ಮುನಿರತ್ನ ಹಿಟ್ ವಿಕೆಟ್: ಚುನಾವಣೆಯಿಂದ ಔಟ್?
ಬೆಂಗಳೂರು ನಗರದಲ್ಲೇ ನಲವತ್ತೇಳು ಸೈಟುಗಳನ್ನು ಹೊಂದಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಚಿತ್ರ ನಿರ್ಮಾಪಕ ಮುನಿರತ್ನ ಅವರು ಮತ್ತೊಂದು ಕಂಟಕ ಎದುರಿಸುತ್ತಿದ್ದು, ಚುನಾವಣೆಗೆ ಮುನ್ನವೇ ಕಣದಿಂದ ಹೊರಬೀಳುವ ಸಾಧ್ಯತೆ ಇದೆ.
'ನನ್ನ ನಾಮಪತ್ರ ಅರ್ಜಿ ತಿರಸ್ಕೃತವಾಗಬಾರದು. ಹಾಗೇನಾದರೂ ಆದರೆ ಸುಮ್ಮನಿರೋಲ್ಲ. ಗೊತ್ತಲ್ಲಾ ಮಲ್ಲೇಶ್ವರದಲ್ಲಿ ಬಾಂಬ್ ಸ್ಫೋಟವಾಗಿರುವುದು' ಎಂದು ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿ ಜ್ಯೋತಿ ಅವರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಬಂಧನವೂ ಆಗಿ, ಜಾಮೀನಿನ ಮೇಲೆ ಬಿಡುಗಡೆಯೂ ಆಗಿದ್ದಾರೆ.
ಆದರೆ ಪ್ರಕರಣ ಇಷ್ಟಕ್ಕೇ ಮುಗಿದಿಲ್ಲ. ಚುನಾವಣಾಧಿಕಾರಿ ಜ್ಯೋತಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸದರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ತಿಳಿಸಿದ್ದಾರೆ.
ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರೂ ಕಣಕ್ಕಿಳಿದಿದ್ದಾರೆ. ಮುನಿರತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಐಸಿಸಿ, ತಕ್ಷಣ ಒಂದು ವರದಿಯನ್ನು ಸಲ್ಲಿಸುವಂತೆ ಡಾ. ಪರಮೇಶ್ವರಗೆ ಸೂಚಿಸಿದೆ.
ಇದೇ ಅವಕಾಶಕ್ಕೆ ಕಾಯುತ್ತಿದ್ದ ಡಾ. ಪರಮೇಶ್ವರ್ ಅವರು ಮುನಿರತ್ನಗೆ ಮಾರಕವಾಗುವಂತಹ ವರದಿ ಸಿದ್ಧಪಡಿಸಿ ಕಳಿಸಿದ್ದಾರೆ ಎನ್ನಲಾಗಿದೆ. ಅದರಂತೆ ನಾಮಪತ್ರ ವಾಪಸ್ ಪಡೆದು, ಚುನಾವಣಾ ಕಣದಿಂದ ವಾಪಸ್ ಸರಿಯುವಂತೆ ಪಕ್ಷವು ಮುನಿರತ್ನಗೆ ಆದೇಶ ನೀಡುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಮೂಲಗಳು ಹೇಳಿವೆ.
ಕಳಪೆ ಕಾಮಗಾರಿಯಿಂದ ಗೋಡೆ ಕುಸಿದು ವಿದ್ಯಾರ್ಥಿನಿಯ ಸಾವಿಗೆ ಕಾರಣವಾಗಿದ್ದ ಕಾರ್ಪೊರೇಟರ್ ಮುನಿರತ್ನ ತತ್ಸಂಬಂಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೊಕದ್ದಮೆ ಎದುರಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ನೀಡುವುದು ಬೇಡ ಎಂದು ಡಾ. ಪರಮೇಶ್ವರ್ ಅವರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಆ ಪತ್ರ ಸೋರಿಕೆಯಾಗಿ, ಡಾ. ಪರಮೇಶ್ವರ್ ವಿರುದ್ಧ ಮುನಿರತ್ನ ಕೆಂಡಾಮಂಡಲಗೊಂಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.