ಚನ್ನಪಟ್ಟಣ: ಹಾರುವ ಹಕ್ಕಿ ಸ್ಪರ್ಧೆಯಿಂದ ಗೆಲುವು ನನ್ನದೇ
ಚನ್ನಪಟ್ಟಣ, ಮಾ. 29: ರಾಮನಗರ ನನ್ನ ತವರು- ಎಂದಿಗೂ ಇಲ್ಲಿ ಸೋಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಭಾವುಕರಾಗಿ ಹೇಳಿರುವ ಸಂದರ್ಭದಲ್ಲೇ ರಾಮನಗರ ಪಕ್ಕದ ಚನ್ನಪಟ್ಟಣದಲ್ಲಿ ಮಾಜಿ ಬಿಜೆಪಿ ಸಚಿವ ಮತ್ತು ಹಾಲಿ ಕಾಂಗ್ರೆಸ್ ಅಭ್ಯರ್ಥಿ (?) ಸಿಪಿ ಯೋಗೀಶ್ವರ್ ಅವರು ಜೆಡಿಎಸ್ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿಯಿಂದಾಗಿ (ಅನಿತಾ ಕುಮಾರಸ್ವಾಮಿ) ನನಗೆ ಗೆಲುವಿನ ಹಾದಿ ಸುಗಮವಾಗಿದೆ ಎಂದು ಯೋಗೀಶ್ವರ್ ಹೇಳಿದ್ದಾರೆ.

ಕಳೆದ ಉಪಚುನಾವಣೆಯಲ್ಲಿ ಸಿಂ.ಲಿಂ. ನಾಗರಾಜು ಸ್ಪರ್ಧಿಸಿದ್ದಾಗ ನಿಜಕ್ಕೂ ನನಗೆ ಆತಂಕವಾಗಿತ್ತು. ಆದರೆ ಈ ಬಾರಿ ಮಧುಗಿರಿಯಿಂದ ಚನ್ನಪಟ್ಟಣಕ್ಕೆ ಹಾರಿ ಬಂದಿರುವ ಹಕ್ಕಿಯಿಂದಾಗಿ ನನಗಿದ್ದ ಆ ಆತಂಕ ದೂರವಾಗಿದೆ ಎಂದು ಅನಿತಾ ಕುಮಾರಸ್ವಾಮಿ ಸ್ಪರ್ಧೆಯ ಬಗ್ಗೆ ಯೋಗೀಶ್ವರ್ ಲೇವಡಿಯಾಡಿದ್ದಾರೆ.
ತಾಲೂಕಿನ ಮುದುಗೆರೆ ಗ್ರಾಮದಲ್ಲಿ ಅನೇಕ ಜೆಡಿಎಸ್ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಯೋಗೀಶ್ವರ್, ತಾಲೂಕಿನ ಜನತೆ ಹೊರಗಿನ ಅಭ್ಯರ್ಥಿಯನ್ನು (ಅನಿತಾ ಕುಮಾರಸ್ವಾಮಿ) ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ಹೇಳಿದರು.
ಹಾರುವ ಹಕ್ಕಿ ಯಾರು?: ಅನಿತಾ ಕುಮಾರಸ್ವಾಮಿ ನನ್ನನ್ನು ಹಾರುವ ಹಕ್ಕಿ ಎಂದು ಆರೋಪಿಸುತ್ತಿದ್ದಾರೆ. ಆದರೆ ಹಾರುವ ಹಕ್ಕಿ ನಾನಲ್ಲ. ಮಧುಗಿರಿಯಿಂದ ಚನ್ನಪಟ್ಟಣಕ್ಕೆ ಹಾರಿರುವ ಹಕ್ಕಿ ಯಾರು ಎಂಬುದು ತಾಲೂಕಿನ ಜನತೆಗೆ ಸ್ಪಷ್ಟವಾಗಿ ತಿಳಿದಿದ್ದು ಮುಂದಿನ ಚುನಾವಣೆಯಲ್ಲಿ ಈ ಸಂಗತಿ ಸ್ಪಷ್ಟವಾಗಲಿದೆ ಎಂದರು.
ಹತ್ತಾರು ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿರುವ ಜೆಡಿಎಸ್ನವರು ತಾಲೂಕಿಗೆ ನೀಡಿರುವ ಕೊಡುಗೆ ಏನು, ಇವರ ಮಾತನ್ನು ನಂಬುವ ಸ್ಥಿತಿಯಲ್ಲಿ ತಾಲೂಕಿನ ಜನತೆ ಇಲ್ಲ. ನೀರಾವರಿಗಾಗಿ ಹೋರಾಟ ನಡೆಸುತ್ತಿರುವ ನನ್ನನ್ನು ತಾಲೂಕಿನ ಜನತೆ ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಎಂದು ಯೋಗೀಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ನನಗೇ ಟಿಕೆಟ್; ಡಿಕೆಶಿ ಬೆಂಬಲವೂ ದಕ್ಕಿದೆ: ನನಗೇ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಭರವಸೆ ನೀಡಿದ್ದು, ಚುನಾವಣೆಗೆ ಸಿದ್ಧಗೊಳ್ಳುವಂತೆ ಸೂಚಿಸಿದೆ. ಹೈಕಮಾಂಡ್ ಸೂಚನೆಯಂತೆ ತಾಲೂಕಿನಾದ್ಯಂತ ಪ್ರಚಾರ ಕಾರ್ಯ ಕೈಗೊಂಡಿದ್ದೇನೆ ಎಂದರು.
ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮುನಿಯಪ್ಪ, ಮಾಜಿ ಸಿಎಂ ಧರಂ ಸಿಂಗ್ ಹಾಗೂ ಆಸ್ಕರ್ ಫರ್ನಾಂಡಿಸ್ ನನ್ನ ಬೆನ್ನಿಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನನಗೆ ಅಭಯ ನೀಡಿದ್ದು ಮಾಜಿ ಸಚಿವ ಡಿಕೆ ಶಿವಕುಮಾರ್ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದರು.












Click it and Unblock the Notifications