ಸರಕಾರ ರಚಿಸುವ ಕನವರಿಕೆಯಲ್ಲಿ ದೇವೇಗೌಡ

ಸೋಮವಾರ ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ದೇವೇಗೌಡರು, ಸತತ ಹೋರಾಟಗಳಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ ಎಂದು ಹೇಳಿದರು. ಮುಂದಿನ ಲೋಕಸಭೆ ಚುನಾವಣೆಗೂ ಕರ್ನಾಟಕ ವಿಧಾನಸಭೆ ಚುನಾವಣೆ ದಿಕ್ಸೂಚಿಯಾಗಲಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯುವ ಪ್ರಾದೇಶಿಕ ಪಕ್ಷವನ್ನು ರಾಷ್ಟ್ರೀಯ ಪಕ್ಷಗಳು ಹುಡುಕಿಕೊಂಡು ಬರಲಿವೆ ಎಂದು ತಿಳಿಸಿದರು.
ರಾಜಕಾರಣದಲ್ಲಿ ನಿರಾಶಾವಾದಿಗಳಾಗಿದ್ದರೆ ಗೆಲುವು ಸಾಧಿಸುವುದು ಕಷ್ಟ. 1989ರಲ್ಲಿ ನಾನೇ ಸೋತಿದ್ದೆ. ಆಗ ನಾನು ಎದೆಗುಂದಲಿಲ್ಲ. ಜನರ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಮಾಡಿದೆ. 1994ರಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬಂತು ಎಂದು ನೆನಪಿನ ಪುಟ ತೆರೆದಿಟ್ಟರು.
ಕಾವೇರಿ ಸಮಸ್ಯೆ ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಜನರು ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ನೀಡಲಿದ್ದಾರೆ. ಸ್ವಂತ ಬಲದಿಂದ ಸರ್ಕಾರ ರಚಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದವರು ಸರ್ಕಾರ ರಚಿಸಿ ಮಂತ್ರಿ ಮಂಡಲ ರಚಿಸುವಷ್ಟು ಮುಂದೆ ಹೋಗಿದ್ದಾರೆ. ಆದರೆ, ಮತ ಜನರು ನೀಡುವುದಿಲ್ಲ. ಪಕ್ಷ ಅಧಿಕಾರ ಪಡೆಯುವುದಿಲ್ಲವೆಂದು ಭವಿಷ್ಯ ನುಡಿದರು.
ಬಿಜೆಪಿ ಪಕ್ಷ ಜನರ ನಿರೀಕ್ಷೆ ಹಾಳು ಮಾಡಿದೆ. ಜನಾದೇಶವನ್ನು ಪರಿಪಾಲಿಸದೇ ಮತ್ತೊಮ್ಮೆ ಮತ ನೀಡಿ ಎಂದು ಕೇಳಲು ಹೊರಟಿದ್ದಾರೆ. ಬಿಜೆಪಿಯ ದುರಾಡಳಿತ ನೋಡಿದ ಜನರು ಮತ್ತೊಮ್ಮೆ ಮತ ನೀಡುವುದಿಲ್ಲ ಎಂದು ಹೇಳಿದರು.
ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಎಂಬುವುದು ಕೆಲವರ ಆರೋಪ. ಆದರೆ, ಪಕ್ಷ ರಾಜ್ಯಾದ್ಯಂತ ವಿಸ್ತರಿಸಿದೆ. ಟಿಕೆಟ್ ಗಾಗಿ ನಡೆದ ಪೈಪೋಟಿಯೇ ಇದಕ್ಕೆ ಸಾಕ್ಷಿ. ಫಲಿತಾಂಶದ ಬಗ್ಗೆ ಯೋಚಿಸದೆ ಕೆಲಸ ಮಾಡುವುದು ನಮ್ಮ ಗುರು ಯಾವ ಸಮೀಕ್ಷೆಗಳ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಪಕ್ಷ ಸಂಘಟನೆ ಮಾಡಲಾಗುತ್ತದೆ ಎಂದು ಗೌಡರು ಹೇಳಿದರು.
ನಿವೃತ್ತಿಯಿಲ್ಲ : ನಾನು ರಾಜಕಾರಣದಿಂದ ನಿವೃತ್ತಿನಾಗುವ ಪ್ರಶ್ನೆಯೇ ಇಲ್ಲ. ಕೊನೆಯ ಉಸಿರು ಇರುವವರೆಗೂ ರಾಜಕಾರಣ ಮಾಡುತ್ತಲೇ ಇರುತ್ತೇನೆ. ಇಂದಿನ ರಾಜಕಾರಣ ಭ್ರಷ್ಟಾಚಾರದಿಂದ ತುಂಬಿ ಹೋಗಿದೆ. ನಾಯಕರಿಗೆ ಸಲಹೆಗಳನ್ನು ನೀಡುತ್ತಾ, ಭ್ರಷ್ಟಾಚಾರ ರಹಿತ ರಾಜಕಾರಣ ಮಾಡಲು ಕೊನೆಯ ಕ್ಷಣದವರೆಗೂ ಪ್ರಯತ್ನಿಸುತ್ತೇನೆ ಎಂದು ಗೌಡರು ಹೇಳಿದರು.
ಆತ್ಮಕಥೆ ಬರೆಯುವೆ : ವಿಧಾನಸಭೆ ಚುನಾವಣೆಗೆ ಕೇವಲ 12 ದಿನಗಳು ಬಾಕಿ ಇಳಿದಿದೆ. ಚುನಾವಣೆಯ ನಂತರ ಆತ್ಮಕಥೆ ಬರೆಯಲಿದ್ದೇನೆ ಎಂದು ದೇವೇಗೌಡರು ಹೇಳಿದರು. ಅನೇಕ ರಾಜಕೀಯ ಏಳು ಬೀಳು ಕಂಡಿದ್ದೇನೆ. ಅವುಗಳನ್ನು ಆತ್ಮಕತೆಯಲ್ಲಿ ದಾಖಲಿಸಿಲಿದ್ದೇನೆ ಎಂದು ಗೌಡರು ತಿಳಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications