ಕೆಜೆಪಿ ಕಿಂಗ್ ಮೇಕರ್ ಆಗೋಲ್ಲ-ಸಿವೋಟರ್ ಸಮೀಕ್ಷೆ
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಸಿ ವೋಟರ್ ಪ್ರತಿ ತಿಂಗಳು ರಾಜ್ಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸೋಲು-ಗೆಲವುವಿನ ಕುರಿತು ಸಮೀಕ್ಷೆ ನಡೆಸುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ನಡೆದ ಸಮೀಕ್ಷೆ ಪ್ರಕಾರ ಕೆಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೇವಲ 4 ರಿಂದ 8 ಸ್ಥಾನಗಳನ್ನು ಮಾತ್ರ ಪಡೆಯಲಿದೆ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಬೆಂಬಲವಿಲ್ಲ ಎಂಬ ಅಂಶದ ಆಧಾರದ ಮೇಲೆಯೇ, ರಾಜ್ಯದ ವಿವಿಧ ಭಾಗದ ಜನರನ್ನು ಕೆಜೆಪಿ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಸಮೀಕ್ಷೆ ನಡೆಸಲಾಗಿದೆ. ಪ್ರಶ್ನೆಗಳು ಕೆಳಗಿನಂತಿವೆ.
ಕೆಜೆಪಿಗೆ ಭವಿಷ್ಯವಿದೆಯೇ? ರಾಜ್ಯದ ಶೇ 64 ರಷ್ಟು ಜನರು ಕೆಜೆಪಿಗೆ ಧೀರ್ಘವಾದ ಭವಿಷ್ಯವಿಲ್ಲ ಎಂದು ಮತ ನೀಡಿದ್ದಾರೆ. ಆದರೆ, ಶೇ 21ರಷ್ಟು ಜನರು ಮಾತ್ರ ಕೆಜೆಪಿಗೆ ಭವಿಷ್ಯವಿದೆ ಎಂದಿದ್ದಾರೆ. ಉಳಿದ ಶೇ 14.8ರಷ್ಟು ಜನರು ನಮಗೆ ಈ ಬಗ್ಗೆ ಏನು ತಿಳಿದಿಲ್ಲ ಎಂದು ಮತ ನೀಡಿದ್ದಾರೆ.
ಕೆಜೆಪಿಗೆ ಯಡಿಯೂರಪ್ಪ ಹೊರತಾಗಿ ಉಳಿಗಾಲವಿದೆಯೇ? ಎಂಬ ಪ್ರಶ್ನೆ ಮುಂದಿಟ್ಟಾಗ, ಶೇ 66.9ರಷ್ಟು ಜನರು ಇಲ್ಲಾ ಎಂದು ಅಭಿಪ್ರಾಯ ನೀಡಿದ್ದಾರೆ. ಯಡಿಯೂರಪ್ಪ ಅವರ ಹೊರತಾಗಿಯೂ ಕೆಜೆಪಿ ಭದ್ರವಾಗಿರಲಿದೆ ಎಂದು ಶೇ14.6ರಷ್ಟು ಜನರು ಮತ ನೀಡಿದ್ದಾರೆ. ಶೇ 18.5 ಜನರು ಈ ಬಗ್ಗೆ ತಿಳಿದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮುಂದಿನ ವಿಧಾನಸಭೆ ಚುಣಾವಣೆಯಲ್ಲಿ ಕೆಜೆಪಿ 20 ಸ್ಥಾನ ಗಳಿಸದಿದ್ದರೆ ಅಸ್ತಿತ್ವ ಕಳೆದುಕೊಳ್ಳಲಿದೆಯೇ? ಎಂದು ಜನರನ್ನು ಪ್ರಶ್ನಿಸಿದಾಗ ಶೇ 72.8 ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಮತ ನೀಡಿದ್ದಾರೆ. ಕೇವಲ ಶೇ 12.8ರಷ್ಟು ಜನರು ಮಾತ್ರ ಪಕ್ಷಕ್ಕೆ ಚುನಾವಣಾ ಫಲಿತಾಂಶದಿಂದ ಧಕ್ಕೆ ಆಗುವುದಿಲ್ಲ ಎಂದಿದ್ದಾರೆ. ಶೇ 14.8 ರಷ್ಟು ಜನರು ಈ ಬಗ್ಗೆ ತಿಳಿದಿಲ್ಲ ಎಂದು ಉತ್ತರಿಸಿದ್ದಾರೆ.
ಫೆಬ್ರವರಿ ತಿಂಗಳ ಸಮೀಕ್ಷೆಗಳನ್ನು ನೋಡಿದರೆ ಕೆಜೆಪಿಗೆ ರಾಜ್ಯದಲ್ಲಿ ಭವಿಷ್ಯವಿಲ್ಲ, ಕೆಜೆಪಿ ಕಿಂಗ್ ಮೇಕರ್ ಆಗುವುದಿಲ್ಲ ಎಂದು ಹೇಳಬಹುದು. ಆದರೆ, ಅಂತಿಮ ತೀರ್ಮಾನ ಮತದಾರ ಪ್ರಭುವಿನ ಮೇಲೆ ನಿಂತಿದೆ. ಅವರ ತೀರ್ಪು ಏನೆಂದು ತಿಳಿಯಲು ಚುನಾವಣೆ ನಡೆಯುವರೆಗೂ ಕಾಯಬೇಕಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ