ದೇವೇಗೌಡ ಈಸ್ ದೇವೇಗೌಡ, ದುರ್ಗದಲ್ಲಿ ಗರ್ಜನೆ

ಚಿತ್ರದುರ್ಗದಲ್ಲಿ ಬುಧವಾರ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿದ ದೇವೇಗೌಡ, ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು. ಸಮಾಜ ಸೇವೆಗಾಗಿ ಪಕ್ಷ ಕಟ್ಟಿದ್ದೇನೆ. ಕುಟುಂಬದ ಅಭಿವೃದ್ಧಿಗಾಗಿ ಅಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರಂತಹ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಒಬ್ಬ ಸಿದ್ದರಾಮಯ್ಯ ಹೋದರೆ ಮತ್ತೊಬ್ಬರು ಹುಟ್ಟಿ ಬರುತ್ತಾರೆ. ಆದರೆ, ಒಬ್ಬ ದೇವೇಗೌಡ ಹೋದರೆ ಮತ್ತೊಬ್ಬರು ಬರುವುದಿಲ್ಲ. ದೇವೇಗೌಡ ಈಸ್ ದೇವೇಗೌಡ ಎಂದು ಸಿದ್ದು ವಿರುದ್ಧ ಗುಡುಗಿದರು.
ದಿನದ ಇತರ ಪ್ರಮುಖ ಸುದ್ದಿಗಳು
ಕಾಂಗ್ರೆಸ್ ಗೆ ಕ್ಯಾಪ್ಟನ್ ಯಾರು : ಕಾಂಗ್ರೆಸ್ ಪಕ್ಷಕ್ಕೆ ಕ್ಯಾಪ್ಟನ್ ಯಾರು ಎಂಬುದು ತಿಳಿದಿಲ್ಲ. ಪಕ್ಷದ ಪ್ರತಿಯೊಬ್ಬರು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಟಿಕೆಟ್ ಹಂಚಿಕೆಯ ಮಾಡುವಲ್ಲಿಯೇ ನಾಯಕರು ವಿಫಲರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಗೊಂದಲಗಳೇ ಬಿಜೆಪಿ ಅಧಿಕಾರ ಪಡೆಯಲು ಸಹಕಾರಿ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಆರ್ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೈ ತುಂಬಾ ಭರವಸೆ : ಪ್ರತಿ ಜಿಲ್ಲಗೆ ವೈದ್ಯಕೀಯ ಕಾಲೇಜು, ಬಿಬಿಎಂಪಿ ಆಡಳಿತ ವ್ಯವಸ್ಥೆಯ ವಿಕೇಂದ್ರಿಕರಣ, ಏಳನೇ ತರಗತಿವರೆಗೆ ಕನ್ನಡ ಕಡ್ಡಾಯ, ಪ್ರತಿ ಜಿಲ್ಲೆಯಲ್ಲಿ ಮಹಿಳಾ ಬ್ಯಾಂಕ್ ಸ್ಥಾಪನೆ ಮುಂತಾದ ನಾನಾ ಭರವಸೆಗಳ ಕಾಂಗ್ರೆಸ್ ಪ್ರಣಾಳಿಕೆಯನ್ನು ಇಂದಿ ರಕ್ಷಣಾ ಸಚಿವ ಎ.ಕೆ.ಆಂಟನಿ ಬಿಡುಗಡೆಗೊಳಿದ್ದಾರೆ. (ಪ್ರಣಾಳಿಕೆ ಮುಖ್ಯಾಂಶಗಳು)
ಕೀಳು ಮಟ್ಟದ ಮನುಷ್ಯರ ಬಗ್ಗೆ ಮಾತನಾಡೋಲ್ಲ : ನಾನು ಜನರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದೇನೆ. ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಯಡಿಯೂರಪ್ಪ ಅವರಲ್ಲ. ಜಗದೀಶ್ ಶೆಟ್ಟರ್ ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಆದರೂ ಎಂಬ ಧನಂಜಯ್ ಕುಮಾರ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರೊಬ್ಬ ಕೀಳುಮಟ್ಟದ ರಾಜಕಾರಣಿ. ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಶೆಟ್ಟರ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ಅವರದ್ದು ತಿರುಕನ ಕನಸು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೆಜೆಪಿ ಪಕ್ಷ ಬೇರೆ ಪಕ್ಷಗಳಿಗೆ ಬೆಂಬಲ ನೀಡುವಷ್ಟು ಸ್ಥಾನಗಳಿಸುವುದಿಲ್ಲ. ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಯಡಿಯೂರಪ್ಪ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಝಣ ಝಣ ಕಾಂಚಣ : ಚುನಾವಣೆಯಲ್ಲಿ ಕಾಂಚಣದ ಪ್ರಭಾವ ಕಡಿಮೆಯಾಗಿಲ್ಲ. ಬೀದರ್ ಜಿಲ್ಲಯ ಔರಾದ್ ಚೆಕ್ ಪೋಸ್ಟ್ ನಲ್ಲಿ ಬುಧವಾರ ಪೊಲೀಸರು 21 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದಿಂದ ಸಾಗಣೆಯಾಗುತ್ತಿದ್ದ 2.91 ಲಕ್ಷ ದಾಖಲೆಯಿಲ್ಲದ ಹಣವನ್ನು ರಾಜಾಪೇಟೆ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ಮದ್ಯ ವಶ : ಶಿಢ್ಲಘಟ್ಟ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ತೋಟದ ಮನೆಯಲ್ಲಿ ಸಂಗ್ರಹಿಸಿದ್ದ 40 ಸಾವಿರ ರೂ.ಮೌಲ್ಯದ 18 ಬಾಕ್ಸ್ ಗಳಷ್ಟು ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲೂ 20 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications