ಶಾಸಕ ಪಾಟೀಲ್ ಗಂಭೀರ: ಶೆಟ್ಟರ್ ಆಸ್ಪತ್ರೆಗೆ ಭೇಟಿ
ಬೆಂಗಳೂರು, ಮಾ.30: ಹತ್ತು ದಿನಗಳ ಹಿಂದೆ ಗುಂಡೇಟು ತಿಂದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ಸಿಸಿ ಪಾಟೀಲ ಅವರ ದೇಹಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿಯಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಸಿಸಿ ಪಾಟೀಲ ಅವರನ್ನು ಮೆಡಿಕಲ್ ಆಂಬುಲೆನ್ಸ್ ವಿಮಾನದಲ್ಲಿ ಶುಕ್ರವಾರ ಬೆಳಗಾವಿ ಆಸ್ಪತ್ರೆಯಿಂದ ಕರೆತರಲಾಗಿದೆ.
ಸಿಸಿ ಪಾಟೀಲರಿಗೆ ರಕ್ತದೊತ್ತಡ ಹೆಚ್ಚಾಗಿದ್ದು, ಕರುಳು ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್ ಅವರು ಶಾಸಕ, ಸಿಸಿ ಪಾಟೀಲರ ದೇಹಸ್ಥಿತಿ ಮೇಲೆ ನಿಗಾ ಇಟ್ಟಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಸ್ಪತ್ರೆಗೆ ಭೇಟಿ ನೀಡಿ, ಶಾಸಕ ಪಾಟೀಲರ ಆರೋಗ್ಯ ವಿಚಾರಿಸಿದರು.
ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಟೀಲರಿಗೆ ಹೃದಯದಲ್ಲಿ ತೀವ್ರವಾಗಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ಬೆಂಗಳೂರಿಗೆ ಕರೆತಂದು ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಗುಂಡೇಟು ತಗುಲಿರುವುದರಿಂದ ಪಾಟೀಲ ಅವರ ಕರುಳಿಗೆ ಸೋಂಕು ತಗಲಿರುವುದು ಪ್ರಾಥಮಿಕ ಹಂತದ ಪರೀಕ್ಷೆಯಿಂದ ತಿಳಿದುಬಂದಿದೆ.