ಮೇ 5ರ ಯುದ್ಧದಲ್ಲಿ ಶ್ರೀರಾಮುಲು ಏಕಾಂಗಿ ಹೋರಾಟ
ಇದೇ ವೇಳೆ ಮೊನ್ನೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಮೇಲಿಂದ ಮೇಲೆ ಭೇಟಿ ಮಾಡಿದ್ದು ರಾಜಕೀಯ ಉದ್ದೇಶದಿಂದ ಅಲ್ಲ ಸ್ಪಷ್ಟಪಡಿಸಿರುವ ಬಳ್ಳಾರಿ ಗ್ರಾಮಾಂತರದ ಸ್ವತಂತ್ರ ಶಾಸಕರೂ ಆದ ಬಿ ಶ್ರೀರಾಮುಲು ಅವರು ಬಿಜೆಪಿಗೆ ಮತ್ತೆ ಮರಳುವ ಪ್ರಶ್ನೆಯೇ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜತೆ ಕೈಜೋಡಿಸುವ ಪ್ರಮೇಯವೇ ತಮಗಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಹೊಂದಾಣಿಕೆ ಮಾತೇ ಇಲ್ಲ: ಕೆಲ ಪಟ್ಟಭದ್ರ ಶಕ್ತಿಗಳು BSR Congress ಪಕ್ಷದ ಬೆಳವಣಿಗೆಯನ್ನು ಸಹಿಸದೆ ಸುಳ್ಳು ಸುದ್ದಿಗಳನ್ನು ಹರಿಯಬಿಡುತ್ತಿವೆ. ಆದರೆ ಯಾವುದೇ ಕಾರಣಕ್ಕೂ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ರಾಮುಲು ಸ್ಪಷ್ಟನೆ ನೀಡಿದ್ದಾರೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ತಾನು ಭೇಟಿ ಮಾಡಿದ್ದು ಸತ್ಯ. ಆದರೆ, ಪಕ್ಷ ವಿಲೀನ ಹಾಗೂ ಬಿಜೆಪಿಯೊಂದಿಗೆ ಹೊಂದಾಣಿಕೆ ಸಂಬಂಧ ಮಾತುಕತೆ ನಡೆಸಿಲ್ಲ. ಬೇರಾವುದೇ ರಾಜಕೀಯ ಸಮಾಲೋಚನೆಯೂ ನಡೆಯಲಿಲ್ಲ. ಬದಲಿಗೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಸಂಬಂಧ ಭೇಟಿ ಮಾಡಿದ್ದೆ ಎಂದು ಶ್ರೀರಾಮುಲು ವಿವರಣೆ ನೀಡಿದ್ದಾರೆ.
ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಹಾಗೂ ತನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಗ್ಗಟ್ಟಿನಿಂದಲೇ ಇದ್ದೇವೆ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಕ್ಷಿತಾ, ಪೂಜಾ ಗಾಂಧಿ ಸ್ಪರ್ಧೆ ಖಚಿತ: ಚಿತ್ರ ನಟಿಯರಾದ ರಕ್ಷಿತಾ ಪ್ರೇಮ್ ಮತ್ತು ಪೂಜಾ ಗಾಂಧಿ ಈ ಬಾರಿಯ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದು, ಕ್ಷೇತ್ರಗಳ ಆಯ್ಕೆಯನ್ನು ನಿಗದಿಪಡಿಸಿಲ್ಲ. ಶೀಘ್ರದಲ್ಲಿಯೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ರವೀಂದ್ರ ರೇಷ್ಮೆ, ಖಾಲಿದ್ ಅಹ್ಮದ್, ಬಿ ಶಿವಪ್ಪ ಅವರ ತಂಡ ಸಿದ್ದಪಡಿಸುತ್ತಿದೆ. ಶೀಘ್ರದಲ್ಲಿಯೇ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ರಾಜ್ಯಾದ್ಯಂತ 27 ಪ್ರಚಾರ ರಥಗಳ ಮೂಲಕ ಚುನಾವಣಾ ಪ್ರಚಾರ ಮಾಡಲಾಗುವುದು ಎಂದರು.