ಮಂಡ್ಯ :ವಿದೇಶದಿಂದ ಬಂದ್ರು ಚುನಾವಣೆಯಲ್ಲಿ ಸೋತ್ರು

ಸಕ್ಕರೆ ನಾಡು ಮಂಡ್ಯ ಕನ್ನಡದ ರೆಬಲ್ ಸ್ಟಾರ್, ಕಾಂಗ್ರೆಸ್ ಮುಖಂಡ ಅಂಬರೀಷ್ ಅವರ ತವರೂರು. ಮಾ.7ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಬಲದ ಹೋರಾಟ ನಡೆಸಿವೆ. ಪಕ್ಷಗಳ ಬಲಾಬಲ ಸೋಮವಾರ ನಡೆದ ಮತ ಎಣಿಕೆ ಸಮಯದಲ್ಲಿ ಬಹಿರಂಗವಾಗಿದೆ. ಮಂಡ್ಯ ನಗರ ಸಭೆಗೆ ನಡೆದ ಚುನಾವಣೆಯಲ್ಲಿ ಕೆಲವು ಸ್ವಾರಸ್ಯಕರ ಸಂಗತಿಗಳಿವೆ ಅವುಗಳ ಬಗ್ಗೆ ಒಂದಷ್ಟು ತಿಳಿಯೋಣ ಬನ್ನಿ...
ಗೆಲುವು ಕನಸಾಯಿತು : ಸಾಮಾಜಿಕ ಬದಲಾವಣೆ ಮಾಡುತ್ತೇನೆ ಎಂದು ವಿದೇಶದಲ್ಲಿದ್ದ ನೌಕರಿ ಬಿಟ್ಟು ಮಂಡ್ಯ ನಗರ ಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಡಾ.ಎಂ.ಕೆ.ಸಚ್ಚಿದಾನಂದ ಪರಾಭವಗೊಂಡಿದ್ದಾರೆ.
ರಸಾಯನಶಾಸ್ತ್ರ ವಿಷಯದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದ ಸಚ್ಚಿದಾನಂದ ಅವರು, ಅಮೆರಿಕಾದ ಲೂಸಿಯಾನ ನ್ಯೂ ಆರ್ಲೈನ್ಸ್ನಲ್ಲಿ ಪೋಸ್ಟ್ ಡಾಕ್ಟರಾಲ್ ಫೆಲೋಷಿಪ್(ಪಿಡಿಎಫ್) ಪಡೆದಿದ್ದರು. 2006ರಿಂದ ಲೂಸಿಯಾನದ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕೆಲಸ ನಿರ್ವಹಿಸುತ್ತಾ, ಮಾಸಿಕ 3800 ಡಾಲರ್ ಸಂಬಳ ಪಡೆಯುತ್ತಿದ್ದರು.
ತವರಿಗೆ ಮರಳಿದ್ದ ಅವರು ಇಲ್ಲಿನ ಅವ್ಯವಸ್ಥೆ ಕಂಡು ಬೇಸರಪಟ್ಟಿದ್ದರು. ಇಲ್ಲಿನ ವ್ಯವಸ್ಥೆ ಸುಧಾರಿಸುತ್ತೇನೆ ಎಂದು ಮಂಡ್ಯ ನಗರ ಸಭೆಯ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಕೇವಲ 107 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.
ಗನ್ ಮ್ಯಾನ್ ಪತ್ನಿ ಈಗ ರಾಜಕಾರಣಿ : ರಾಜಕಾರಣಿಯೊಬ್ಬರ ಗನ್ ಮ್ಯಾನ್ ಪತ್ನಿ ಮಂಡ್ಯ ನಗರ ಸಭೆಯ ಚುನಾವಣೆಗೆ ಸ್ಪರ್ಧಿಸಿ ರಾಜಕಾರಣಿಯಾಗಿ ಬದಲಾಗಿದ್ದಾರೆ. ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಅವರ ಗನ್ಮ್ಯಾನ್(ಪೊಲೀಸ್ ಪೇದೆ) ಚನ್ನಪ್ಪ ಅವರ ಪತ್ನಿ ಎ.ಜಿ.ಕೆ.ಮಧುಶ್ರೀ ಈಗ ಕಾರ್ಪೊರೇಟರ್.
ಚನ್ನಪ್ಪ ತಮ್ಮ ಪ್ರಭಾವ ಬಳಸಿ ಪತ್ನಿಗೆ ಜೆಡಿಎಸ್ ಟಿಕೆಟ್ ಕೊಡಿಸಿದ್ದರು. ಮತದಾರರು ಆಕೆಗೆ ಬೆಂಬಲ ನೀಡಿದ್ದು, ಮಂಡ್ಯ ನಗರಸಭೆಯ 9ನೇ ವಾರ್ಡ್ನಿಂದ ಗೆಲುವು ಸಾಧಿಸಿದ್ದಾರೆ. ಮಧುಶ್ರೀ 476 ಮತಗಳನ್ನು ಪಡೆದು ರಾಜಕಾರಣಿಯಾಗಿ ಬದಲಾಗಿದ್ದಾರೆ.
ಇವರಿಗೆ ಕೇವಲ ಒಂದು ಮತ : ಮಂಡ್ಯದಲ್ಲಿ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೈಯದ್ ಅಮೀರ್ ಮಲ್ಲಿಕ್ ಮತ್ತು ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಿ.ಟಿ.ರಾಜು ಕೇವಲ ಒಂದು ಮತಗಳನ್ನು ಪಡೆದಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications