ತಾಕತ್ತಿದ್ರೆ ಸದಾನಂದ ಗೌಡ ನನ್ನ ಎದುರು ನಿಲ್ಲಲಿ
ಬುಧವಾರ(ಏ.17)ಕಾಂಗ್ರೆಸ್ ಪಕ್ಷದ ಬಿ ಫಾರಂ ಪಡೆದು ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಪುತ್ತೂರಿನ ಜೈನ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯ ಕರ್ತರ ಸಭೆಯಲ್ಲಿ ಶಕುಂತಳಾ ಶೆಟ್ಟಿ ಮಾತನಾಡಿದರು.
ಭ್ರಷ್ಟತನ, ಚುಂಬನ, ನರ್ತನ, ಆಲಿಂಗನ ವೀಕ್ಷಣೆಯಲ್ಲಿ ತಲ್ಲೀನರಾಗಿರುವ ಬಿಜೆಪಿ ಪಕ್ಷದ ನಾಯಕರಿಗೆ ನಮ್ಮ ಬಗ್ಗೆ ಆರೋಪ ಮಾಡುವ ನೈತಿಕ ಹಕ್ಕಿಲ್ಲ. ಆರೆಸ್ಸೆಸ್ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೆಳೆದ ನಾಯಕರು ಇಂದು ಪಕ್ಷದ ಅಕ್ರಮಗಳನ್ನು ಕಂಡು ಮೌನವಾಗಿದ್ದಾರೆ.
ನನ್ನ ಸ್ವಾಭಿಮಾನ ಹಾಗೂ ನೈತಿಕತೆಯನ್ನು ಬೆಂಬಲಿಸಿ ಕಾಂಗ್ರೆಸ್ ನನಗೆ ಅವಕಾಶ ನೀಡಿದೆ. ಬಿಜೆಪಿಯಲ್ಲಿ ಕಳೆದು ಕೊಂಡಿರುವುದನ್ನು ಪಡೆದುಕೊಳ್ಳುವ ಉದ್ದೇಶದಿಂದ ಸ್ಪರ್ಧಾ ಕಣದಲ್ಲಿದ್ದೇನೆ. ಡಿ.ವಿ. ಸದಾನಂದ ಗೌಡರು ತನ್ನ ವಿರುದ್ಧ ಇತರ ಅಭ್ಯರ್ಥಿಯನ್ನು ನಿಲ್ಲಿಸಿ ಬಲಿ ಪಶು ಮಾಡಿದ್ದಾರೆ. ತಾಕತ್ತಿದ್ದರೆ ಅವರು ತನ್ನೆದುರು ಸ್ಪರ್ಧಿಸಿ ನೋಡಬೇಕಿತ್ತು ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷ ತನಗೆ ಅವಕಾಶ ಮಾಡಿ ಕೊಡುವ ಮೂಲಕ ತತ್ವ, ನ್ಯಾಯ ಮತ್ತು ಧರ್ಮಕ್ಕೆ ಬೆಲೆ ನೀಡಿದೆ. ಆದರೆ ಇಲ್ಲಿ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಗೆಲ್ಲುವ ಬಗ್ಗೆ ಅತಿಯಾದ ಆತ್ಮವಿಶ್ವಾಸ ಬೇಡ. ಪ್ರಯತ್ನ ಮಾಡಿ ನಾವು ಗೆಲುವು ಸಾಧಿಸಬೇಕಾಗಿದೆ ಎಂದ ಶೆಟ್ಟಿ ಅವರು ಹೇಳಿದರು.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಶಕುಂತಳಾ ಶೆಟ್ಟಿ ಅವರೇ ನಮ್ಮೆಲ್ಲರ ಸರ್ವ ಸಮ್ಮತ ನಾಯಕಿಯಾಗಿದ್ದಾರೆ. ನಮ್ಮ ಅಭ್ಯರ್ಥಿಯಾದ ಶಕುಂತಳಾ ಶೆಟ್ಟಿರನ್ನು ಗೆಲ್ಲಿಸುವ ಮೂಲಕ ಇಲ್ಲಿ ಕಾಂಗ್ರೆಸ್ ಗೆಲ್ಲಿಸುವುದೇ ನಮ್ಮ ಹೋರಾಟ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಇದೆ ಸಂದರ್ಭದಲ್ಲಿ ಹೇಳಿದರು.
ಶಕುಂತಳಾ ಶೆಟ್ಟಿ ಅವರು 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಯಭೇರಿ ಬಾರಿಸಿದ್ದರು. 2008ರಲ್ಲಿ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿತ್ತು. ರಾಜಕೀಯ ಗುರು ಉರಿಮಜಲು ರಾಮ್ ಭಟ್ ಸೇರಿದಂತೆ ಹಲವಾರು ಮುಖಂಡರು ಡಿವಿ ಸದಾನಂದ ಗೌಡ ಸೇರಿದಂತೆ ಹಿರಿಯ ನಾಯಕರ ಮೇಲೆ ಮುನಿಸುಗೊಂಡಿದ್ದರು. ಆದರೆ, ಬಂಡಾಯ ಅಭ್ಯರ್ಥಿಯಾಗಿ ನಿಂತಿದ್ದ ಶಕುಂತಳಾ ಅವರು ಮಲ್ಲಿಕಾ ಪ್ರಸಾದ್ ವಿರುದ್ಧ ಸೋಲು ಅನುಭವಿಸಿದ್ದರು.
ನಂತರ ಶಕುಂತಳಾ ಶೆಟ್ಟಿ ಅವರಿಗೆ ಕೆಜೆಪಿ ಹಾಗೂ ಜೆಡಿಎಸ್ ಆಫರ್ ಬಂದಿತ್ತು. ಆದರೆ, ಕೊನೆಗೆ ಕಾಂಗ್ರೆಸ್ ನಿಂದ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ ಅಧಿಕೃತ ಅಭ್ಯರ್ಥಿ ಸಂಜೀವ ಎಂ ಅವರು ಇವರಿಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ.