ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂಭಾಗದಲ್ಲಿ ಸ್ಪೋಟ
ಬೆಂಗಳೂರು, ಏ. 17 : ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂಭಾಗದ ವಾಹನ ನಿಲುಗಡೆ ಸ್ಥಳದಲ್ಲಿ ಬಾಂಬ್ ಸ್ಪೋಟ ಸಂಭವಿಸಿದ್ದು, ಘಟನೆಯಿಂದಾಗಿ 16 ಮಂದಿ ಗಾಯಗೊಂಡಿದ್ದಾರೆ. ಬೈಕ್ ನಲ್ಲಿ ಇಡಲಾಗಿದ್ದ ಬಾಂಬ್ ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ಸ್ಪೋಟಗೊಂಡಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ ಬೆಳಗ್ಗೆ ನೂರಾರು ಮಂದಿ ಕಾರ್ಯಕರ್ತರು ಸೇರಿದ್ದ ವೇಳೆ ಈ ಸ್ಪೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ವಾಹನ ನಿಲ್ದಾಣದಲ್ಲಿದ್ದ ಮೂರು ಕಾರುಗಳು ಮತ್ತು 2 ಬೈಕ್ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿಗೆ ಆಹುತಿಯಾದವು. ಸ್ಥಳೀಯರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಒಂದು ಗಂಟೆಯ ಕಾರ್ಯಚರಣೆ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಮೊದಲು ಕಾರುಗಳ ಗ್ಯಾಸ್ ಸಿಲೆಂಡರ್ ಸ್ಪೋಟಿಸಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿತ್ತು. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ಆಗಮಿಸಿ ನಡೆದಿರುವುದು ಬಾಂಬ್ ಸ್ಪೋಟ ಎಂದು ಖಚಿತ ಪಡಿಸಿದರು. ಮಲ್ಲೇಶ್ವರಂ ಪೊಲೀಸರು, ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಪೋಟದ ತೀವ್ರತೆಗೆ ಐವರು ಪೊಲೀಸರು, ಒಬ್ಬ ಮಹಿಳಾ ಪೇದೆ ಸೇರಿದಂತೆ 16 ಮಂದಿ ಗಾಯಗೊಂಡರು. ಗಾಯಾಳುಗಳನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯೂಷನ್ ಮುಗಿಸಿಕೊಂಡು ಮರಳುತ್ತಿದ್ದ ನಿಶಾ (18), ರಕ್ಷಿತಾ (20) ವಿದ್ಯಾರ್ಥಿನಿಯರಿಗೆ ಸ್ಪೋಟದಿಂದಾಗಿ ಚಿಕ್ಕಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮಲ್ಯ ಆಸ್ಪತ್ರೆಗೆ, ಮತ್ತಿಬ್ಬರನ್ನು ನಿಮಾನ್ಸ್ ಆಸ್ಪತ್ರಗೆ ದಾಖಲಿಸಲಾಗಿದೆ.
ಎನ್ ಎಸ್ ಜಿ ತಂಡ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಘಟನಾ ಸ್ಥಳವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಸ್ಪೋಟದ ತೀವ್ರತೆಗೆ ಅಕ್ಕ ಪಕ್ಕದ ಮನೆಗಳ ಕಿಟಕಿ ಗಾಜುಗಳು ಪುಡಿ-ಪುಡಿಯಾಗಿವೆ. ಸುಮಾರು 3 ಕಿ.ಮೀಗಳ ವರೆಗೂ ಸ್ಪೋಟದ ಶಬ್ದ ಕೇಳಿ ಬಂದಿದೆ. ಭಯೋತ್ಪಾದಕ ಸಂಘಟನೆಗಳ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.
ಗೃಹ ಸಚಿವ ಮತ್ತು ಉಪ ಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಅಶ್ವಥ್ ನಾರಾಯಣ್, ಸಚಿವ ಸುರೇಶ್ ಕುಮಾರ್ ಮುಂತಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನೆಯ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಘಟನೆಯನ್ನು ಎಲ್ಲಾ ನಾಯಕರು ತೀವ್ರವಾಗಿ ಖಂಡಿಸಿದ್ದು, ಜನರಿಗೆ ವದಂತಿಗಳಿಗೆ ಕಿವಿಕೊಡದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ