ಬಿಜೆಪಿ-ಕೆಜೆಪಿ ನಾಳೆ ಅಂತಿಮ ಸಭೆ ಸಾಧ್ಯತೆ

ಗುರುವಾರ ಅರಮನೆ ಮೈದಾನದಲ್ಲಿ ಕೆಜೆಪಿ ಸಮಾವೇಶ ನಡೆಸುತ್ತಿರುವ ಯಡಿಯೂರಪ್ಪ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ಸಂಸದ ಪ್ರಭಾಕರ ಕೋರೆ ಅವರಿಗೆ ನಾಳೆ ಬೆಂಗಳೂರಿನಲ್ಲಿ ಸಭೆ ಸೇರಿ ಶಾಸಕರು ಮತ್ತು ಸಚಿವರ ಅಭಿಪ್ರಾಯ ಸಂಗ್ರಹಿಸಿ ಕೆಜೆಪಿ ಸೇರುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ, ಸಚಿವರಾದ ಬಸವರಾಜ ಮೊಮ್ಮಾಯಿ, ಉಮೇಶ್ ಕತ್ತಿ, ರೇವೂ ನಾಯಕ್ ಬೆಳಮಗಿ, ಶಾಸಕರಾದ ಚಂದ್ರಕಾಂತ ಬೆಲ್ಲದ್, ಸಿ.ಸಿ.ಪಾಟೀಲ್, ವಿಶ್ವನಾಥ್, ಲಕ್ಷಣ್ ಸವದಿ, ರಾಮಣ್ಣ ಲಾಮಣಿ, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರ ಮುಂತಾದವರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಮತದಾರರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೆಜೆಪಿಗೆ ಸೂಕ್ತ ಬೆಂಬಲ ನೀಡಿರುವುದರಿಂದ ಯಡಿಯೂರಪ್ಪ, ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಲು ಇದೇ ಸರಿಯಾದ ಸಮಯವೆಂದು ಬೆಂಬಲಿಗರಿಗೆ ಪಕ್ಷಕ್ಕೆ ಬರುವಂತೆ ಸೂಚಿಸಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕೆಜೆಪಿ ಸಮಾವೇಶದಲ್ಲಿ ಪಕ್ಷ ಸಂಘಟನೆಗೆ ಪ್ರತಿ ಕ್ಷೇತ್ರಕ್ಕೆ ತೆರಳುವ ನಾಯಕರ ಅಂತಿಮ ಪಟ್ಟಿ ತಯಾರಾಗುವ ಸಾಧ್ಯತೆ ಇದೆ.
ಯಡಿಯೂರಪ್ಪ ಅವರ ಕೆಲವು ಬೆಂಬಲಿಗರು ವಿಧಾನಸಭೆ ಚುನಾವಣೆ ಘೋಷಣೆಯಾದ ತಕ್ಷಣ ಬಿಜೆಪಿ ಬಿಟ್ಟು ಕೆಜೆಪಿ ಸೇರುವುದಾಗಿ ಭರವಸೆ ನೀಡಿದ್ದರು. ಆದರೆ, ರಾಜ್ಯಾದ್ಯಂತ ಮಾ.19ರಿಂದ 23 ರವರೆಗೆ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ರಾಜ್ಯ ಹಮ್ಮಿಕೊಂಡಿರುವ ಯಡಿಯೂರಪ್ಪ ಹೆಚ್ಚಿನ ನಾಯಕರನ್ನು ಜೊತೆಗೆ ಸೇರಿಸಿಕೊಂಡರೆ ಜನ ಬೆಂಬ ದೊರೆಯುತ್ತದೆ ಎಂಬ ಕಾರಣಕ್ಕೆ ಬೆಂಬಲಿಗರಿಗೆ ತಕ್ಷಣ ಪಕ್ಷ ಸೇರುವಂತೆ ಹೇಳಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಸೇರುವ ವಲಸಿಗರಿಗೆ ನಿರಾಸೆ ಉಂಟಾಗಿದ್ದು, ಪಕ್ಷ ಸೇರಿಕೊಂಡರೂ ವಿಧಾನಸಭೆ ಚುನಾವಣೆಗೆ ಟಿಕೆಟ್ ದೊರೆಯುವುದು ಖಚಿತವಾಗಿಲ್ಲ. ಆದ್ದರಿಂದ ಕಾಂಗ್ರೆಸ್ ಗೆ ವಲಸೆ ಹೋಗುವವರ ಸಂಖ್ಯೆ ಕಡಿಮೆ ಆದರೂ, ಕೆಜೆಪಿಗೆ ಸುಮಾರು ಹತ್ತು ಮಂದಿ ಸೇರುವ ಸಾಧ್ಯತೆ ಇದ್ದು ಇದರಿಂದ ಬಿಜೆಪಿ ನಾಯಕರು ಆತಂಕಗೊಂಡಿದ್ದಾರೆ.
ಬಿಜೆಪಿ ತೊರೆಯುವುದಿಲ್ಲ ಬಚ್ಚೇಗೌಡ : "ನಾನು ಬಿಜೆಪಿಯಲ್ಲಿಯೇ ಇದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ" ಎಂದು ಕಾರ್ಮಿಕ ಸಚಿವ ಬಚ್ಚೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತೊರೆಯುವ ವಲಸಿಗರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಪಕ್ಷ ತೊರೆಯುವ ಶಾಸಕರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ. ಬಿಜೆಪಿ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications