ಛೆ! ಯಡಿಯೂರಪ್ಪಗೆ ಹೀಗಾಗಬಾರದಿತ್ತು
ಶಿವಮೊಗ್ಗ, ಏ.6: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯ ಕಂಡ 'ದುರಂತ ನಾಯಕ' ಆಗುವತ್ತ ದಾಪುಗಾಲು ಹಾಕುತ್ತಿದ್ದಾರಾ? ಇದೇನು ಸ್ವಯಂಕೃತಾಪರಾಧವೋ ಅಥವಾ ನಂಬಿಗಸ್ಥರೇ ಕೈಕೊಟ್ಟರೋ... ಅಂತೂ ಸದ್ಯದ ಮಟ್ಟಿಗೆ ಯಡಿಯೂರಪ್ಪ ರಾಜ್ಯ ಕಂಡ ದುರಂತ ನಾಯಕ ಅನ್ನದೆ ವಿಧಿಯಿಲ್ಲ.
ಅವರೇ ಹೇಳಿದಂತೆ ನಂಬಿದವರೇ ಅವರಿಗೆ ಕೈಕೊಟ್ಟಿದ್ದಾರೆ. ಇದರಿಂದ ಅವರಿಗೆ ಜಿಗುಪ್ಸೆಯೂ ಆಗಿದೆ. ಅವರಲ್ಲಾಗಲೇ ನೋವು, ಬೇಸರ ಮನೆ ಮಾಡಿದೆ. ಮೂರೂ ಪ್ರಮುಖ ಪಕ್ಷಗಳು ಮೊದಲ ಸುತ್ತಿನಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಈ ಹೊತ್ತಿನಲ್ಲಿ ಯಡಿಯೂರಪ್ಪ ಆಗಲೇ ನಿಶ್ಶಸ್ತ್ರರಾಗಿ, ನಿಸ್ತೇಜರಾಗಿಬಿಟ್ಟರಾ?

ಹಾಗೆ ನೋಡಿದರೆ ಮೊನ್ನೆ ಗೋವಿಂದರಾಜ ನಗರದಲ್ಲೊಬ್ಬರು ತಮಗೆ ಕೈಕೊಟ್ಟಾಗ ಆ ಜನನಾಯಕರ ಮೂಲಸ್ವಭಾವ ಅರಿತಿದ್ದ ಯಡಿಯೂರಪ್ಪಗೆ ತೀರಾ ಬೇಸರ ಅಂತೇನೂ ಆಗಿರಲಿಲ್ಲ ಅನ್ನಿಸುತ್ತದೆ. ಆದರೆ ಅದಾಗುತ್ತಿದ್ದಂತೆ ನಿನ್ನೆ ಪಟ್ಟಿ ನೋಡಿದಾಗ ಶಿಗ್ಗಾವಿ, ಬೀಳಗಿ ಕ್ಷೇತ್ರಗಳತ್ತ ಕಣ್ಣಾಡಿಸಿದಾಗ ಯಡಿಯೂರಪ್ಪಗೆ ನಿಜಕ್ಕೂ ಆಘಾತವಾಗಿದೆ. ತಾನೇ ಕೈಹಿಡಿದು ಬೆಳೆಸಿದ ಕಂದಮ್ಮಗಳು ಕೈಬಿಟ್ಟು ಹೋಗಿವೆ ಎಂಬ ಭಾದೆ ಅವರನ್ನು ಬಹುವಾಗಿ ಕಾಡತೊಡಗಿದೆ.
ಹೊಸ ಪಕ್ಷ ಕಟ್ಟುವ ಧಾವಂತದಲ್ಲಿದ್ದಾಗ 20ಕ್ಕೂ ಹೆಚ್ಚು ಸಲ ಬೆಂಬಲಿಗ ಸಚಿವರ, ಶಾಸಕರ ಸಭೆ ನಡೆಸಲಾಗಿದೆ. ತಾವು ಮುಂದೆ ನಡೆಯಿರಿ ಹಿಂದೆ ಬರುತ್ತೇವೆ ಎಂದು ಅವರೆಲ್ಲಾ ಆಗ ಹೇಳಿದ್ದರು. ಆದರೆ, ಈಗ ಅವರೇ ಬಾರದಿದ್ದಕ್ಕೆ ಮನಸ್ಸಿಗೆ ಬೇಸರ, ಜಿಗುಪ್ಸೆ ಹಾಗೂ ನೋವುಂಟಾಗಿದೆ. ಬರುವ ದಿನಗಳಲ್ಲಿ ಎಚ್ಚರಿಕೆಯಿಂದ ಇರುತ್ತೇನೆ ಎಂದು ಯಡಿಯೂರಪ್ಪ ಭಾವುಕರಾಗಿದ್ದಾರೆ.
ಇಲ್ಲಿ ಯಡಿಯೂರಪ್ಪನಂತಹ ಹುಂಬ ನಾಯಕನ ಸೋಲಿಗೆ ಕಾರಣಗಳು ಹತ್ತಾರು ಇರಬಹುದು, ಅದಕ್ಕೆ ನೂರಾರು ಮಂದಿ ಕೈ ಜೋಡಿಸಿರಬಹುದು. ಯಶಸ್ವಿ ಪುರುಷನ ಹಿಂದೆ ಒಬ್ಬ ಶೋಭಾಯಮಾನ ಮಹಿಳೆ ಇರುತ್ತಾಳೆ ಎಂಬುದಕ್ಕೆ ವ್ಯತಿರಿಕ್ತವಾಗಿ ಅಯಶಸ್ವಿ ಪುರುಷನ ಹಿಂದೆ....
ಆದರೆ ಯಡಿಯೂರಪ್ಪ ಇಲ್ಲಿಗೇ ಅಧೀರರಾಗಬೇಕಿಲ್ಲ. ಇನ್ನೂ ಯುದ್ಧ ಸರಿಯಾಗಿ ಆರಂಭವಾಗಿಲ್ಲ. ಇಷ್ಟಕ್ಕೇ ಶಸ್ತ್ರ ತ್ಯಜಿಸಿ, ಓಡುವ ಅಗತ್ಯವಿಲ್ಲ. ಜನನಾಯಕರು ಕೈಕೊಟ್ಟಿರಬಹುದು. ಆದರೆ ಜನ ಅಂದರೆ ಮತದಾರ ಏನನ್ನುತ್ತಾನೋ ಕಾದುನೋಡಬೇಕು.
ಯಡಿಯೂರಪ್ಪ ಸಹ ಅದನ್ನೇ ಹೇಳಿದ್ದಾರೆ... ನಂಬಿದವರೇ ಕೈ ಕೊಟ್ಟಿದ್ದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಅದಕ್ಕೆ ತಮಗಿಂತ ಅವರೇ ಉತ್ತರ ನೀಡುವುದು ಒಳಿತು. ಏನೇ ಆಗಲಿ ಮೇ 5ರಂದು ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸಮಾಧಾನ ಪಟ್ಟಿದ್ದಾರೆ.
ಯಡಿಯೂರಪ್ಪನವರೇ ಕ್ಷಮಿಸಿ ಬಿಡಿ - ಹೀಗಂತ ಯಡಿಯೂರಪ್ಪನವರ ಹುಡುಗನೊಬ್ಬ ಹೇಳಿದ್ದಾನೆ. ಅವರ ಇನ್ನಷ್ಟು ಮಾತುಗಳನ್ನು ಕೇಳಿಸಿಕೊಳ್ಳಿ. 'ಯಡಿಯೂರಪ್ಪ ನನ್ನ ರಾಜಕೀಯ ಗುರು. ಅವರ ರಾಜಕೀಯ ಅನುಭವವಷ್ಟೂ ನನಗೆ ವಯಸ್ಸಾಗಿಲ್ಲ.
ಅವರು ಕೆಜೆಪಿ ಕಟ್ಟುವಾಗಲೇ ನಾವೆಲ್ಲ ಬಿಜೆಪಿಯಲ್ಲೇ ಇರುತ್ತೇವೆ ಅಂದುಬಿಟ್ಟಿದ್ದರೆ ಆಗ ಏನಾಗುತ್ತಿತ್ತೋ... ಆದರೆ ನಾವು ನಿಮ್ಮ ಜತೆ ಬರುತ್ತೇವೆ ಎಂದು ಮಾತುಕೊಟ್ಟುಬಿಟ್ಟೆವು. ಆದರೆ ಈಗ ... ಏನೆಲ್ಲ ಆಗಿ ಹೋಯಿತು. ಆದರೂ ರಾಜಕೀಯವಾಗಿ ನಾನು ಬಿಜೆಪಿಯಲ್ಲೇ ಇದ್ದರೂ ವ್ಯಕ್ತಿಗತವಾಗಿ ನನ್ನ ಹೃದಯದಲ್ಲಿ ಯಡಿಯೂರಪ್ಪನವರಿಗೆ ಭದ್ರ ಸ್ಥಾನ ಇದ್ದೇ ಇದೆ'.
ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ನಮ್ಮನ್ನು ಬೆಳೆಸಿದ ಯಡಿಯೂರಪ್ಪನವರನ್ನು ನಡುನೀರಿನಲ್ಲಿ ಕೈಬಿಡುತ್ತಿದ್ದೇವೆ. ತಾಯಿ ಸ್ಥಾನದಲ್ಲಿರುವ ಬಿಜೆಪಿಯಲ್ಲಿ ಉಳಿದುಕೊಳ್ಳುವ ನಿರ್ಧಾರವನ್ನು ಅನಿವಾರ್ಯವಾಗಿ ಕೈಗೊಳ್ಳಬೇಕಾಗಿದೆ. ದಯವಿಟ್ಟು ಕ್ಷಮಿಸಿ'
ಬೀಳಗಿ ಅಭ್ಯರ್ಥಿಯ ಈ ತಪ್ಪೊಪ್ಪಿಗೆಯೇ ಎಲ್ಲವನ್ನೂ ಹೇಳುತ್ತಿದೆ, ಅಲ್ವೇ!?
ಹಾಗಂತ ಖಂಡಿತಾ ಇಲ್ಲಿ ಯಡಿಯೂರಪ್ಪ ಬಗ್ಗೆ ಯಾರಿಗೂ soft corner ಇಲ್ಲ. In fact ಯಡಿಯೂರಪ್ಪನವರ ಕಡು ಭ್ರಷ್ಟಾಚಾರದಿಂದ ರೋಸೆದ್ದು, ಯಡ್ಡಿಗೆ ತಕ್ಕ ಶಾಸ್ತಿಯಾಗಲಿ ಅನ್ನುವವರ ಸಂಖ್ಯೆಯೂ ಅಪಾರವಾಗಿದೆ.












Click it and Unblock the Notifications