ದೇವ್ರಾಣೆ, ನಾನು ಯಡಿಯೂರಪ್ಪರನ್ನು ಜೈಲಿಗೆ ಕಳಿಸಲಿಲ್ಲ
ಯಡಿಯೂರಪ್ಪನವರು ತಪ್ಪು ಮಾಡುತ್ತಿದ್ದಾಗ ಎಚ್ಚರಿಸಿದ್ದು ನಿಜ. ಆದರೆ ಅದನ್ನು ಅವರು ತಿದ್ದಿಕೊಳ್ಳಲಿಲ್ಲ. ಸ್ವಯಂಕೃತ ಅಪರಾಧದಿಂದಾಗಿ ಜೈಲುಪಾಲಾದರು. ಇದರಲ್ಲಿ ಯಾವುದೇ ಬಿಜೆಪಿ ನಾಯಕರ ಕೈವಾಡ ಇರಲಿಲ್ಲ ಎಂದರು.
ಬಿಜೆಪಿ ಪಕ್ಷ ಯಾವುದೇ ವ್ಯಕ್ತಿಯ ಆಧಾರದ ಮೇಲೆ ನಿಂತಿಲ್ಲ. ಬದಲಾಗಿ ಕಾರ್ಯಕರ್ತರ ಶ್ರಮ, ತ್ಯಾಗ ಹಾಗೂ ಸಿದ್ಧಾಂತದ ಆಧಾರದ ಹಿನ್ನಲೆಯಲ್ಲಿ ಪಕ್ಷ ಕಾರ್ಯ ನಿರ್ವಹಿಸುತ್ತಿದೆ. ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿರುವುದನ್ನು ನೋಡಿದರೆ, ಪಕ್ಷದ ಕಾರ್ಯಕರ್ತರು ಇನ್ನು ಗಟ್ಟಿಯಾಗಿ ಪಕ್ಷದಲ್ಲಿ ಇದ್ದಾರೆ ಎಂಬುದು ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಹೆಚ್ಚಿನ ಸಂಘಟನೆಗೆ ಒತ್ತು ನೀಡಲಾಗುವುದು. ಪ್ರತಿ ಗ್ರಾಮಗಳಿಗೂ ಭೇಟಿ ನೀಡುತ್ತೇನೆ ಎಂದು ಈಶ್ವರಪ್ಪ ಭರವಸೆ ನೀಡಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿ ಉತ್ತಮ ಆಡಳಿತ ನೀಡಲಿದ್ದಾರೆ. ದೇಶದ ಜನ ನೆಮ್ಮದಿಯಿಂದ ಬಾಳುವಂಥ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
ಶಿಕಾರಿಪುರ ಹಾಗೂ ಶಿವಮೊಗ್ಗ ಜಿಲ್ಲೆಗೆ ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ. ಯಡಿಯೂರಪ್ಪ ಅವರ ಕಾಲದಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳು ಕಾರ್ಯಗತವಾಗಿದೆ ಎನ್ನುವುದು ತಪ್ಪಾಗುತ್ತದೆ. ಆಶ್ರಮ ಯೋಜನೆ ಫಲಾನುಭವಿಗಳಿಗೆ ಮನೆ ವಿತರಣೆ ವಿಳಂಬವಾಗಿದ್ದು ನಿಜ ಆದರೆ, ಬಡವರಿಗೆ ಬಿಜೆಪಿ ಸರ್ಕಾರ ಎಂದಿಗೂ ಅನ್ಯಾಯ ಮಾಡಿಲ್ಲ. ಶಿವಮೊಗ್ಗ ನಗರವನ್ನು ಬಿಜೆಪಿ ಎಂದೂ ಕಡೆಗಣಿಸಿಲ್ಲ ಎಂದು ಈಶ್ವರಪ್ಪ ಅವರು ಪ್ರತಿಕ್ರಿಯಿಸಿದರು..
ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಈಶ್ವರಪ್ಪ ಭಾರಿ ಮೋಸಗಾರ, ಬಡವರ ಮನೆಗಳನ್ನು ಹಂಚದೆ ಅನ್ಯಾಯ ಮಾಡಿದ್ದಾರೆ. ತಮ್ಮ ಕಾಲದಲ್ಲಿ ಕೈಗೊಂಡ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಮೇಲ್ಕಂಡ ಪ್ರತಿಕ್ರಿಯೆಯನ್ನು ಈಶ್ವರಪ್ಪ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಭಾನು ಪ್ರಕಾಶ್ ಮಾತನಾಡಿ, ಜಾತ್ರೆಯಲ್ಲಿ ರಥವನ್ನು ತಾನು ಎಳೆಯದಿದ್ದರೆ, ಅದು ಮುಂದೆ ಹೋಗುವುದಿಲ್ಲ ಎನ್ನುವ ಭ್ರಮೆ ಹೊಂದಿದ್ದರೆ ಅದು ಮೂರ್ಖತನವಾಗುತ್ತದೆ ಎಂದು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ತಿವಿದರು. ಕಾರ್ಯಕರ್ತರು ಮನಸ್ಸು ಮಾಡಿದರೆ, ಶಿಕಾರಿಪುರದಲ್ಲಿ ಮತ್ತೆ ಬಿಜೆಪಿ ಬೆಳೆಯುವುದು ಕಷ್ಟದ ಮಾತೇನಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ತಾಲ್ಲೂಕು ಅಧ್ಯಕ್ಷ ಕೊಪ್ಪಲು ಮಂಜುನಾಥ್, ರಾ.ಸ. ಸದಸ್ಯ ಆಯನೂರು ಮಂಜುನಾಥ್, ವಿ.ಪ. ಸದಸ್ಯ ಸಿದ್ದರಾಮಣ್ಣ, ದತ್ತಾತ್ರಿ, ನಗರಾಧ್ಯಕ್ಷ ಜಯಣ್ಣ, ತ್ಯಾಗರ್ತಿ ನೀಲಪ್ಪ, ಬಸವರಾಜಪ್ಪ, ಬೆಂಕಿ ಯೋಗೀಶ್, ಕಲ್ಲಪ್ಪ, ಧಾರವಾಡ ಗಿರೀಶ್, ಸಂಗಮೇಶ್ ಮುಂತಾದವರು ಹಾಜರಿದ್ದರು.