ಸಿಎಂ ಶೆಟ್ಟರ್ ಗೆ ಈ ಬಾರಿ ಗೆಲುವು ದೊರಕುತ್ತಾ?

ಸಿಎಂ ತವರು ಕ್ಷೇತ್ರ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಮೊದಲು ಹು-ಧಾ ಗ್ರಾಮೀಣ ಕ್ಷೇತ್ರವಾಗಿತ್ತು. ಕ್ಷೇತ್ರ ಮರುವಿಂಗಡನೆ ಬಳಿಕ ಹು-ಧಾ ಕೇಂದ್ರವಾಯಿತು. ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಮೂರು ಬಾರಿ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಶೆಟ್ಟರ್ ನಾಲ್ಕು ಬಾರಿ ಬಿಜೆಪಿ ಧ್ವಜ ಹಾರಿಸಿದ್ದಾರೆ.
2013ರ ಚುನಾವಣೆಯಲ್ಲಿ ಐದನೇ ಗೆಲುವು ಸಾಧಿಸಲು ಶೆಟ್ಟರ್ ಪಣತೊಟ್ಟಿದ್ದಾರೆ. ಹಾಲಿ ಮುಖ್ಯಮಂತ್ರಿ ಎಂಬ ವರ್ಚಸ್ಸು, ಬಿಜೆಪಿಯ ಭಾವಿ ಮುಖ್ಯಮಂತ್ರಿ ಎಂಬ ಘೋಷಣೆ ಶೆಟ್ಟರ್ ಕೈ ಹಿಡಿದರೆ ಗೆಲುವು ಖಚಿತ. ಕ್ಷೇತ್ರದಲ್ಲಿ ಲಿಂಗಾಯತರೇ ಪ್ರಬಲರಾಗಿರುವುದು ಶೆಟ್ಟರಿಗೆ ಪ್ಲಸ್ ಪಾಯಿಂಟ್.
ಚುನಾವಣಾ ಪ್ರಚಾರ ಆರಂಭಿಸುವ ಮುನ್ನ ಶೆಟ್ಟರ್ ಲಿಂಗಾಯತ ಮಠಗಳಿಗೆ ಹೋಗಿ ಆಶೀರ್ವಾದ ಪಡೆದು ಬಂದಿದ್ದಾರೆ. ಬಜೆಟ್ ನಲ್ಲಿ ಕೋಟಿ ಕೋಟಿ ಹಣವನ್ನು ಲಿಂಗಾಯತ ಮಠಗಳಿಗೆ ನೀಡಿದ್ದಾರೆ. ಆದ್ದರಿಂದ ಲಿಂಗಾಯತರು ಶೆಟ್ಟರಿಗೆ ಜೈ ಎಂದರೂ ಆಶ್ಚರ್ಯವಿಲ್ಲ.
ಪ್ರಬಲ ಅಭ್ಯರ್ಥಿಗಳಿಲ್ಲ : ಜಗದೀಶ್ ಶೆಟ್ಟರ್ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ.ಮಹೇಶ್ ನಾಲವಾಡ ವೃತ್ತಿಯಲ್ಲಿ ವೈದ್ಯರು. ಮೊದಲ ಬಾರಿಗೆ ಶೆಟ್ಟರ್ ವಿರುದ್ಧ ಚುನಾವಣೆ ನಿಂತಿದ್ದಾರೆ. ಜೆಡಿಎಸ್ ನ ತಬ್ರೇಜ್ ಸಂಶಿ ಸಹ ಮೊದಲ ಚುನಾವಣೆ ಎದುರಿಸುತ್ತಿದ್ದಾರೆ.
ಸಿಎಂ ವಿರುದ್ಧ ಸದಾ ಸಿಡಿದು ಬೀಳುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಕೆಜೆಪಿ ಸಹ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಎಸ್.ಎಸ್.ಪಾಟೀಲ್ ಅವರಿಗೆ ಟಿಕೆಟ್ ನೀಡಿದೆ. ಎಲ್ಲಾ ಅಭ್ಯರ್ಥಿಗಳು ಶೆಟ್ಟರ್ ಗೆ ತೀವ್ರ ಸವಾಲು ಒಡ್ಡುವ ಪರಿಸ್ಥಿತಿಯಲ್ಲಿಲ್ಲ.
ಸಾಧ್ಯತೆ ಏನು : ಎರಡು ದಶಕಗಳಿಂದ ಬಿಜೆಪಿ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ 19 ವಾರ್ಡ್ ಗಳ ಪೈಕಿ 12 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಉತ್ಸಾಹದಲ್ಲಿದೆ. ಲಿಂಗಾಯತರು ಮತ್ತು ಮುಸ್ಲಿಂಮರು ನಿರ್ಣಾಯಕ ಪಾತ್ರ ವಹಿಸಲಿದ್ದು, ಅವರ ವಿಶ್ವಾಸ ಗಳಿಸಿದರೆ ಶೆಟ್ಟರ್ ಮತ್ತೊಮ್ಮೆ ವಿಧಾನಸಭೆಗೆ ನಿರಾಯಸವಾಗಿ ಆಗಮಿಸುತ್ತಾರೆ.
ಕ್ಷೇತ್ರದಲ್ಲಿ ಒಟ್ಟು 1,99,523 ಮತದಾರರಿದ್ದು ಬಿಜೆಪಿ ಈಗಾಗಲೇ ಮುಂದಿನ ಮುಖ್ಯಮಂತ್ರಿ ಶೆಟ್ಟರ್ ಎಂದು ಘೋಷಿಸಿರುವುದರಿಂದ ಶೆಟ್ಟರ್ ಪರವಾದ ಅಲೆ ಜೋರಾಗಿದೆ. ಆದರೂ ಮತದಾರರ ತೀರ್ಪು ಏನೆಂದು ಉಹಿಸುವುದು ಕಷ್ಟ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications