ಕಾರು ಸ್ಫೋಟ: ಉಗ್ರರ ಕೈವಾಡ, ಕಟ್ಟೆಚ್ಚರ ಘೋಷಣೆ
ಬೆಂಗಳೂರು, ಎ.17: ಚುನಾವಣೆ ಸಮ್ಮುಖದಲ್ಲಿ ರಾಜಧಾನಿಯಯಲ್ಲಿ ಆಡಳಿತಾರೂಢ ಬಿಜೆಪಿ ಕಚೇರಿ ಎದುರೇ ಸರಣಿ ಸ್ಫೋಟ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆರಂಭದಲ್ಲಿ ಕಾರಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಸಿಡಿದು ಭಾರಿ ಸ್ಫೋಟ ಸಂಭವಿಸಿದೆ ಎಂದು ಅಂದಾಜಿಸಲಾಗಿತ್ತು.
ಆದರೆ ಪೊಲೀಸರ ಪ್ರಾಥಮಿಕ ತನಿಖೆಯಿಂದ ಇದು ಭಯೋತ್ಪಾದಕ ಕೃತ್ಯವಿರಬಹುದು ಎನ್ನಲಾಗಿದೆ. ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ.

ಶಾಂತಿಯುತ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕದಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ಮೊದಲು ಸ್ಫೋಟಗೊಂಡ ಕಾರು ಕೃಷ್ಣ ಎಂಬುವವರಿಗೆ ಸೇರಿದ್ದಾಗಿದೆ. ಆದರೆ ಸ್ಫೋಟಕ್ಕೆ ತುತ್ತಾದ ಕಾರಿಗೆ ಆನಿಕೊಂಡು ಒಂದು ಸೈಕಲ್ ಬಿದ್ದಿರುವುದು ಪತ್ತೆಯಾಗಿದೆ. ಇತ್ತೀಚೆಗೆ ಹೈದರಾಬಾದಿನಲ್ಲಿ ಸೈಕಲ್ಲುಗಳಲ್ಲಿ ಬಾಂಬುಗಳನ್ನಿಟ್ಟು ಭಯೋತ್ಪಾದಕತೆ ನಡೆಸಲಾಗಿತ್ತು. ಈ ಘಟನೆಯೂ ಅದಕ್ಕೆ ತಳುಕು ಹಾಕಿಕೊಂಡಂತಿದೆ.
ತಾಜಾ ವರದಿಗಳ ಪ್ರಕಾರ ಸುಜುಕಿ ಬೈಕಿನಲ್ಲಿ ಪೈಪ್ ಬಾಂಬುಗಳನ್ನಿಟ್ಟು ಸ್ಫೋಟಿಸಲಾಗಿದೆ. ಎರಡು ಕಾರುಗಳ ಮಧ್ಯೆ ಬೈಕನ್ನು ನಿಲ್ಲಿಸಿ, ಸ್ಫೋಟಿಸಲಾಗಿದೆ. ಬೈಕು ತಮಿಳುನಾಡಿನ ನೋಂದಣಿ ಸಂಖ್ಯೆ ಟಿಎನ್ ಆರ್ 3767 ಹೊಂದಿದೆ.
ತಾಜಾ ಸುದ್ದಿ: ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳ, ಬಾಂಬ್ ಪತ್ತೆ ದಳ ಆಗಮಿಸಿದೆ.
ಮಾಮೂಲಿ ಸಿಲಿಂಡರ್ ಸ್ಫೋಟವಾಗಿದ್ದರೆ ಇಷ್ಟೊಂದು ತೀವ್ರತೆ ಇರುತ್ತಿರಲಿಲ್ಲ. ಆತಂಕದ ವಿಷಯವೆಂದರೆ ಮೀಸಲು ಪೊಲೀಸ್ ಪಡೆಯ ಬಸ್ಸೂ ಸಹ ಜಖಂಗೊಂಡಿದ್ದು, ಪೊಲೀಸ್ ವಾಹನದ ಪಕ್ಕದಲ್ಲೇ ಕಾರುಗಳ ಸ್ಫೋಟವಾಗಿದೆ. ಸ್ಫೋಟದ ಸದ್ದು ಮೂರು ಕಿಮೀ ವರೆಗೂ ಕೇಳಿ ಬಂದಿದೆ. ಸ್ಫೋಟಕ್ಕೆ ತುತ್ತಾದ ವಾಹನಗಳು ಛಿದ್ರಗೊಂಡಿದ್ದು, ಬಿಡಿ ಭಾಗಗಳು ಚೆಲ್ಲಾಪಿಲ್ಲಿ ಬಿದ್ದಿವೆ.
ಐಪಿಎಲ್ ಮ್ಯಾಚ್ ಸಹ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಭಯೋತ್ಪಾದಕ ದಾಳಿ ನಡೆಯಬಹುದು ಎಂಬ ಗುಪ್ತಚರ ಮಾಹಿತಿ ಸಹ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇಂಡಿಯನ್ ಮುಜಾಯಿದೀನ್ ಕೈವಾಡ ಶಂಕೆ?
ದೇಶದ ಹಲವೆಡೆ ಬಾಂಬ್ ಸ್ಫೋಟಗಳನ್ನ ನಡೆಸಿರುವ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯು ಇಂದಿನ ಬೈಕ್ ಬಾಂಬ್ ಸ್ಫೋಟದ ಹಿಂದಿರಬಹುದೆಂದು ಶಂಕಿಸಲಾಗಿದೆ. 17.04.2010 ರಂದು ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇಂತಹುದೇ ಸ್ಫೋಟ ಸಂಭವಿಸಿತ್ತು.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications