ಬಿಎಸ್ ಪಿ ಶ್ರೀಮಂತ ಮುಖಂಡ ಗುಂಡಿಗೆ ಬಲಿ
ದುಷ್ಕರ್ಮಿಗಳ ದಾಳಿಯಲ್ಲಿ ಫಾರ್ಮ್ಹೌಸ್ನ ಮಾಲೀಕ ಹಾಗೂ ಬಿಎಸ್ಪಿ ಮುಖಂಡ 62 ವರ್ಷ ವಯಸ್ಸಿನ ದೀಪಕ್ ಭಾರದ್ವಾಜ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 2009 ಲೋಕಸಭೆ ಚುನಾವಣೆಯ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದ ದೀಪಕ್ ಭಾರದ್ವಾಜ್ ಅವರು ಮಂಗಳವಾರ(ಮಾ.26) ಬೆಳಗ್ಗೆ ಭೀಕರವಾಗಿ ಹತ್ಯೆಗೀಡಾಗಿದ್ದಾರೆ.
ದಕ್ಷಿಣ ದೆಹಲಿಯ ರಜೌಕರಿ ಬಳಿ ಇರುವ ಫಾರ್ಮ್ಗೆ ಬೆಳಗ್ಗೆ ಸುಮಾರು 9.15ರ ಸುಮಾರಿಗೆ ಕಪ್ಪು ಬಣ್ಣದ ಸ್ಕೋಡಾ ಕಾರಿನಲ್ಲಿ ಮೂವರು ಆಗಮಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು, ಮಾಲೀಕ ದೀಪಕ್ ಮೇಲೆ ಎರ್ರಾಬಿರ್ರಿ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ದೀಪಕ್ ಅವರು ಗುಂಡು ಹಾರಿಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸುಮಾರು 600 ಕೋಟಿ ರುಪಾಯಿ ಆಸ್ತಿ ಹೊಂದಿರುವ ದೀಪಕ್ ಅವರ ಹತ್ಯೆಗೆ ಹಣಕಾಸಿನ ವ್ಯವಹಾರವೇ ಕಾರಣ ಎಂದು ಹೇಳಲಾಗುತ್ತಿದೆ. ದೀಪಕ್ ಅವರು 2009ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ರಾಜಕಾರಣವಲ್ಲದೆ, ಹೋಟೆಲ್, ಶಿಕ್ಷಣ ಸಂಸ್ಥೆ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ದೀಪಕ್ ಅವರು ಹೆಸರುವಾಸಿಯಾಗಿದ್ದರು.
ಎರಡನೇ ಶೂಟೌಟ್: ಪೂರ್ವ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಶೂಟೌಟ್ ನಡೆದಿದ್ದು ಇಬ್ಬರಿಗೆ ತೀವ್ರವಾದ ಗಾಯಗಳಾಗಿದೆ. ಎಸ್ಕಲೇಟರ್ ಮೇಲಿಂದ ಬರುತ್ತಿದ್ದವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಅಪರಿಚಿತರು ಪರಾರಿಯಾಗಿದ್ದಾರೆ.
2012 ಅಬಕಾರಿ ಗುತ್ತಿಗೆದಾರ ಉದ್ಯಮಿ ಪಾಂಟಿ ಛಡ್ಡಾ ಹಾಗೂ ಅವರ ಸೋದರ ಹರ್ದೀಪ್ ಛಡ್ಡಾ ಮೇಲೆ ಇದೇ ರೀತಿ ಫಾರ್ಮ್ ಹೌಸ್ ನಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು.