ಬಿಜೆಪಿ : ನೂತನ ಸಾರಥಿಗೆ ನೂರೆಂಟು ಸವಾಲು

ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮತ್ತು ರಾಷ್ಟ್ರೀಯ ನಾಯಕ ಅರುಣ್ ಜೇಟ್ಲಿ ಶುಕ್ರವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಪಕ್ಷದ ಕಚೇರಿಯಲ್ಲಿ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ನೂತನ ಅಧ್ಯಕ್ಷರು ಆಯ್ಕೆಯಾಗುವ ಸಂಭವಿದೆ.
ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಅಧ್ಯಕ್ಷರ ಬದಲಾವಣೆ ಮಾಡಲು ಹೊರಟಿರುವ ಬಿಜೆಪಿಗೆ ಅಧ್ಯಕ್ಷರ ಆಯ್ಕೆ ದೊಡ್ಡ ಸವಾಲಾಗಿದೆ. ನೂತನ ಅಧ್ಯಕ್ಷರು ಆಯ್ಕೆಯಾದ ನಂತರವೂ ಅವರ ಹಾದಿ ಅಷ್ಟೊಂದು ಸುಲಭವಾಗಿಲ್ಲ. ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಮಹತ್ತರ ಜವಾಬ್ದಾರಿಗಳು ಅವರ ಹೆಗಲೇರಲಿವೆ.
ಭ್ರಷ್ಟಾಚಾರ, ಸಜ್ಜನ ಪಕ್ಷಪಾತ, ಒಳಜಗಳ ಮುಂತಾದ ಕಾರಣಗಳಿಂದಾಗಿ ರಾಜ್ಯದಲ್ಲಿ ಬಿಜೆಪಿ ವರ್ಚಸ್ಸು ಕಳೆದುಕೊಂಡಿದೆ. ಚುನಾವಣೆ ಎದುರಾಗಿರುವುದರಿಂದ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ, ಚುನಾವಣೆ ಗೆಲ್ಲಬೇಕಾದ ಸವಾಲು ನೂತನ ಅಧ್ಯಕ್ಷರ ಮೇಲಿದೆ.
ಪಕ್ಷದ ಶಾಸಕರು ರಾಜೀನಾಮೆ ನೀಡುತ್ತಿರುವುದರಿಂದ ಟಿಕೆಟ್ ಹಂಚಿಕೆ ಪಕ್ಷದ ಅಧ್ಯಕ್ಷಗೆ ದೊಡ್ಡ ಸಮಸ್ಯೆಯಾಗಿ ಕಾಡಬಹುದಾಗಿದೆ. ಈಗಾಗಲೇ ಹಾಲಿ 14 ಶಾಸಕರು ರಾಜೀನಾಮೆ ನೀಡಿದ್ದು, ಅವರ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಟಿಕೆಟ್ ನೀಡುವುದು ಕಠಿಣವಾದ ಕೆಲಸವಾಗಲಿದೆ.
ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷ ಕಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭಯ ಬಿಜೆಪಿಯ ನಾಯಕರಿಗೆ ಇದೆ. ಕೆಜೆಪಿ ಪ್ರತಿಸ್ಪರ್ಧಿಯಾಗಲಾರದು ಎಂದು ನಾಯಕರು ಹೇಳಿಕೆ ನೀಡುತ್ತಿದ್ದರೂ, ಯಡಿಯೂರಪ್ಪ ಹೊರತಾಗಿ ಮೊದಲ ಚುನಾವಣೆ ಎದುರಿಸುತ್ತಿರುವ ಬಿಜೆಪಿಗೆ ಆತಂಕವಂತೂ ಇದೆ.
ಇನ್ನು ಪಕ್ಷದ ಒಳ ಜಗಳ, ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ, ಪಕ್ಷಾಂತರ ಮಾಡಲಿರುವ ಶಾಸಕರು ಮುಂತಾದ ಬೆಳವಣಿಗೆಗಳ ನಡುವೆ ಕಾರ್ಯಕರ್ತರನ್ನು ವಿಶ್ಚಾಸಕ್ಕೆ ತೆಗದುಕೊಂಡು ಸಮರ್ಥವಾಗಿ ಪಕ್ಷವನ್ನು ಮುನ್ನೆಡೆಸುವ ನಾವಿಕನ ಅಗತ್ಯವಿದೆ.
ಪಕ್ಷದ ಅಧ್ಯಕ್ಷ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮತ್ತೊಮ್ಮೆ ಪಕ್ಷದ ಚುಕ್ಕಾಣಿ ನೀಡಲು ವರಿಷ್ಠರು ಸಮ್ಮತಿ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆದರೆ, ಉಪ ಮುಖ್ಯಮಂತ್ರಿ ಆರ್.ಅಶೋಕ್, ಸಂಸದರಾದ ಪ್ರಹ್ಲಾದ್ ಜೋಷಿ, ನಳೀನ್ ಕುಮಾರ್ ಕಟೀಲ್, ಸಚಿವ ಗೋವಿಂದ ಕಾರಜೋಳ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಇನ್ನೊಂದಡೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಬಿಜೆಪಿಗೆ ನೂತನ ಸಾರಥಿ ತಮ್ಮ ಹಿಡಿತದಲ್ಲಿ ಇರಬೇಕು ಎಂದು ತಂತ್ರ ರೂಪಿಸುತ್ತಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಮೀರಿ ಯಾರು ಸಾರಥಿಯಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications