ತಾಂತ್ರಿಕವಾಗಿ ಇನ್ನೂ ಬಿಜೆಪಿಯಲ್ಲೇ ಇರುವೆ
ಕುಂದಾಪುರ, ಏ.22: ತಾಂತ್ರಿಕವಾಗಿ ಇನ್ನೂ ಬಿಜೆಪಿಯಲ್ಲೇ ಇರುವೆ ಎಂದು ಕೆಜೆಪಿ ಅಧಿನಾಯಕ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಹೇಳಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಫಲವಾಗಿ ಬೈಂದೂರು ಕ್ಷೇತ್ರ ಪ್ರಗತಿ ಕಾಣುತ್ತಿದೆ. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಕ್ಷೇತ್ರವು ಅಭಿವೃದ್ಧಿ ಕಾಣಲು ಸಹಾಯಕವಾಗಿದೆ. ಕ್ಷೇತ್ರದ ಜನಕ್ಕೆ ಇದು ಅರ್ಥವಾಗಿದೆ. ಹಾಗಾಗಿ ಜನ ಕೆಜೆಪಿಗೇ ಮತ ಹಾಕುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತುಂಬು ಭರವಸೆ ವ್ಯಕ್ತಪಡಿಸಿದ್ದಾರೆ.
ಬೈಂದೂರು, ಶಿವಮೊಗ್ಗದ ಸಂಸದರೂ ಆದ ಬಿವೈ ರಾಘವೇಂದ್ರ ಅವರ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ರಾಮ ನವಮಿ ಆಚರಣೆ ಅಂಗವಾಗಿ ರಾಘವೇಂದ್ರ ಅವರು ಬೈಂದೂರಿಗೆ ಭೇಟಿ ನೀಡಿದ್ದರು. ಬೈಂದೂರು ಕೆಜೆಪಿ ಅಭ್ಯರ್ಥಿ ಅಶೋಕ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಹಾಜರಿದ್ದರು.

ನಾನು ಎಂಪಿ ಆಗಿದ್ದು ನಮ್ಮಪ್ಪ ಈ ನಾಡಿನ ಮುಖ್ಯಮಂತ್ರಿಯಾಗಿದ್ದಾಗ. ನನ್ನನ್ನು ಪಕ್ಷದಿಂದ ಉಚ್ಛಾಟಿಸುವ ಸಂಬಂಧ ಬಿಜೆಪಿ ನನಗೆ ನೋಟಿಸ್ ನೀಡಿದೆ. ಈಗಲೂ ಅಷ್ಟೇ ತಾಂತ್ರಿಕವಾಗಿ ನಾನು ಬಿಜೆಪಿ ಸಂಸದನೇ. ಆದರೆ ಮಾನಸಿಕವಾಗಿ ನಾನು ನನ್ನ ತಂದೆ ನೇತೃತ್ವದ ಕೆಜೆಪಿಯಲ್ಲಿದ್ದೇನೆ. ಆದ್ದರಿಂದ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಜೆಪಿ ಗೆಲುವಿಗೆ ಶ್ರಮಿಸುವೆ' ಎಂದು ಅವರು ಸ್ಪಷ್ಡಪಡಿಸಿದರು.
ಬೈಂದೂರು ತುಂಬಾ ಹಿಂದುಳಿದಿತ್ತು. ಆದರೆ ನಮ್ಮಪ್ಪ ಅಧಿಕಾರಕ್ಕೆ ಬರುತ್ತಿದ್ದಂತೆ ಕ್ಷೇತ್ರವು ಆಮೂಲಾಗ್ರ ಬದಲಾವಣೆ ಕಂಡಿತು. ಆದರೆ ಯಡಿಯೂರಪ್ಪನವರು ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಕ್ಷೇತ್ರ ಅನಾಥವಾಯಿತು. ಇದರಿಂದ ನನ್ನಲ್ಲಿ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಸಮುದ್ರ, ನದಿಗಳ ಮಧ್ಯೆಯೇ ಇದ್ದರೂ ಇಲ್ಲಿನ ಜನ ಕುಡಿಯುವ ನೀರಿನ ಬವಣೆಯಿಂದ ತತ್ತರಿಸಿದ್ದಾರೆ.
ಇದನ್ನು ಅರ್ಥ ಮಾಡಿಕೊಂಡು ಯಡಿಯೂರಪ್ಪ 82 ಕೋಟಿ ರೂ ಯೋಜನೆಯನ್ನು ಜಾರಿಗೊಳಿಸಿದರು. ಶಿರೂರು ಮತ್ತು ಆಲೂರು ಗ್ರಾಮದ ಬಳಿ ಸೌಪರ್ಣಿಕಾ ನದಿಗೆ ಅಡ್ಡಲಾಗಿ ವೆಂಟೆಡ್ ಡ್ಯಾಂ ನಿರ್ಮಾಣ ರಚನೆಗೆ ಅಸ್ತು ಅಂದರು. ಇದರಿಂದ ಅನೇಕ ಗ್ರಾಮಗಳಿಗೆ ಕುಡಿಯುವ ನೀರು ದಕ್ಕುವಂತಾಯಿತು. ಮೀನುಗಾರರ ಅಭಿವೃದ್ಧಿಗಾಗಿ 120 ಕೋಟಿ ರೂ. ಯೋಜನೆ ಕಾರ್ಯಗತಗೊಳಿಸಿದರು. ಇದೆಲ್ಲ ಜನಕ್ಕೆ ಅರ್ಥವಾಗುತ್ತದೆ ಬಿಡಿ ಎಂದು ರಾಘವೇಂದ್ರ ಮಾರ್ಮಿಕವಾಗಿ ಹೇಳಿದರು.
ಕೊಲ್ಲೂರು ಬಳಿ ಉತ್ತಮ ದರ್ಜೆಯ ರೈಲ್ವೆ ನಿಲ್ದಾಣ ನಿರ್ಮಾಣವಾಗಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ. ಇಲ್ಲಿನ ಜನ ಸಂತಸದ ಜೀವನ ಕಾಣುವಂತಾಗಲು ನಾನು ಮತ್ತು ಯಡಿಯೂರಪ್ಪ ಸಾಕಷ್ಟು ಶ್ರಮಿಸಿದ್ದೇವೆ. ಇದೆಲ್ಲ ಜನಕ್ಕೆ ಅರ್ಥವಾಗುತ್ತದೆ ಬಿಡಿ ಎಂದು ರಾಘವೇಂದ್ರ ಮಾರ್ಮಿಕವಾಗಿ ಹೇಳಿದರು.












Click it and Unblock the Notifications