ಅಂಬರೀಷ್ ನಿಜ ಜೀವನದಲ್ಲೂ ನಟಿಸುವುದು ಏಕೆ?
ಸೋಮವಾರ ನಗರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ರೋಡ್ಶೋ ನಡೆಸಿದ ನಂತರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕುಮಾರಸ್ವಾಮಿ ಭಾಗವಹಿಸಿ ಮಾತನಾಡಿದರು. ಸಿನಿಮಾ ಲೋಕದ ಅಂಬರೀಷ್ ಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ತಾಳ್ಮೆಯಿಲ್ಲ ಎಂದು ಆರೋಪಿಸಿದರು.
ಅಂಬರೀಷ್ ನನ್ನ ಒಳ್ಳೆಯ ಸ್ನೇಹಿತರು. ಆದರೆ, ರಾಜಕೀಯದಲ್ಲಿ ನಮಗೆ ಎದುರಾಳಿಗಳು. ಚುನಾವಣೆಯ ನಂತರ ಮಂಡ್ಯದಲ್ಲಿ ಮನೆ ಮಾಡುತ್ತೇನೆಂದು ಅಂಬರೀಷ್ ಹೇಳುತ್ತಾರೆ. ಅವರನ್ನು ನಾನು ಹೊಸದಾಗಿ ನೋಡುತ್ತಿಲ್ಲ ಎಂದು ಅವರು ಲೇವಡಿ ಮಾಡಿದರು.
ಅಂಬರೀಷ್ ಗೆ ರಾಜಕಿಯ ಆಶ್ರಯ ಕೊಟ್ಟಿದ್ದೇ ಜನತಾ ಪರಿವಾರ ಎಂಬುದು ನೆನಪಿರಲಿ, ಇಂದು ರಾಜ್ಯದ ಜನಸಾಮಾನ್ಯರು ಸಂಕಷ್ಟದ ಲ್ಲಿದ್ದಾರೆ. ಜನರಿಗೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕೆ ನಮ್ಮ ಆದ್ಯತೆ ಎಂದರು.
ಕಾವೇರಿ ವಿಚಾರದಲ್ಲಿ ದೇವೇಗೌಡರ ಪಾತ್ರವಿಲ್ಲವೆನ್ನುತ್ತಾರೆ. ಕಾವೇರಿ ಉಸ್ತುವಾರಿ ನೀರು ನಿರ್ವಹಣಾ ಮಂಡಳಿ ರಚನೆ ತಡೆದದ್ದೇ ಗೌಡರು. ಕಾಂಗ್ರೆಸ್ನ ಸಚಿವರಿಂದ ಏನೂ ಮಾಡಲಾಗಲಿಲ್ಲ ಎಂದು ಅವರು ತಿರುಗೇಟು ನೀಡಿದರು.
ಮಂಡ್ಯದ ಮೈಷುಗರ್ ಕಾರ್ಖಾನೆಗೆ 70 ಕೋಟಿ ರೂ.ನೀಡಿ ಉಳಿಸಿದ್ದು ನನ್ನ ಸರಕಾರ. ಬಿಜೆಪಿ ಸರಕಾರದಲ್ಲಿ ಅಧ್ಯಕ್ಷರಾದವರು ಕಾರ್ಖಾನೆಗಿಂತ ತಮ್ಮ ಅಭಿವೃದ್ಧಿ ಮಾಡಿಕೊಂಡರು. ಮೆಡಿಕಲ್ ಕಾಲೇಜು ಸೇರಿದಂತೆ ಜಿಲ್ಲೆಗೆ ನನ್ನ ಸರಕಾರ ಸಾಕಷ್ಟು ಕೊಡುಗೆ ನೀಡಿದೆ ಎಂದು ಕುಮಾರಸ್ವಾಮಿ ಹೇಳಿದರು.
ಬಂಡಾಯ ಅಭ್ಯರ್ಥಿ ಅಶೋಕ್ ಜಯರಾಂ ಬಗ್ಗೆ ಸಭೆಯಲ್ಲಿ ಕೂಗು ಕೇಳಿಬಂದದ್ದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ದೇವೇಗೌಡರೇ ಮನೆಗೆ ಕರೆಸಿ ಬುದ್ಧಿ ಹೇಳಿದರೂ ಕೇಳಲಿಲ್ಲ. ಆತ ವಿದೇಶದಲ್ಲಿ ಓದಿದವರು, ನಾವು ಹಳ್ಳಿಯಲ್ಲಿ ಓದಿದವರು ಬಿಡಿ ಎಂದರು.
ಮಾಧ್ಯಮಗಳ ಸಮೀಕ್ಷೆಯನ್ನು ಮೀರಿ ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರೈತ, ದಲಿತ, ಜನಸಾಮಾನ್ಯರು ಅಭಿವೃದ್ಧಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಜನಮತ : ಮಂಡ್ಯದಲ್ಲಿ ಅಂಬಿ ಸೋಲೋದು ಗ್ಯಾರಂಟಿ!