ಒಂದೇ ಕುಟುಂಬದ 5 ಮಂದಿ ಶಿವನ ಪಾದ ಸೇರಿದರು!
ಜೈಪುರ, ಮಾರ್ಚ್ 29: ಶಿವ ಮೆಚ್ಚದ ಕಾಂಚನ್ ಸಿಂಗ್ (45) ವೃತ್ತಿಪರ ಫೋಟೋಗ್ರಾಫರ್. ಜತೆಗೆ ಆತನಿಗೆ ದೈವಭಕ್ತಿಯೂ ವಿಪರೀತಿ ಎನಿಸುವಷ್ಟು. ಹಾಗಾಗಿಯೇ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎಂದು ತನ್ನ ಮನೆಯನ್ನೇ ಸ್ಮಶಾನವಾಗಿಸಿಕೊಂಡಿದ್ದಾನೆ. ಶಿವನನ್ನು ಒಲಿಸಿಕೊಳ್ಳಲು ಕಾಂಚನ್ ಸ್ವತಃ ತಾನೂ ಸೇರಿದಂತೆ ಕುಟುಂಬದ ಐದೂ ಮಂದಿಯ ಜೀವಗಳನ್ನು ಶಿವಾರ್ಪಣೆ ಮಾಡಿದ್ದಾನೆ.
ಅದೆಲ್ಲಾ 30 ನಿಮಿಷಗಳ ಅವಧಿಯಲ್ಲಿ ಮುಗಿದುಹೋಗಿದೆ. ಆ ಕಾಲದಲ್ಲಿ... ಒಬ್ಬರಿಗೊಬ್ಬರು ಸಂಭ್ರಮದಿಂದ, ಲಘುಬಗೆಯಿಂದ ಮಾತನಾಡುತ್ತಿರುವುದು, ಪೂಜೆ ಪುನಸ್ಕಾರಗಳಲ್ಲಿ ತೊಡಗಿರುವುದು ದಾಖಲಾಗಿದೆ. ಇದೆಲ್ಲಾ ವಿಡಿಯೋದಲ್ಲಿ ದಾಖಲಾಗುವಂತೆ ಫೋಟೋಗ್ರಾಫರ್ ಕಾಂಚನ್ ವ್ಯವಸ್ಥೆ ಮಾಡಿದ್ದ. ಸೋಮವಾರ ರಾತ್ರಿ ಈ ದುರ್ದೈವದ ಘಟನೆ ನಡೆದಿದೆ.

'ಈ ದೇವರ ಯಾತ್ರೆಯ ಇಂಚಿಂಚೂ ಅನುಭವವನ್ನು ಕಾಂಚನ್ ದಾಖಲಾಗಿಸಿದ್ದಾನೆ. ವಿಡಿಯೋ ಕ್ಯಾಮರಾವನ್ನು ಒಂದು ಕಡೆ ತ್ರಿಪಾದದ ಮೇಲೆ ಫಿಕ್ಸ್ ಮಾಡಲಾಗಿತ್ತು. ಮಹಾಶಿವನನ್ನು ಸಾಕ್ಷಾತ್ತಾಗಿ ನೋಡಬೇಕೆಂಬ ಭಕ್ತಿಯಿಂದ ಭಾವಪರವಶರಾದ ಐದೂ ಮಂದಿ ಒಂದೊಮ್ಮೆ ಶಿವ ಕಾಣಿಸದಿದ್ದಲ್ಲಿ ವಿಷ ಕುಡಿದು ಪ್ರಾಣ ಬಿಡುವುದಾಗಿ ಕ್ಯಾಮೆರಾ ಮುಂದೆ ಪ್ರತಿಜ್ಞಾವಿಧಿ ಸ್ವೀಕರಿಸುತ್ತಾರೆ' ಎಂದು ಗಂಗಾಪುರ ನಗರದ ಪೊಲೀಸರು ತಿಳಿಸಿದ್ದಾರೆ.
'ಭಕ್ತಿ ಪರಾಕಾಷ್ಠೆಯ ಕುಟುಂಬಸ್ಥರು ಕ್ಯಾಮರಾ ಮುಂದೆ ವಿಷಮಿಶ್ರಿತ ಲಡ್ಡುಗಳನ್ನು ತಿನ್ನುವುದು ದಾಖಲಾಗಿದೆ. ಅದಾಗುತ್ತಿದ್ದಂತೆ ಎಲ್ಲರೂ ನೀರು ಕುಡಿಯುತ್ತಾರೆ. ಆ ಘಳಿಗೆಯಲ್ಲಿ ವಿಡಿಯೋ ಶೂಟಿಂಗ್ ಸ್ಥಗಿತಗೊಳ್ಳುತ್ತದೆ. ತಾವು ಎಂತಹ ದುಸ್ಸಾಹಸದಲ್ಲಿ ತೊಡಗಿದ್ದೇವೆ ಎಂಬುದು ಬಹುಶಃ ಕಾಂಚನ್ ಗೆ ಆಗ ಅರಿವಾಗಿರಬಹುದು' ಎಂದು ಪೊಲೀಸರು ಹೇಳಿದ್ದಾರೆ.
ಇವರೆಂಥಾ ಮತಿಗೇಡಿಗಳು ಅಂದರೆ ಕಾಂಚನ್ ನ ಸೋದರ ಸಂಬಂಧಿ ರಶ್ಮಿಗೆ ಮುಂದಿನ ತಿಂಗಳು 12ಕ್ಕೆ ಮದುವೆಯಾಗಿತ್ತು. ಅವಳೂ ದೇವರಪಾದ ಸೇರುವುದಕ್ಕೆ ಸಿದ್ಧತೆ ನಡೆಸುತ್ತಾಳೆ. ಅಷ್ಟೇ ಅಲ್ಲ. ತನ್ನ ಮದುವೆ ಸ್ವರ್ಗದಲ್ಲಿ ನಡೆಯಲಿ ಎಂದು ಆಶಿಸುತ್ತಾಳೆ. ಅದೂ ಕ್ಯಾಮರಾದಲ್ಲಿ ದಾಖಲಾಗುತ್ತದೆ. ಆದರೆ ಅರ್ಧದಷ್ಟೇ ಲಾಡು ತಿಂದಿದ್ದ ರಶ್ಮಿ, ಪ್ರಾಣಾಪಾಯದಿಂದ ಪಾರಾಗಿ ಮನೆಯಿಂದ ಹೊರಬಂದು ನೆರೆಮನೆಯವರಿಗೆ ವಿಷಯ ತಿಳಿಸುತ್ತಾಳೆ.
ತಕ್ಷಣ ಪೊಲೀಸರಿಗೂ ಸುದ್ದಿ ತಲುಪುತ್ತದೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನಗಳು ನಡೆಯುತ್ತವೆ. ಆದರೆ ಮಾರ್ಗ ಮಧ್ಯೆ ಐದೂ ಮಂದಿ ಶಿವನ ಪಾದ ಸೇರಿಕೊಳ್ಳುತ್ತಾರೆ ಎಂಬಲ್ಲಿಗೆ ಈ ಸಚಿತ್ರ ಶಿವಪುರಾಣ ಮುಗಿಯುತ್ತದೆ. ಮೃತರಲ್ಲಿ ಮೂವರು ಮಕ್ಕಳು ಇದ್ದಾರೆ.












Click it and Unblock the Notifications