘಟನೆ ನಡೆದಿತ್ತು. ಆದರೆ ಆ ಪ್ರಕರಣದಲ್ಲೂ ಯುವತಿ ಪ್ರೇಮ ವೈಫಲ್ಯದಿಂದ ಅವಘಡ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಛೇ!