ತುಮಕೂರು : ಯುಪಿ ಮೂಲದ ಬಿಎಸ್ಪಿ ಮುಖಂಡ ನಾಪತ್ತೆ
ಉತ್ತರ ಪ್ರದೇಶದ ಬಿಎಸ್ಪಿ ಪಕ್ಷದ ಮುಖಂಡ ಮಹಮದ್ ಬದ್ರುದ್ದೀನ್ ಅನ್ಸಾರಿ ಮಧುಗಿರಿ ತಾಲೂಕಿಗೆ ಬಿಎಸ್ಪಿ ಅಭ್ಯರ್ಥಿ ಮಾಯಸಂದ್ರ ಮುನಿಯಪ್ಪ ಪರವಾಗಿ ಪ್ರಚಾರ ಮಾಡಲು ಆಗಮಿಸಿದ್ದರು. ಆದರೆ, ಎರಡು ದಿನಗಳಿಂದ ಅವರು ನಾಪತ್ತೆ ಯಾಗಿದ್ದಾರೆ.
ಅನ್ಸಾರಿ ಜೊತೆಗೆ ಉತ್ತರ ಪ್ರದೇಶದಿಂದ ಬಂದಿದ್ದ ಜಮಲ್ ಅಹಮದ್ ಮತ್ತು ಗುಲಾಮ್ ಮಹಮದ್ ಮಧುಗಿರಿ ಪೊಲೀಸರಿಗೆ ಅನ್ಸಾರಿ ನಾಪತ್ತೆ ಆಗಿರುವ ಕುರಿತು ದೂರು ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಏ.19ರಂದು ಪ್ರಚಾರಕ್ಕೆ ತೆರಳಿದ್ದ ಅನ್ಸಾರಿ ಅವರಿಗೆ ನಿಮ್ಮ ರಾಜ್ಯದಲ್ಲಿ ಮಾತ್ರ ರಾಜಕೀಯ ಮಾಡಿ, ಕರ್ನಾಟಕಕ್ಕೆ ಬರಬೇಡಿ ಎಂದು ಕಾಂಗ್ರೆಸ್ ಕೆಲವು ಕಾರ್ಯಕರ್ತರು ಬೆದರಿಕೆ ಹಾಕಿದ್ದರು. ಕ್ಷೇತ್ರದಲ್ಲಿ ಪ್ರಚಾರ ಮುಂದುವರೆಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಬಿಎಸ್ಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಹೀಗೆ ಅನ್ಸಾರಿ ಅವರಿಗೆ ಬೆದರಿಕೆ ಹಾಕಿದ ನಂತರ ಅವರು ಕಣ್ಮರೆ ಆಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಅವರನ್ನು ಯಾರಾದರೂ ಅಪಹರಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸೋಮವಾರ ಕ್ಷೇತ್ರದಲ್ಲಿ ಮತಯಾಚನೆ ಮುಗಿಸಿಕೊಂಡು ಬಂದು ಹೋಟೆಲ್ ರೂಂ ಸೇರಿದ ಅನ್ಸಾರಿ ಇದುವರೆಗೂ ಯಾರಿಗೂ ಕಾಣಿಸಿಕೊಂಡಿಲ್ಲ. ಹೋಟೆಲ್ ರೂಂ ಖಾಲಿಯಾಗಿದ್ದು, ಅನ್ಸಾರಿ ಅವರ ಬಟ್ಟೆ ಮೊಬೈಲ್ ಮುಂತಾದ ವಸ್ತುಗಳು ಕೋಣೆಯಲ್ಲಿಯೇ ಇದ್ದು, ಅಪಹರಣ ಮಾಡಿರಬಹದು ಎಂಬ ಶಂಕೆ ಹುಟ್ಟುಹಾಕಿದೆ.
ಮಧುಗಿರಿ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಮುನಿಯಪ್ಪ ಅವರ ಪ್ರಕಾರ ಸೋಮವಾರ ರಾತ್ರಿ ಕೆಲವರು ಅನ್ಸಾರಿ ಅವರ ರೂಂಗೆ ಆಗಮಿಸಿದ್ದರು, ನಂತರ ಅವರು ನಾಪತ್ತೆಯಾಗಿದ್ದಾರೆ. ಜೊತೆಯಲ್ಲಿದ್ದ ಸಹಪಾಠಿಗಳಿಗೆ ಸಹ ಮಾಹಿತಿ ನೀಡದೆ ಅವರು ರೂಂ ಬಿಟ್ಟು ಹೊರನಡೆದಿದ್ದು, ಅಪಹರಣವಾಗಿರಬಹುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕೈವಾಡ : ತಾಲೂಕಿನ ಕೆಲವು ಮುಸ್ಲಿಂ ಯುವರು ಅನ್ಸಾರಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಬಿಎಸ್ಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಎಂಬ ಭಯದಿಂದ ಅಭ್ಯರ್ಥಿ ಪರವಾರಿ ಪ್ರಚಾರ ಮಾಡುತ್ತಿದ್ದ ಅನ್ಸಾರಿ ಅವರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಖಂಡನ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಿದ್ದಾರೆ. ಉತ್ತರ ಪ್ರದೇಶಕ್ಕೂ ತೆರಳಿರುವ ತಂಡ ಅನ್ಸಾರಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ